
ತಿರುವನಂತಪುರ: ಸಂಚಾರ ನಿಯಮ ಅಂದರೆ ಪ್ರತಿಯೊಬ್ಬರು ಪಾಲಿಸಲೇಬೇಕು. ಎಂದು ಪಾದಚಾರಿಯಾಗಲೀ, ವಾಹನ ಸಂಚಾರಿಗಳೇ ಆಗಲಿ. ಆದರೆ ಇಲ್ಲೊಬ್ಬರು ವೃದ್ಧೆ ಪಾದಚಾರಿ ಮಾರ್ಗದಲ್ಲಿ ಬಂದ ಬೈಕ್ ಸವಾರನಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ.
ಕೇರಳದಲ್ಲಿ ಈ ಘಟನೆ ನಡೆದಿದೆ. ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ತಡೆದು ಹಿಂದೆ ಕಳುಹಿಸಿದ ವೃದ್ಧೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.
‘ಮಾಜಿ ಹಾಸ್ಟೆಲ್ ವಾರ್ಡನ್ ಪ್ರಭಾವತಿ ಕೊಯ್ಯೇರಿ(73) ಅವರು ಗುರುವಾರ ಮಧ್ಯಾಹ್ನ ಕೋಯಿಕ್ಕೋಡ್ನ ಪಾದಚಾರಿ ಮಾರ್ಗವೊಂದರಲ್ಲಿ ತೆರಳುತ್ತಿದ್ದಾಗ, ಎದುರಿನಿಂದ ಬಂದ ದ್ವಿಚಕ್ರ ವಾಹನ ಸವಾರ ಜೋರಾಗಿ ಹಾರ್ನ್ ಹೊಡೆದು ದಾರಿ ಬಿಡುವಂತೆ ಸೂಚಿಸಿದ್ದಾರೆ. ಪಾದಚಾರಿ ರಸ್ತೆಯಲ್ಲಿ ವಾಹನ ಚಲಾಯಿಸುವಂತಿಲ್ಲ ಎಂದು ಪ್ರಭಾವತಿ ತಿಳಿ ಹೇಳಿದ್ದಾರೆ. ಆದರೆ ವಾಹನ ಸವಾರ ದಾರಿ ಬಿಡುವಂತೆ ಪದೇ ಪದೇ ಒತ್ತಾಯಿಸಿದಾಗ ತಮ್ಮ ಕಾಲುಗಳನ್ನು ದಾರಿಗೆ ಅಡ್ಡಲಾಗಿ ಇಟ್ಟರು. ಆದರೆ ಆಗಲೂ ಬೈಕ್ ಸವಾರ ಹಿಂದೆ ಹೋಗದ ಕಾರಣ ಮೊಬೈಲ್ನಲ್ಲಿ ವಿಡಿಯೊ ಮಾಡಲು ಮುಂದಾಗಿದ್ದಾರೆ. ಆ ಬಳಿಕ ಸವಾರ ಹಿಂದಿರುಗಿ ಹೋಗಿರುವ ದೃಶ್ಯಗಳನ್ನು ವಿಡಿಯೊದಲ್ಲಿ ಕಾಣಬಹುದು.
ಈ ಘಟನೆಯನ್ನು ದೂರದಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ವಿಷಯ ತಿಳಿದ ಸಂಚಾರಿ ನಿಗಮದ ಅಧಿಕಾರಿಗಳು ಸಾಮಾಜಿಕ ಪ್ರಜ್ಞೆ ತೋರಿದ ಪ್ರಭಾವತಿ ಅವರನ್ನು ಭೇಟಿ ಮಾಡಿ, ಇಳಿವಯಸ್ಸಿನಲ್ಲೂ ಅವರು ಜವಾಬ್ದಾರಿಯುತವಾಗಿ ನಡೆದುಕೊಂಡಿರುವುದನ್ನು ಕಂಡು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.