ಇಸ್ಕಾನ್ ರೆಸ್ಟೊರಂಟ್ನಲ್ಲಿ ಮಾಂಸ ಬೇಕೆಂದು ಹೊರಗಿಂದ ತಂದಿದ್ದ ಚಿಕನ್ ತಿಂದ ಯುವಕ!
ಬೆಂಗಳೂರು: ಲಂಡನ್ನ ಇಸ್ಕಾನ್ ದೇವಾಲಯದ (ಶ್ರೀಕೃಷ್ಣ ದೇವಾಲಯ) ಗೋವಿಂದ ರೆಸ್ಟೊರಂಟ್ನಲ್ಲಿ ವ್ಯಕ್ತಿಯೊಬ್ಬ ಚಿಕನ್ ಸೇವಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಘಟನೆ ನಡೆದಿದೆ.
ಆಫ್ರಿಕನ್ ಮೂಲದ ಇಂಗ್ಲೆಂಡ್ ನಾಗರಿಕ ಸ್ಯಾಂಜೊ ಎನ್ನುವನೇ ಈ ಕೃತ್ಯದ ಎಸಗಿದವ ಎಂದು ಹೇಳಲಾಗಿದೆ. ಈ ಕುರಿತ ವಿಡಿಯೊ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ.
ಗೋವಿಂದ ರೆಸ್ಟೊರಂಟ್ಗೆ ತೆರಳಿದ್ದ ಯುವಕ ಅಲ್ಲಿನ ಸಿಬ್ಬಂದಿಗೆ, ‘ಇಲ್ಲಿ ಮಾಂಸ ಸಿಗುತ್ತದಾ? ಮಾಂಸ ಬೇಕು‘ ಎಂದು ಕೇಳಿದ್ದಾನೆ. ಇದಕ್ಕೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಇಲ್ಲಿ ಸಸ್ಯಾಹಾರ ಮಾತ್ರ ಎಂದು ಹೇಳಿದ್ದಾರೆ. ಆದರೆ ಆ ಯುವಕ ಕೂಡಲೇ ತನ್ನ ಚೀಲದಲ್ಲಿನ ಕೆಎಫ್ಸಿ ಚಿಕನ್ ಅನ್ನು ತೆರೆದು ಅಲ್ಲಿಯೇ ತಿನ್ನಲು ಶುರು ಮಾಡಿದ್ದಾನೆ. ಇದರಿಂದ ಸಿಬ್ಬಂದಿ ಅವಕ್ಕಾಗಿದ್ದಾರೆ.
ತನ್ನ ಕೃತ್ಯ ಮುಂದುವರೆಸಿದ ಆ ಯುವಕ ಗೋವಿಂದ ರೆಸ್ಟೊರಂಟ್ನಲ್ಲಿ ಮತ್ತೆ ಹುಚ್ಚಾಟ ಪ್ರದರ್ಶಿಸಿದ್ದಾನೆ. ಅಲ್ಲಿದ್ದವರಿಗೆ ನಿಮಗೆ ಚಿಕನ್ ಬೇಕೆ? ಚಿಕನ್ ತಿನ್ನುತ್ತೀರಾ? ಎಂದು ಕೇಳಿದ್ದಾನೆ. ಅಲ್ಲಿದ್ದ ಬಹುತೇಕರು ಯುವಕನ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಳಿಕ ಸಿಬ್ಬಂದಿ ಆ ಯುವಕನನ್ನು ಅಲ್ಲಿಂದ ಹೊರದಬ್ಬಿ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಇನ್ನೂ ಆತನ ಬಂಧನವಾಗಿಲ್ಲ ಎಂದು ತಿಳಿದು ಬಂದಿದೆ.
ಯುವಕನ ವರ್ತನೆಗೆ ಇಂಟರ್ನೆಟ್ನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಬೇರೆಯವರ ಭಾವನೆಗಳಿಗೆ ದಕ್ಕೆ ತರುವುದು ಎಷ್ಟು ಸರಿ? ಇಂಗ್ಲೆಂಡ್ನಲ್ಲಿ ಜನಾಂಗೀಯ ದೌರ್ಜನ್ಯಕ್ಕೆ ಉದಾಹರಣೆ ಇದು ಎಂದು ಕಿಡಿಕಾರಿದ್ದಾರೆ.
ಇದು ನೋಡಲು ಫ್ರ್ಯಾಂಕ್ ವಿಡಿಯೊ ರೀತಿ ಕಂಡರೂ ಇದು ಸಹಿಸಲಸಾಧ್ಯ. ಭಾವನೆಗಳಿಗೆ ಧಕ್ಕೆ ಆಗಿದೆ, ಇದರಿಂದ ಆತ ಸಾಧಿಸಿದ್ದು ಏನು ಎಂದು ಎಕ್ಸ್ನಲ್ಲಿ ಭಕ್ತರೊಬ್ಬರು ಕಿಡಿಕಾರಿದ್ದಾರೆ. ಈ ಕುರಿತು ಎನ್ಡಿಟಿವಿ ವೆಬ್ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.