
ಸಂಜಯ್ ವಿಶ್ವಕರ್ಮ
ಆಹಾರ ಸೇವಿಸಿದಾಗ ಕೆಲವೊಮ್ಮೆ ಹಲ್ಲುಗಳ ಮಧ್ಯೆ ಆಹಾರದ ಚೂರುಗಳು ಸಿಕ್ಕಿಕೊಳ್ಳುತ್ತವೆ. ಆಗ ಪಿನ್ ಅಥವಾ ಮರದ ಕಡ್ಡಿ ಬಳಸಿ ಅದನ್ನು ಹೊರತೆಗೆಯುತ್ತೇವೆ. ಆದರೆ ಮಧ್ಯಪ್ರದೇಶದ ವ್ಯಕ್ತಿಯೊಬ್ಬ ಬಾಯಿಯಲ್ಲಿ ಸಿಲುಕಿದ ಅಡಿಕೆ ಚೂರು ತೆಗೆಯಲು ಪಿನ್ ಬಳಕೆ ಆರಂಭಿಸಿ ಈಗ ತನ್ನ ಬಾಯಿಯಲ್ಲಿ 150ಕ್ಕೂ ಹೆಚ್ಚು ಲೋಹದ ಪಿನ್ಗಳನ್ನು ಇಟ್ಟುಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಸತ್ನಾ ಜಿಲ್ಲೆ ಸಂಜಯ್ ವಿಶ್ವಕರ್ಮ ಎನ್ನುವವರು 45 ವರ್ಷಗಳಿಂದ ತಮ್ಮ ಬಾಯಿಯಲ್ಲಿ ಚೂಪಾದ ಕಬ್ಬಿಣ, ಉಕ್ಕು ಹಾಗೂ ಹಿತ್ತಾಳೆಯ ಪಿನ್ಗಳನ್ನು ಇಟ್ಟುಕೊಂಡಿದ್ದಾರೆ. ಅವರ ಬಾಯಿಯಲ್ಲಿ ಲೋಹಗಳಿಂದ ಯಾವುದೇ ಸೋಂಕು ಅಥವಾ ಅಸ್ವಸ್ಥತೆ ಉಂಟಾಗಿಲ್ಲದಿರುವುದೇ ವಿಶೇಷ.
14 ವರ್ಷದವರಾಗಿದ್ದಾಗ ಸಂಜಯ್ ಅವರಿಗೆ ಈ ಅಭ್ಯಾಸ ಶುರುವಾಯಿತು. ಅವರು ಪಾನ್ ಅಗಿಯುತ್ತಿದ್ದರು. ಆ ವೇಳೆ ಹಲ್ಲುಗಳ ಮಧ್ಯೆ ಅಡಿಕೆಯ ಚೂರುಗಳು ಸಿಕ್ಕಿಕೊಳ್ಳುತ್ತಿದ್ದವು. ಅವುಗಳನ್ನು ತೆಗೆಯಲು ಬೆಂಕಿ ಪೊಟ್ಟಣದ ಕಡ್ಡಿ ಬಳಸುತ್ತಿದ್ದರು. ಆಗಾಗ ಬೆಂಕಿ ಪೊಟ್ಟಣದ ಕಡ್ಡಿ ಮುರಿದು ಹೋಗುತ್ತಿತ್ತು.
ಒಂದು ದಿನ ಕಬ್ಬಿಣದ ಪಿನ್ ಬಳಸಿ ಹಲ್ಲಿನ ಮಧ್ಯೆ ಸಿಲುಕಿಕೊಂಡಿದ್ದ ಅಡಿಕೆ ಚೂರನ್ನು ತೆಗೆದರು. ಅಂದಿನಿಂದ ಆಕಸ್ಮಿಕವಾಗಿ ಬಾಯಿಯಲ್ಲಿಯೇ ಪಿನ್ ಇಟ್ಟುಕೊಳ್ಳುವ ಅಭ್ಯಾಸ ಆರಂಭವಾಗಿದ್ದು, ಹಾಗೆಯೇ ಮುಂದುವರಿದುಕೊಂಡು ಬಂದಿದೆ ಎಂದು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಒಂದು ಪಿನ್ನಿಂದ ಆರಂಭವಾಗಿ ಇಂದು 150ಕ್ಕೂ ಹೆಚ್ಚು ಪಿನ್ಗಳನ್ನು ಬಾಯಿಯಲ್ಲಿ ಇಟ್ಟುಕೊಂಡಿರುವ ಸಂಜಯ್ ಮಾತನಾಡುವುದಲ್ಲದೇ ನೀರು ಮತ್ತು ಆಹಾರವನ್ನೂ ಸೇವಿಸುತ್ತಾರೆ.
ಅವರು ತಮ್ಮ ಬಾಯಿಯಲ್ಲಿ ಪಿನ್ಗಳನ್ನು ಇಟ್ಟುಕೊಂಡಿರುವುದರಿಂದ ದವಡೆಗಾಗಲಿ ಅಥವಾ ಹಲ್ಲಿನ ವಸಡುಗಳಿಗಾಗಲಿ ಹಾನಿಯಾಗಿಲ್ಲ. ಅಲ್ಲದೇ ಅವರು ಅತಿಯಾಗಿ ಸುಣ್ಣ ಮತ್ತು ಪಾನ್ ಸೇವನೆ ಮಾಡುತ್ತಾರೆ. ಆದರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.