ವ್ಯಕ್ತಿಯೊಬ್ಬ ಬೆತ್ತಲೆಯಾಗಿ ರೈಲಿನ ಮಹಿಳಾ ಬೋಗಿಯನ್ನು ಏರಿದ್ದ ಘಟನೆ ಮುಂಬೈನಲ್ಲಿ ಕಳೆದ ಸೋಮವಾರ ಸಂಜೆ ನಡೆದಿದೆ.
ಮುಂಬೈ: ವ್ಯಕ್ತಿಯೊಬ್ಬ ಬೆತ್ತಲೆಯಾಗಿ ರೈಲಿನ ಮಹಿಳಾ ಬೋಗಿಯನ್ನು ಏರಿದ್ದ ಘಟನೆ ಮುಂಬೈನಲ್ಲಿ ಕಳೆದ ಸೋಮವಾರ ಸಂಜೆ ನಡೆದಿದೆ.
ಈ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಛತ್ರಪತಿ ಶಿವಾಜಿ ಟರ್ಮಿನಲ್ನಿಂದ ಕಲ್ಯಾಣ್ಗೆ ತೆರಳುತ್ತಿದ್ದ ಲೋಕಲ್ ಎ.ಸಿ ಟ್ರೈನ್ ಅನ್ನು ಘಾಟಕೋಪರ್ ನಿಲ್ದಾಣದಲ್ಲಿ ಸಂಜೆ ಸುಮಾರು 4 ಗಂಟೆಗೆ ಬೆತ್ತಲೆಯಾಗಿದ್ದ ವ್ಯಕ್ತಿ ಏರಿದ್ದ. ವ್ಯಕ್ತಿ ಏರಿದ್ದ ಬೋಗಿ ಮಹಿಳಾ ಬೋಗಿಯಾಗಿತ್ತು. ಇದರಿಂದ ಆತಂಕಗೊಂಡ ಮಹಿಳೆಯರು ‘ಅವನನ್ನು ಕೆಳಕ್ಕಿಳಿಸಿ, ಇಳಿಸಿ..‘ ಎಂದು ಚೀರಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಕೂಡಲೇ ಸ್ಥಳಕ್ಕೆ ಡೌಡಾಯಿಸಿದ ರೈಲು ಟಿಕೆಟ್ ಪರಿವೀಕ್ಷಕ ಬೆತ್ತಲೆಯಾಗಿದ್ದ ವ್ಯಕ್ತಿಯನ್ನು ಬೆದರಿಸಿ ರೈಲಿನಿಂದ ಕೆಳಕ್ಕಿಳಿಸಿದ್ದಾರೆ. ನಂತರ ರೈಲು ಹೊರಟಿದೆ.
ರೈಲು ಏರಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು ಆತನನ್ನು ವಿಕಾಸ್ ಯಾದವ್ ಎಂದು ಗುರುತಿಸಲಾಗಿದೆ. ಆರ್ಪಿಎಫ್ ಪೊಲೀಸರು ಆತನನ್ನು ಬಂಧಿಸಿ ಆತನಿಗೆ ಬಟ್ಟೆ ಒದಗಿಸಿ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಮುಂಬೈ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.