
ದೊರೈ
ಬೆಂಗಳೂರು: ತಮಿಳುನಾಡಿನ ತಿರುವರೂರು ಜಿಲ್ಲೆಯಲ್ಲಿ ಅಪರೂಪದ ಮಾನವೀಯ ಪ್ರಕರಣವೊಂದು ನಡೆದಿರುವುದು ವರದಿಯಾಗಿದೆ.
ಮಹಿಳೆಯೊಬ್ಬರು ಕಳೆದುಕೊಂಡಿದ್ದ 160 ಗ್ರಾಂ ಚಿನ್ನ ಹಾಗೂ 1 ಕೆ.ಜಿ ಬೆಳ್ಳಿಯನ್ನು ಪೌರ ಕಾರ್ಮಿಕ ವ್ಯಕ್ತಿಯೊಬ್ಬರು ಪೊಲೀಸರ ಮುಖಾಂತರ ಆ ಮಹಿಳೆಗೆ ತಲುಪಿಸಿದ್ದಾರೆ.
ತಿರುವರೂರು ನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕ ಆಗಿರುವ ಎನ್ ದೊರೈ ಎನ್ನುವ ವ್ಯಕ್ತಿಯೇ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರ ಪ್ರಾಮಾಣಿಕತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮಗಳ ಮದುವೆಗೆ ಚೆನ್ನೈನ ರಾಧಾಕೃಷ್ಣನ್ ಎನ್ನುವರ ಕುಟುಂಬದ ಮಹಿಳೆ 160 ಗ್ರಾಂನಷ್ಟು ಚಿನ್ನ ಹಾಗೂ 1 ಕೆ.ಜಿ ಬೆಳ್ಳಿ ಸಾಮಾನುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು.
ಚೆನ್ನೈನಿಂದ ತಿರುವರೂರಿಗೆ ಬಂದಿದ್ದ ಕುಟುಂಬ ಬ್ಯಾಗ್ನಲ್ಲಿಟ್ಟಿದ್ದ ಚಿನ್ನವನ್ನು ಮದುವೆ ಮನೆಯಿಂದ ಕಳೆದುಕೊಂಡಿತ್ತು. ಆಕಸ್ಮಾತಾಗಿ ಚಿನ್ನ ಹಾಗೂ ಬೆಳ್ಳಿ ಇದ್ದ ಬ್ಯಾಗು ದೊರೈ ಅವರಿಗೆ ಕಾಲುವೆ ಪಕ್ಕ ಸಿಕ್ಕಿತ್ತು. ದೊರೈ ಅವರು ಕೂಡಲೇ ಪೊಲೀಸರನ್ನು ಸಂಪರ್ಕಿಸಿ ಬೆಲೆ ಬಾಳುವ ಆಭರಣಗಳನ್ನು ಹಿಂದಿರುಗಿಸಿದ್ದಾರೆ.
ಚಿನ್ನ ಹಾಗೂ ಬೆಳ್ಳಿ ಇದ್ದ ಬ್ಯಾಗನ್ನು ಕಳ್ಳರು ಯಾರಾದರೂ ಕದ್ದು ಅಲ್ಲಿ ಬಿಟ್ಟು ಹೋದರಾ ಅಥವಾ ಆಕಸ್ಮಿಕವಾಗಿ ಬ್ಯಾಗು ಕಾಲುವೆ ಬಳಿ ಬಿದ್ದಿತ್ತಾ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಈ ನಾಡು ತಮಿಳು ವೆಬ್ಸೈಟ್ ವರದಿ ಮಾಡಿದೆ.
ಚಿನ್ನ ಕಳೆದುಕೊಂಡಿದ್ದ ಮಹಿಳೆ, ಪೊಲೀಸರು ಹಾಗೂ ತಿರುವರೂರು ನಗರ ಪಾಲಿಕೆಯ ಸಿಬ್ಬಂದಿ ದೊರೈ ಮತ್ತು ಅವರ ಕುಟುಂಬದವರನ್ನು ಸನ್ಮಾನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.