ರೈಲಿನಲ್ಲಿ ಜಲಪಾತ! ನಿಜಾಮುದ್ದೀನ್ ಎಕ್ಸ್ಪ್ರೆಸ್ ಬೋಗಿಯಲ್ಲಿ ನೀರು ಸೋರಿಕೆ
ಜಬಲ್ಪುರ, ಮಧ್ಯಪ್ರದೇಶ: ‘ಮಧ್ಯಪ್ರದೇಶದ ಜಬಲ್ಪುರ– ನವದೆಹಲಿ ನಡುವೆ ಸಂಚರಿಸುವ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿನ ಬೋಗಿಯೊಂದರ ಒಳಭಾಗದಲ್ಲಿ ನೀರು ಸೋರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
‘ಸಮಸ್ಯೆ ಗಮನಕ್ಕೆ ಬಂದ ತಕ್ಷಣವೇ ದೂರು ಸ್ವೀಕರಿಸಿದ್ದು, ಮೇಲುಸ್ತುವಾರಿ ವಹಿಸುವಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸಲಾಗಿದೆ’ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರಿಗಾಗಿ ‘ರೈಲಿನಲ್ಲಿ ಜಲಪಾತ ಸೃಷ್ಟಿ’ ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ, ವಿರೋಧ ಪಕ್ಷವಾದ ಕಾಂಗ್ರೆಸ್ ‘ಎಕ್ಸ್’ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
‘ನಿಜಾಮುದ್ದೀನ್ ಎಕ್ಸ್ಪ್ರೆಸ್ (22181) ರೈಲಿನ ಬೋಗಿಯಲ್ಲಿ ನೀರು ಸೋರಿಕೆಯಾಗಿರುವ ಮಾಹಿತಿ ಲಭ್ಯವಾಗಿದೆ. ಬೋಗಿಯ ಮೇಲ್ಭಾಗದಿಂದಲೇ ನೀರು ಸೋರುತ್ತಿದೆ’ ಎಂದು ಪಶ್ಚಿಮ ಮಧ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹರ್ಷಿತ್ ಶ್ರೀ ವಾತ್ಸವ ಅವರು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ದಾಮೋಹ್ (ಮಧ್ಯಪ್ರದೇಶ) ಹಾಗೂ ಝಾನ್ಸಿ (ಉತ್ತರಪ್ರದೇಶ) ನಿಲ್ದಾಣಗಳಲ್ಲಿ ಅಧಿಕಾರಿಗಳು ದೂರಿಗೆ ಸ್ಪಂದಿಸಿದರು. ನವದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣ ತಲುಪಿದ ಬಳಿಕ ರಿಪೇರಿ ಮಾಡಲಾಗುವುದು. ಕೆಲಸ ಮುಗಿಯುವವರೆಗೂ ಆ ಬೋಗಿಗಳನ್ನು ಜನರ ಸೇವೆಗೆ ಬಳಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಇದಕ್ಕೆ ಕಾರಣರಾದ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು’ ಎಂದರು. ಇನ್ನೊಂದೆಡೆ ಈ ವಿಡಿಯೊ ಶೇರ್ ಮಾಡಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.