ADVERTISEMENT

ಸೌಂದರ್ಯಕ್ಕೂ ಸೈ ಬಾಳೆಹಣ್ಣು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 19:30 IST
Last Updated 1 ನವೆಂಬರ್ 2019, 19:30 IST
   

ಡಯೆಟ್, ಫಿಟನೆಸ್ ಇಂದಿನ ಯುವಜನತೆಯ ನೆಚ್ಚಿನ ದಿನಚರಿ. ದೇಹದಲ್ಲಿ ಅರಿಯದೇ ಸೇರುವ ಬೊಜ್ಜು ಇಂದಿನ ಯುವಜನರನ್ನು ಕಂಗೆಡಿಸುತ್ತದೆ. ಹಾಗಾಗಿ ಬೊಜ್ಜು ಕರಗಿಸಲು ಹರಸಾಹಸ ಮಾಡುತ್ತಾರೆ. ಆದರೆ ದೈಹಿಕ ಕಸರತ್ತಿನೊಂದಿಗೆ ಬಾಳೆಹಣ್ಣು ತಿಂದರೆ ದೇಹದ ತೂಕ ಕಡಿಮೆಯಾಗುತ್ತದೆ. ಜೊತೆಗೆ ದೇಹವು ಫಿಟ್ ಆಗಿರಲು ಇದು ಸಹಾಯ ಮಾಡುತ್ತದೆ.

ಬಾಳೆಹಣ್ಣು ರಾಸಾಯನಿಕಮುಕ್ತ ಹಾಗೂ ಕೊಬ್ಬು, ಸೋಡಿಯಂ ಮುಕ್ತವಾಗಿದೆ. ಹಾಗಾಗಿ ಇದನ್ನು ಕ್ರೀಡಾಪಟುಗಳು ಹೆಚ್ಚಾಗಿ ಸೇವಿಸುತ್ತಾರೆ. ಪೌಷ್ಟಿಕ ತಜ್ಞರು ಕೂಡ ಬಾಳೆಹಣ್ಣನ್ನೇ ತಿನ್ನಲು ಸೂಚಿಸುತ್ತಾರೆ. ಈ ಹಣ್ಣು ಬೊಜ್ಜನ್ನು ಕರಗಿಸಿ ದೇಹವು ಆರೋಗ್ಯವಾಗಿರುವಂತೆ ಮಾಡುತ್ತದೆ. ಜತೆಗೆ ಹಸಿವನ್ನು ತಡೆದು ದೇಹಕ್ಕೆ ಶಕ್ತಿ ನೀಡುತ್ತದೆ.

ಇದನ್ನು ಸ್ಲಿಮ್ಮಿಂಗ್ ಆಹಾರ ಎಂದೂ ಕರೆಯುತ್ತಾರೆ. ಇದು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದರೂ ಅವುಗಳ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆಯಾಗಿರುತ್ತದೆ. ಇದರಲ್ಲಿರುವ ನಾರಿನಾಂಶವು ಹಸಿವನ್ನು ನಿಯಂತ್ರಿಸುತ್ತದೆ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳುವವರಿಗೆ ವೈದ್ಯರು ಊಟ ಕಡಿಮೆ ಮಾಡಿ ಬಾಳೆಹಣ್ಣು ಸೇವಿಸಿ ಎಂದು ಸಲಹೆ ನೀಡುತ್ತಾರೆ.

ADVERTISEMENT

ಪೊಟ್ಯಾಶಿಯಂ
ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಖನಿಜವಿದ್ದು, ಈ ಖನಿಜವು ದೇಹದಲ್ಲಿರುವ ದ್ರವದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ದೇಹಕ್ಕೆ ವಯಸ್ಸು ಹೆಚ್ಚಿದಂತೆ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುತ್ತವೆ. ಅಂತಹ ಅಪಾಯವನ್ನು ಕಡಿಮೆ ಮಾಡುತ್ತದೆ.

ಚರ್ಮದ ಕಾಂತಿಗೆ ಸೂಕ್ತ
ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ಇದು ಚರ್ಮದ ನೈಸರ್ಗಿಕ ಮತ್ತು ತಾರುಣ್ಯದ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಚರ್ಮವು ಸುಂದರವಾಗಿ ಕಾಂತಿಯಿಂದ ಕಾಣುವಂತೆ ಮಾಡಲು ಮಾಗಿದ ಬಾಳೆಹಣ್ಣು ಸೇವನೆ ಸೂಕ್ತವಾಗಿದೆ. ಒರಟು ಚರ್ಮವನ್ನು ನಯವಾಗಿಸುತ್ತದೆ. ಚರ್ಮಕ್ಕೆ ಅಂಟಿರುವ ಸುಕ್ಕುಗಳನ್ನು ನಾಶ ಮಾಡುತ್ತದೆ. ಸೊಂಟದ ಬೊಜ್ಜು ಕಡಿಮೆಯಾಗಲು ಹೆಚ್ಚು ಸಹಾಯಕಾರಿ.

ಒಂದು ಬಾಳೆಹಣ್ಣುನ್ನು ಹಿಸುಕಿ ಅದಕ್ಕೆ ಎರಡು ಚಮಚ ನಿಂಬೆರಸ ಸೇರಿಸಿ ಚರ್ಮಕ್ಕೆ ಲೇಪಿಸಿ 10 ರಿಂದ 15 ನಿಮಿಷದ ನಂತರ ತಂಪಾದ ನೀರಿನಿಂದ ತೊಳೆದು ಒಣಗಿಸಿದರೆ ಚರ್ಮದ ಮೇಲಿರುವ ಕಪ್ಪು ಕಲೆಗಳು, ಗುಳ್ಳೆಗಳು ಕಡಿಮೆಯಾಗುತ್ತವೆ.

ಮಾಗಿದ ಬಾಳೆಹಣ್ಣಿನಿಂದ ಪೇಸ್ಟ್ ತಯಾರಿಸಿ ಅದಕ್ಕೆ 1 ಚಮಚ ಜೇನುತುಪ್ಪವನ್ನು ಸೇರಿಸಿ ಚರ್ಮಕ್ಕೆ ಲೇಪಿಸಿ 15 ರಿಂದ 20 ನಿಮಿಷಗಳ ಕಾಲ ಬಿಡಿ. ಇದು ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಚರ್ಮವನ್ನು ಹಗುರಗೊಳಿಸುತ್ತದೆ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಕಣ್ಣಿನ ಸಮಸ್ಯೆಗೆ..
ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ಕಣ್ಣುಗಳ ಕೆಳಗಿರುವ ರಕ್ತನಾಳಗಳನ್ನು ಶಾಂತಗೊಳಿಸುವುದರ ಜತೆಗೆ ಕಣ್ಣಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾಗಿದ ಹಣ್ಣನ್ನು ಹಿಸುಕಿ ಕಣ್ಣಿನ ಸುತ್ತಲು ಲೇಪಿಸಿ 15 ರಿಂದ 20 ನಿಮಿಷಗಳ ಕಾಲ ಬಿಟ್ಟು ತೊಳೆದರೆ ಕಣ್ಣಿನ ಸಮಸ್ಯೆಗಳು ಕಡಿಮೆಯಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.