ನವದೆಹಲಿ: ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಖಾತೆಗಳಿಗಿದ್ದ ದೃಢೀಕರಣದ ಮಾನ್ಯತೆ ಅಥವಾ ಬ್ಲೂ ಟಿಕ್ ಅನ್ನು ತೆಗೆದು ಹಾಕಿದ್ದಕ್ಕೆ ಟ್ವಿಟರ್ ಕಾರಣ ನೀಡಿದೆ.
ಶನಿವಾರ ವೆಂಕಯ್ಯ ನಾಯ್ಡು ಅವರ ಟ್ವಿಟರ್ ಖಾತೆಯ ಬ್ಲೂ ಟಿಕ್ ತೆಗೆದಿದ್ದ ಟ್ವಿಟರ್, ನೆಟ್ಟಿಗರ ಆಕ್ರೋಶದ ನಂತರ ಅದನ್ನು ಮರುಸ್ಥಾಪಿಸಿತ್ತು. ಆನಂತರ ಆರ್ಎಸ್ಎಸ್ ವರಿಷ್ಟ ಮೋಹನ್ ಭಾಗವತ್ ಮತ್ತು ಸಂಘದ ಸುರೇಶ್ ಜೋಷಿ, ಅರುಣ್ ಕುಮಾರ್ ಖಾತೆಗಳ ಬ್ಲೂಟಿಕ್ಗಳನ್ನೂ ತೆಗೆದು ಹಾಕಿತ್ತು.
ಇದಾದ ನಂತರ ಟ್ವಿಟರ್ನಲ್ಲಿ ಟ್ವಿಟರ್ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.#BanTwitterInIndia ಎಂಬ ಹ್ಯಾಷ್ಟ್ಯಾಗ್ ಕೂಡ ಟ್ರೆಂಡ್ ಆಗಿತ್ತು. ಬಳಿಕ ಮೋಹನ್ ಭಾಗವತ್ ಸೇರಿದಂತೆ ಹಲವರ ಬ್ಲೂ ಟಿಕ್ ಅನ್ನು ಟ್ವಿಟರ್ ಮರುಸ್ಥಾಪಿಸಿದೆ.
ಬ್ಲೂ ಟಿಕ್ ತೆಗೆದು ಹಾಕಿದ್ದಕ್ಕೆ ಕಾರಣಗಳೇನು?
ಗಣ್ಯರ ಟ್ವಿಟರ್ ಖಾತೆಗಳ ಬ್ಲೂ ಟಿಕ್ ತೆಗೆದು ಹಾಕಿದ್ದಕ್ಕೆ ಸಂಸ್ಥೆ ಕಾರಣ ನೀಡಿದೆ. ಆರು ತಿಂಗಳವರೆಗೆ ಖಾತೆಯೂ ಅಪೂರ್ಣವಾಗಿಯೂ, ನಿಷ್ಕ್ರಿಯವಾಗಿಯೂ ಉಳಿದಿದ್ದರೆ ಅಂಥ ಖಾತೆಗಳ ಬ್ಲೂ ಟಿಕ್ ಮತ್ತು ವೇರಿಫೈಡ್ ಮಾನ್ಯತೆ ತಾನಾಗಿಯೇ ಹೋಗಲಿದೆ. ಇದು ಸಂಸ್ಥೆಯ ನೀತಿಯೂ ಆಗಿದೆ ಎಂದು ಟ್ವಿಟರ್ ಹೇಳಿದೆ.
ಇದನ್ನೂ ಓದಿ:ಟ್ವಿಟರ್ ವಿರುದ್ಧ ತಿರುಗಿ ಬೀಳಲು ನಾನಾ ಕಾರಣಗಳು
ನಿಷ್ಕ್ರಿಯತೆಯು ಖಾತೆಗೆ ಲಾಗಿನ್ ಆಗುವುದರ ಮೇಲೆ ನಿರ್ಧಾರವಾಗಲಿದೆ. ಖಾತೆಯನ್ನು ಸಕ್ರಿಯವಾಗಿಡಲು ಕನಿಷ್ಠ 6 ತಿಂಗಳಿಗೊಮ್ಮೆ ಖಾತೆಗೆ ಲಾಗ್ ಇನ್ ಆಗಬೇಕು.
ಬ್ಲೂ ಟಿಕ್ ಹೊಂದಿರುವವರು ತಮ್ಮ ಖಾತೆ ಪೂರ್ಣಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಿಯಮಗಳ ಪ್ರಕಾರ, ಖಾತೆಗಳು ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಪ್ರೊಫೈಲ್ ಇಮೇಜ್ ಮತ್ತು ಖಾತೆ ಹೆಸರನ್ನು ಒಳಗೊಂಡಿರಬೇಕು. ಇದೆಲ್ಲವೂ ಇದ್ದರಷ್ಟೇ ಖಾತೆ ಪರಿಪೂರ್ಣ ಆಗಲಿದೆ.
ಟ್ವಿಟರ್ ತನ್ನ ಈ ನೀತಿಯ ಆಧಾರದಲ್ಲಿ ಎಷ್ಟು ಖಾತೆಗಳ ಬ್ಲೂ ಟಿಕ್ ಅನ್ನು ತೆಗೆದು ಹಾಕಿದೆ ಎಂಬುದರ ಕುರಿತು ಮಾಹಿತಿ ನೀಡಿಲ್ಲ.
ಬ್ಲೂ ಟಿಕ್ನ ಅರ್ಥವೇನು?
ಸಾರ್ವಜನಿಕ ಹಿತಾಸಕ್ತಿಯ ಖಾತೆಗಳನ್ನುನೀಲಿ ಬ್ಯಾಡ್ಜ್ ಖಚಿತಪಡಿಸುತ್ತದೆ. ಇದನ್ನು ಪಡೆಯಲು ಖಾತೆದಾರರು ದೃಢೀಕೃತ ಮಾಹಿತಿ ಪೂರೈಸಬೇಕು.
ಇವುಗಳನ್ನೂಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.