ನವದೆಹಲಿ: ಭಾರಿ ಸಂಪತ್ತು ಗಳಿಕೆ ವಿಚಾರಕ್ಕೆ ಸಂಬಂಧಿಸಿದ ತನಿಖೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಅಯೋಧ್ಯೆ ವಿವಾದದ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ ಎಂದು ಬಿಜೆಪಿಯ ಮಾಜಿ ಸಂಸದ ರಾಮ್ ವಿಲಾಸ್ ವೇದಾಂತಿ ಆರೋಪಿಸಿದ್ದಾರೆ.
‘ಮಧ್ಯಸ್ಥಿಕೆ ವಹಿಸಲು ಶ್ರೀ ಶ್ರೀ ರವಿಶಂಕರ್ ಯಾರು? ವಿದೇಶಿ ದೇಣಿಗೆ ಪಡೆದುಕೊಂಡು ಸ್ವಯಂಸೇವಾ ಸಂಸ್ಥೆ ನಡೆಸುವುದನ್ನು ಅವರು ಮುಂದುವರಿಸಲಿ. ಅವರು ಭಾರಿ ಸಂಪತ್ತು ಗಳಿಸಿಕೊಂಡಿದ್ದಾರೆ ಎಂಬುದು ನನ್ನ ಅನಿಸಿಕೆ. ತನಿಖೆಯಿಂದ ತಪ್ಪಿಸಿಕೊಳ್ಳುವುದುಕ್ಕಾಗಿ ರಾಮ ಮಂದಿರ ವಿಷಯದಲ್ಲಿ ಮೂಗುತೂರಿಸುತ್ತಿದ್ದಾರೆ’ ಎಂದು ವೇದಾಂತಿ ಹೇಳಿದ್ದನ್ನು ಎಎನ್ಐ ವರದಿ ಮಾಡಿದೆ. ರಾಮ ಮಂದಿರ ಚಳವಳಿಯಲ್ಲಿ ಒಬ್ಬರಾಗಿರುವ ವೇದಾಂತಿ ಅವರು ಶ್ರೀ ಶ್ರೀ ರವಿಶಂಕರ್ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ತಳ್ಳಿಹಾಕಿದ್ದಾರೆ.
ಶ್ರೀ ಶ್ರೀ ರವಿಶಂಕರ್ ಅವರು ಗುರುವಾರ ಅಯೋಧ್ಯೆಗೆ ಭೇಟಿ ನೀಡಿದ್ದರು. ಅದಕ್ಕೂ ಮುನ್ನವೇ ವೇದಾಂತಿ ಈ ಸಂಶಯ ವ್ಯಕ್ತಪಡಿಸಿದ್ದರು.
ಶ್ರೀ ಶ್ರೀ ರವಿಶಂಕರ್ ಮಧ್ಯಸ್ಥಿಕೆ ವಹಿಸುವುದನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ವಿಶ್ವ ಹಿಂದೂ ಪರಿಷತ್ ಖಂಡಿಸಿದ್ದವು.
‘ನಾನು ಏಕತೆಯನ್ನು, ಸ್ನೇಹಶೀಲತೆಯನ್ನು ಬಯಸುತ್ತೇನೆ’ ಎಂದು ಅಯೋಧ್ಯೆ ವಿಷಯಕ್ಕೆ ಸಂಬಂಧಿಸಿ ಶ್ರೀ ಶ್ರೀ ರವಿಶಂಕರ್ ಅವರು ಬುಧವಾರ ಹೇಳಿದ್ದರು.
ಇದನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.