ಮುಂಬೈ: ಇಲ್ಲಿನ ಶಿವಾಜಿ ಉದ್ಯಾನವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಇಂಡಿಯಾ‘ ಮೈತ್ರಿಕೂಟದ ಸಮಾವೇಶವು ಶಿವಸೇನಾ ಪಕ್ಷಕ್ಕೆ ಕಪ್ಪು ದಿನವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದರು.
ಭಾನುವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶವನ್ನು ಉದ್ದೇಶಿಸಿ ಭಾಷಣ ಮಾಡಲು ಬಾಳಾಸಾಹೇಬ್ ಠಾಕ್ರೆ ಅವರು ಶಿವಾಜಿ ಉದ್ಯಾನವನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಸಾವರ್ಕರ್ ಅವರನ್ನು ಅವಮಾನಿಸುವ ರಾಹುಲ್ ಗಾಂಧಿ ಅವರ ಜೊತೆಗೆ ಉದ್ಧವ್ ಠಾಕ್ರೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಮೂಲಕ ಶಿವಸೇನಾ ಪಕ್ಷಕ್ಕೆ ಇದು ಕಪ್ಪು ದಿನವಾಗಿದೆ’ ಎಂದು ಹೇಳಿದರು.
ಬಾಳಾಸಾಹೇಬ್ ಠಾಕ್ರೆ ಅವರಿಗೆ ಶಿವಸೇನಾ ಪಕ್ಷವು ಕಾಂಗ್ರೆಸ್ ಆಗುವುದು ಬೇಡವಾಗಿತ್ತು ಎಂಬ ಶಿಂದೆ ಬಣದ ಹೇಳಿಕೆಗೆ, ಬಾಳಾ ಸಾಹೇಬ್ ಠಾಕ್ರೆ ಅವರಿಗೆ ಶಿವಸೇನಾ ಪಕ್ಷವು ಬಿಜೆಪಿ ಆಗುವುದೂ ಬೇಕಿರಲಿಲ್ಲ ಎಂದು ಶಿವಸೇನಾ (ಉದ್ಧವ್ ಬಣ) ಮುಖಂಡ ಸಚಿನ್ ಅಹಿರ್ ತಿರುಗೇಟು ನೀಡಿದ್ದಾರೆ.
ಭಾರತ್ ಜೋಡೊ ನ್ಯಾಯಯಾತ್ರೆಯ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರು, ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಅಲ್ಲದೆ, ಶಿವಸೇನಾ ಸಂಸ್ಥಾಪಕ ಬಾಳಾಠಾಕ್ರೆ ಸ್ಮಾರಕಕ್ಕೆ ಭೇಟಿ ನೀಡಿ, ಗೌರವ ನಮನ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.