ADVERTISEMENT

ರೈತರ ಪರ ವಾಜಪೇಯಿ ಭಾಷಣ: ಹಳೆಯ ವಿಡಿಯೊ ಹಂಚಿಕೊಂಡ ಬಿಜೆಪಿ ಮುಖಂಡ ವರುಣ್ ಗಾಂಧಿ

ಪಿಟಿಐ
Published 14 ಅಕ್ಟೋಬರ್ 2021, 9:39 IST
Last Updated 14 ಅಕ್ಟೋಬರ್ 2021, 9:39 IST
ರೈತರ ಪರ ವಾಜಪೇಯಿ ಭಾಷಣ: ಹಳೆಯ ವಿಡಿಯೊ ಹಂಚಿಕೊಂಡ ಬಿಜೆಪಿ ಮುಖಂಡ ವರುಣ್ ಗಾಂಧಿ
ರೈತರ ಪರ ವಾಜಪೇಯಿ ಭಾಷಣ: ಹಳೆಯ ವಿಡಿಯೊ ಹಂಚಿಕೊಂಡ ಬಿಜೆಪಿ ಮುಖಂಡ ವರುಣ್ ಗಾಂಧಿ   

ನವದೆಹಲಿ: 1980ರಲ್ಲಿ ರೈತರಿಗೆ ಬೆಂಬಲ ಸೂಚಿಸುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾಷಣದ ತುಣುಕನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಗುರುವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ರೈತರ ಮೇಲೆ ದಬ್ಬಾಳಿಕೆ ನಡೆಸದಂತೆ ಅಂದಿನ ಇಂದಿರಾಗಾಂಧಿ ಸರ್ಕಾರಕ್ಕೆ ಎಚ್ಚರಿಸಿದ್ದ ವಾಜಪೇಯಿ ರೈತರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದರು.

ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆಗಳು ವೈಫಲ್ಯ ಕಂಡಿವೆ.

ಈ ನಡುವೆ ರೈತರ ಬೆಂಬಲಕ್ಕಾಗಿ ಮಾಜಿ ಪ್ರಧಾನಿ ವಾಜಪೇಯಿ ಭಾಷಣದ ತುಣುಕನ್ನು ಹಂಚಿರುವ ವರುಣ್ ಗಾಂಧಿ, ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವರುಣ್ ಗಾಂಧಿ, 'ವಿಶಾಲ ಹೃದಯದ ನಾಯಕನ ಜಾಣ್ಮೆಯ ಮಾತುಗಳು' ಎಂದು ಉಲ್ಲೇಖಿಸಿದ್ದಾರೆ.

ವಿಡಿಯೊ ತುಣುಕಿನಲ್ಲಿ ರೈತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ವಾಜಪೇಯಿ, ಹೆದರದಂತೆ ರೈತರಿಗೆ ಧೈರ್ಯ ತುಂಬಿದ್ದಾರೆ.

'ಸರ್ಕಾರವು ರೈತರನ್ನು ದಮನಿಸಿದರೆ, ಕಾನೂನುಗಳನ್ನು ದುರುಪಯೋಗಪಡಿಸಿ ಶಾಂತಿಯುತ ಆಂದೋಲನವನ್ನು ನಿಗ್ರಹಿಸಿದರೆ ನಾವು ರೈತರ ಹೋರಾಟದೊಂದಿಗೆ ಸೇರಲು ಮತ್ತು ಅವರೊಂದಿಗೆ ನಿಲ್ಲಲು ಹಿಂಜರಿಯುವುದಿಲ್ಲ' ಎಂದು ವಾಜಪೇಯಿ ಎಚ್ಚರಿಸಿದ್ದರು.

ಲಂಖಿಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೈತರಿಗೆ ಬೆಂಬಲ ಸೂಚಿಸಿರುವ ವರುಣ್ ಗಾಂಧಿ, ತಪ್ಪಿತ್ತಸ್ಥರನ್ನು ಬಂಧಿಸಿ ಶಿಕ್ಷೆ ವಿಧಿಸುವಂತೆ ಬೇಡಿಕೆಯಿರಿಸಿದ್ದರು. ಇದು ಬಿಜೆಪಿಯಲ್ಲಿ ಇರಿಸು ಮುರಿಸು ಉಂಟು ಮಾಡಿತ್ತು. ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ವರುಣ್ ಗಾಂಧಿ ಅವರನ್ನು ಕೈಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.