ADVERTISEMENT

ಹತ್ತಿ ಎಲೆ ಕೆಂಪಾಗುವಿಕೆ: ರೈತರಿಗೆ ಸಲಹೆ

ಬೆಳೆಗಳಿಗೆ ರೋಗ; ಕೃಷಿ ಅಧಿಕಾರಿಗಳಿಂದ ನಿರ್ವಹಣೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 5:09 IST
Last Updated 29 ಸೆಪ್ಟೆಂಬರ್ 2022, 5:09 IST
ಕೆಂಪಾಗಿರುವ ಹತ್ತಿ ಎಲೆ
ಕೆಂಪಾಗಿರುವ ಹತ್ತಿ ಎಲೆ   

ಯಾದಗಿರಿ: ಜಿಲ್ಲೆಯಲ್ಲಿ ಸುಮಾರು 1,77,684 ಹೇಕ್ಟರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದು ಬೆಳೆ ಹೂ ಬಿಡುವ ಹಾಗೂ ಕಾಯಿ ಕಟ್ಟುವ ಹಂತದಲ್ಲಿದೆ. ಮಳೆಯಿಂದ ಮಣ್ಣಿನ ತೇವಾಂಶ ಹೆಚ್ಚಿದ ಕಾರಣ, ಎಲೆ ಕೆಂಪಾಗುವಿಕೆ ರೋಗದ ಬಾಧೆ ಕಂಡು ಬರುತ್ತಿದೆ. ರೋಗದ ಲಕ್ಷಣ ಮತ್ತು ನಿರ್ವಹಣಾ ಕ್ರಮ ವಹಿಸಿ ಎಂದು ಜಂಟಿ ಕೃಷಿ ನಿರ್ದೇಶಕ ಆಬಿದ್‌ ತಿಳಿಸಿದ್ದಾರೆ.

ಹತ್ತಿ ಸಸಿಯ ತುದಿ ಭಾಗದಲ್ಲಿ ಅಗಲವಾಗಿ ಪ್ರತಿ ಬೆಳವಣೆಗೆ ಹೊಂದಿದ ಎಲೆಯಲ್ಲಿ ತಾಮ್ರದ ಬಣ್ಣ ಅಥವಾ ಕೆಂಪು ಬಣ್ಣ ಗೋಚರಿಸುವುದು.

ಸಸಿಯ ಮೇಲ್ಭಾಗದಲ್ಲಿ ಒರಟಾದ, ಉಬ್ಬು ತಗ್ಗುಗಳಿಂದ ಕೂಡಿದ ಎಲೆಗಳು, ಎಲೆಗಳ ನರಗಳ ನಡುವಿನ ಭಾಗವು ಉಬ್ಬಿದಂತಿದ್ದು, ಎಲೆಗಳು ಬಿರುಸಾಗಿ, ಕಾಣುವವು, ಕಾಂಡವು ಕೆಂಪು ಬಣ್ಣಕ್ಕೆ ತಿರುಗುವುದು.

ADVERTISEMENT

ಬಾಧಿತ ಸಸಿಯ ಎಲೆ, ಕಾಂಡ ಭಾಗಗಳು ಕೆಂಪಾಗಿ ದಿಢೀರನೆ ಸೊರಗುವವು. ಇದರಿಂದ ಬೆಳವಣಿಗೆ ಕಂಠಿತವಾಗುವುದು.

ನಿರ್ವಹಣಾ ಕ್ರಮಗಳು: ಮಣ್ಣಿನ ಪರೀಕ್ಷೆಗನುಗುಣವಾಗಿ, ಲಘು ಪೋಷಕಾಂಶಗಳ ಕೊರತೆ ಇರುವ ಮಣ್ಣಿಗೆ ಬಿತ್ತನೆಗೆ ಮುಂಚೆ ಪ್ರತಿ ಹೆಕ್ಟೇರ್‌ಗೆ 25 ಕಿ.ಗ್ರಾಂ. ಮೆಗ್ನೇಶಿಯಂ ಸಲ್ಫೇಟ್ (MgSo4) ಜೊತೆಗೆ ತಲಾ 10 ಕಿ.ಗ್ರಾಂ. ಜಿಂಕ್ ಸಲ್ಫೇಟ್ ಹಾಗೂ ಕಬ್ಬಿಣದ ಸಲ್ಫೇಟ್‌ನ್ನು ಒದಗಿಸುವುದರಿಂದ ಈ ನ್ಯೂನ್ಯತೆಯನ್ನು ಕಡಿಮೆ ಮಾಡಬಹುದು.

ಬಿತ್ತನೆಯಾದ 90 ಹಾಗೂ 110 ದಿನಗಳ ನಂತರ 10 ಗ್ರಾಂ. ಮೆಗ್ನೀಶಿಯಂ ಸಲ್ಫೇಟನ್ನು 1 ಲೀಟರ್ ನೀರಿಗೆ ಮಿಶ್ರಣ ಮಾಡಿ ಎಲೆಗಳ ಮೇಲೆ ಸಿಂಪಡಿಸುವುದು.

ಹತ್ತಿ ಬಿತ್ತನೆಯಾದ 60 ದಿನಗಳ ನಂತರ ಹಾಗೂ ಚಳಿಗಾಲ ಪ್ರಾರಂಭಕ್ಕೆ ಮುಂಚಿತವಾಗಿ ಪ್ರತಿ 15 ದಿನಗಳಿಗೊಮ್ಮೆ ಶೇ 2ರ ಯೂರಿಯಾ ಅಥವಾ ಡಿಎಪಿ ಜೊತೆಗೆ ಶೇ 2ರ ಪೊಟ್ಯಾಶಿಯಂ ನೈಟ್ರೇಟ್ ಅಥವಾ ಶೇ1ರ ಮ್ಯುರೆಟ್ ಆಫ್ ಪೊಟ್ಯಾಶ್ ಇವುಗಳನ್ನು 2 ರಿಂದ 3 ಸಾರಿ ಎಲೆಗಳ ಮೇಲೆ ಚೆನ್ನಾಗಿ ಸಿಂಪರಣೆ ಮಾಡಬೇಕು. ಈ ಸಿಂಪರಣೆ ಯಾವುದೇ ಕೀಟನಾಶಕದೊಂದಿಗೆ ಹೊಂದಾಣಿಕೆ ಮಿಶ್ರಣ ಮಾಡಬೇಕು. ಯಾವುದೇ ದುಷ್ಪರಿಣಾಮ ವಾಗುವದಿಲ್ಲ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.