ADVERTISEMENT

ಮೊದಲ ಓದು | ಶೋಷಿತರ ನೋವಿಗೆ ಕನ್ನಡಿ ಹಿಡಿಯುವ ‘ಇಮೈಮಮ್ ಕಥೆಗಳು’

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 0:25 IST
Last Updated 15 ಫೆಬ್ರುವರಿ 2026, 0:25 IST
   

ತಮಿಳಿನ ಖ್ಯಾತ ಲೇಖಕ ಇಮೈಯಮ್ (ವಿ.ಅಣ್ಣಾಮಲೈ) ಅವರ ‘ನನ್ ಮಾರನ್ ಕೋಟ್ಟೈ ಕಥೈ’ ಕಥಾ ಸಂಕಲನವು ಕನ್ನಡದಲ್ಲಿ ‘ಇಮೈಮಮ್ ಕಥೆಗಳು’ ಎಂದು ಪ್ರಕಟಗೊಂಡಿದೆ. ಒಟ್ಟು ಒಂಬತ್ತು ಕಥೆಗಳ ಗುಚ್ಛ ಇದು. ಇಲ್ಲಿನ ಕಥೆಗಳು ಜನಸಾಮಾನ್ಯನ ನೋವನ್ನು ಪ್ರತಿಬಿಂಬಿಸುತ್ತವೆ. ಸಾಮಾನ್ಯ ಮಹಿಳೆಯೊಬ್ಬಳ ತಳಮಳಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಸಮಾಜದಲ್ಲಿ ಅಡರಿರುವ ಜಾತಿಯ ಮೇಲರಿಮೆ ಬಗ್ಗೆ ಗಾಢವಾಗಿ ಚಿತ್ರಿಸುತ್ತವೆ. ಜನಸಾಮಾನ್ಯರಿಗೆ ಸಿಗುವ ಗೆಲುವನ್ನು ಜಾತಿಯನ್ನೇ ಉಸಿರಾಡಿಕೊಂಡಿರುವವರು ಹೇಗೆ ನುಂಗಿಹಾಕುತ್ತಾರೆ ಎನ್ನುವುದನ್ನು ಇಲ್ಲಿನ ಕಥೆಗಳಲ್ಲಿ ಕಟ್ಟಿಕೊಡಲಾಗಿದೆ. ತಳಮಟ್ಟದ ಜನ ನೋವು, ಸಂಕಟ, ವೇದನೆಗಳೇ ಇಲ್ಲಿನ ಕಥೆಗಳ ವಸ್ತುಗಳು. ಅದನ್ನು ಅಷ್ಟೇ ಸೊಗಸಾಗಿ ಕಟ್ಟಿಕೊಂಡಿದ್ದಾರೆ. ತಮಿಳುನಾಡನ್ನು ಕೇಂದ್ರೀಕರಿಸಿ ಬರೆಯಲಾಗಿದ್ದರೂ ಇಡೀ ದೇಶದ ಸಾಮಾಜಿಕ, ರಾಜಕೀಯ ಚಿತ್ರಣಗಳು ಇಲ್ಲಿನ ಕಥೆಗಳಲ್ಲಿ ಸಿಗುತ್ತದೆ.

ಶಿಕ್ಷಣದಿಂದ ಜಾತಿಯ ಮೇಲರಿಮೆ ಹೋಗದು, ಅದು ಮನಸೊಳಗೆ ಅಡರಿರುವ ರೋಗ ಎನ್ನುವುದು ಇಲ್ಲಿನ ‘ಪೊಲೀಸ್’ ಕಥೆ ನಿರೂಪಿಸುತ್ತದೆ. ಇಲ್ಲಿನ ಪ್ರತಿಯೊಂದು ಕಥೆಗಳಲ್ಲಿ ಇಂತಹ ಗುಣಗಳಿವೆ. ನೆಲಮೂಲದ ವಿಷಯಗಳನ್ನು ಇಟ್ಟುಕೊಂಡು ಅವರ ನೋವುಗಳನ್ನು, ಇನ್ನೂ ಮುಗಿಯದ ಅವರ ಸಂಕಟಗಳನ್ನು, ಅವರನ್ನು ಇನ್ನೂ ಮನಷ್ಯರನ್ನಾಗಿ ನೋಡದವರ ದರ್ಪವನ್ನು ಕಥೆಗಾರ ಓದುಗರಿಗೆ ದಾಟಿಸಿದ್ದಾರೆ. ಒಂದೇ ಉಸಿರಿನಲ್ಲಿ ಓದಿಸಿಕೊಂಡು ಹೋಗುವ ಇಲ್ಲಿನ ಕಥೆಗಳ ಸಾರ ಸೂಕ್ಷ್ಮ ಹಾಗೂ ಅದೇ ಬೇಗುದಿ ಅನುಭವಿಸಿದ ಓದುಗನಿಗೆ ಬೇಗನೆ ತಟ್ಟುತ್ತದೆ.

ನೋವುಂಡವರ ಭಾಷೆಯಲ್ಲಿಯೇ ಬರೆದಿರುವುದು ಈ ಪುಸ್ತಕದ ವಿಶೇಷ. ‘ಶುದ್ಧ ಸಾಹಿತ್ಯ’ವನ್ನು ಪ್ರತಿಪಾದಿಸುವವರಿಗೆ ಇಲ್ಲಿನ ಭಾಷೆ ‘ಮೈಲಿಗೆ’ ಎನಿಸಬಹುದು. ಅಂಥವರಿಗೆ ಇಲ್ಲಿನ ಕಥೆಯ ಸಾರವೂ ತಿಳಿಯದು. ಅನುವಾದಕರೂ ಕೂಡ ಮೂಲ ಕಥೆಗಾರರ ಆ ಸೊಡಗನ್ನೇ ಉಳಿಸಿಕೊಂಡಿದ್ದು ಢಾಳಾಗಿ ಕಾಣುತ್ತದೆ. ಒಟ್ಟಾರೆಯಗಿ ಈ ಪುಸ್ತಕ ಇಡೀ ಸಮಾಜದ ಶೋಷಿತರ ನೋವಿಗೆ ಕನ್ನಡಿ ಹಿಡಿಯುತ್ತದೆ.

ADVERTISEMENT

ಇಮೈಯಮ್ ಕಥೆಗಳು

ತಮಿಳು ಮೂಲ: ಇಮೈಯಮ್

ಕನ್ನಡಕ್ಕೆ: ಕನಕರಾಜ್ ಆರನಕಟ್ಟೆ, ಅಶೋಕ್ ಕುಮಾರ್ ಎಂ.

ಪ್ರ: ಅಹರ್ನಿಶಿ

ಸಂ: 9449174662

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.