ADVERTISEMENT

ಶಂಕರ್ ಸಿಹಿಮೊಗ್ಗೆ ಅವರ ಕವನ ‘ಅರ್ಥ’

ಪ್ರಜಾವಾಣಿ ವಿಶೇಷ
Published 3 ಆಗಸ್ಟ್ 2025, 0:23 IST
Last Updated 3 ಆಗಸ್ಟ್ 2025, 0:23 IST
   

ಮೊನ್ನೆ ಆ ನದಿ ತೀರದಲ್ಲಿ
ಕೂತಿದ್ದ ಕವಿಯೊಬ್ಬನು
ಮುಟ್ಟಿ ಮುಟ್ಟಿ ಕಲ್ಲುಗಳನ್ನು ಎಸೆಯುತ್ತಿದ್ದ!
ಅಲ್ಲಿ ನೋಡಿದವರಲೊಬ್ಬನು ಹೀಗೆ ಉಸುರಿದನು
"ಕಲ್ಲಳತೆ ಕಂಡುಹಿಡಿಯುತ್ತಿರಬಹುದು! ಇವನು"
ಮರದ ಬುಡದಲ್ಲಿ ನಿಂತಿದ್ದ ಮತ್ತೊಬ್ಬ
"ಇಲ್ಲ ಇಲ್ಲ ಅವನು ನದಿಯಾಳವ
ಅಳೆಯುತ್ತಿರಬಹುದು!"
ಬಟ್ಟೆ ಸೆಳೆಯುತ್ತಿದ್ದ ಹೆಂಗಸೊಬ್ಬಳು
"ಅವನಿಗೆ ಎಲ್ಲೋ ಭ್ರಾಂತಾಗಿರಬೇಕು,
ಅಲ್ಲಿ ಈಜುತ್ತಿರುವ ಮೀನಿನ ಸ್ವಾತಂತ್ರ್ಯದ
ಬಗ್ಗೆ ಅವನಿಗೆ ಹೊಟ್ಟೆಕಿಚ್ಚಾಗಿರಬೇಕು" ಎಂದು
ಹುಬ್ಬನ್ನು ಮೇಲೇರಿಸಿದಳು!

ಇಲ್ಲಿ ಹಾಡುವ ಹಾಡಿಗೆ
ಬೇಡದವರದು ಒಂದು ಅರ್ಥ
ಬೇಕಾದವರದು ಮತ್ತೊಂದು ಅರ್ಥ
ನಡುವಿನವರದು ಇವೆರಡುಗಳ
ಗೋಡೆಯ ಮೇಲಿನ ಸಂಕೀರ್ಣ ಚಿತ್ರ!

ಇದ್ದವರದು ಒಂದು ಗುಂಪು
ಇದ್ದು ಇಲ್ಲದಂತಿರುವವರದು
ಮತ್ತೊಂದು ಗುಂಪು!
ತಮ್ಮ ತಮ್ಮೊಳಗೆ ಕಿರೀಟ ಕಟ್ಟಿ
ಪಟ್ಟ ಕಟ್ಟಲು ಹವಣಿಸುತ್ತಾರೆ!
ಮಧ್ಯ ಬಂದವರ ಕಿತ್ತೊಗೆಯದೆ,
ಇವರುಗಳ
ನಾಲಿಗೆಗೆ ರುಚಿ ಹತ್ತುವುದೇ ಇಲ್ಲ!

ADVERTISEMENT

ರೆಕ್ಕೆಗಳಿಲ್ಲದ ದನಿ
ಪದಚೌಕದೊಳಗೆ
ಕಾಲೂರಿ ಬಿದ್ದಿದೆ.

ಅಬ್ಬಾ!
ಒಂದು ದೃಶ್ಯಕ್ಕೆ
ಇಲ್ಲಿ ಎಷ್ಟೊಂದು ಅರ್ಥಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.