
ಅಶ್ವಿನಿ ವೈಷ್ಣವ್
ನವದೆಹಲಿ: ಬಜೆಟ್ನಲ್ಲಿ ಘೋಷಿಸಲಾಗಿರುವ ಏಳು ಹೈಸ್ಪೀಡ್ ರೈಲ್ವೆ ಕಾರಿಡಾರ್ಗಳು ದೇಶದ ವಿವಿಧ ಭಾಗಗಳನ್ನು ಸಂರ್ಪಕಿಸಲಿದ್ದು, ಒಟ್ಟು 4,000 ಕಿ.ಮೀನಷ್ಟು ವ್ಯಾಪ್ತಿ ಹೊಂದಿರಲಿದೆ. ಇದು ಸುಮಾರು ₹16,000 ಕೋಟಿಯಷ್ಟು ಹೂಡಿಕೆಯನ್ನು ಆಕರ್ಷಿಸುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರು– ಚೆನ್ನೈ–ಹೈದರಾಬಾದ್ ಕಾರಿಡಾರ್ಗಳು ದಕ್ಷಿಣ ರಾಜ್ಯದಲ್ಲಿ ಹೈಸ್ಪೀಡ್ ‘ಟ್ರೈಯಾಂಗಲ್’ ಅನ್ನು ರೂಪಿಸಲಿದೆ. ಇದರಿಂದ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳು ಮತ್ತು ಪುದುಚೇರಿ ಜನರಿಗೆ ಪ್ರಯೋಜನವಾಗಲಿದೆ ಎಂದು ಮಾಹಿತಿ ನೀಡಿದರು.
ಚೆನ್ನೈ–ಬೆಂಗಳೂರು, ಬೆಂಗಳೂರು– ಹೈದರಾಬಾದ್ ಮತ್ತು ಚೆನ್ನೈ– ಹೈದರಾಬಾದ್ ನಡುವಿನ ಪ್ರಯಾಣದ ಅವಧಿಯು ಕ್ರಮವಾಗಿ 1.13 ಗಂಟೆ, 2 ಗಂಟೆ ಹಾಗೂ 2.55 ಗಂಟೆಗೆ ತಗ್ಗಲಿದೆ ಎಂದು ಅವರು ವಿವರಿಸಿದರು.
ಹಾಗೆಯೇ ಮುಂಬೈ– ಪುಣೆ ನಡುವಿನ ಪ್ರಯಾಣ 48 ನಿಮಿಷಕ್ಕೆ, ಪುಣೆ– ಹೈದರಾಬಾದ್ ನಡುವಿನ ಪ್ರಯಾಣ 1.55 ಗಂಟೆಗೆ, ವಾರಾಣಸಿ– ಸಿಲಿಗುರಿ ನಡುವಿನ ಪ್ರಯಾಣ 2.55 ಗಂಟೆಗೆ, ದೆಹಲಿ– ವಾರಾಣಸಿ ನಡುವಿನ ಪ್ರಯಾಣದ ಅವಧಿ 3.50 ಗಂಟೆಗೆ ಇಳಿಯಲಿದೆ ಎಂದರು.
ಮುಂಬೈ ಮತ್ತು ಅಹಮದಾಬಾದ್ ನಡುವಿನ ಹೈಸ್ಪೀಡ್ ಕಾರಿಡಾರ್ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.