ನವದೆಹಲಿ: ಅಂಬುಜಾ ಸಿಮೆಂಟ್ಸ್ ಕಂಪನಿಯ ಸ್ವಾಧೀನ ಪ್ರಕ್ರಿಯೆಯನ್ನು ಅದಾನಿ ಸಮೂಹವು ಪೂರ್ಣಗೊಳಿಸಿದ್ದು, ಕಂಪನಿಯ ಸಿಮೆಂಟ್ ತಯಾರಿಕಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸುವುದಾಗಿ ಉದ್ಯಮಿ ಗೌತಮ್ ಅದಾನಿ ಸೋಮವಾರ ಹೇಳಿದ್ದಾರೆ.
ಅಲ್ಲದೆ, ಅದಾನಿ ಸಮೂಹವು ದೇಶದಲ್ಲಿ ಅತ್ಯಂತ ಹೆಚ್ಚು ಲಾಭಗಳಿಸುವ ಸಿಮೆಂಟ್ ತಯಾರಕ ಆಗಲಿದೆ ಎಂದೂ ಅವರು ಹೇಳಿದ್ದಾರೆ. ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಗೆ ನೀಡುತ್ತಿರುವ ಉತ್ತೇಜನ ಹಾಗೂ ಆರ್ಥಿಕ ಬೆಳವಣಿಗೆಯ ಪರಿಣಾಮವಾಗಿ ದೇಶದಲ್ಲಿ ಸಿಮೆಂಟ್ ಬೇಡಿಕೆಯು ಹಲವು ಪಟ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಿದ್ದಾರೆ.
ಸಮೂಹವು ಈಗ ದೇಶದ ಎರಡನೆಯ ಅತಿದೊಡ್ಡ ಸಿಮೆಂಟ್ ಉತ್ಪಾದನಾ ಕಂಪನಿಯನ್ನು ಹೊಂದಿದೆ ಎಂದು ಕೂಡ ಅದಾನಿ ಅವರು ಹೇಳಿದ್ದಾರೆ.
ತಾವು ಸಿಮೆಂಟ್ ಉತ್ಪಾದನಾ ಕಂಪನಿಯೊಂದನ್ನು ಸ್ವಾಧೀನಪಡಿಸಿಕೊಂಡಿರುವುದಕ್ಕೆ ಕಾರಣ ವಿವರಿಸಿರುವ ಅದಾನಿ, ‘ಭಾರತದಲ್ಲಿ ಸಿಮೆಂಟ್ನ ತಲಾವಾರು ಬಳಕೆಯು 250 ಕೆ.ಜಿ. ಇದೆ. ಚೀನಾದಲ್ಲಿ ಇದು 1,600 ಕೆ.ಜಿ. ಇದೆ. ಸಿಮೆಂಟ್ ಉದ್ಯಮವು ಭಾರತದಲ್ಲಿ ಇನ್ನೂ ಏಳು ಪಟ್ಟು ಬೆಳೆಯಲು ಅವಕಾಶ ಇದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.