ADVERTISEMENT

ಒಟಿಪಿ ವಂಚನೆ ತಡೆಗೆ ಏರ್‌ಟೆಲ್‌ ಕ್ರಮ: ಸಿಇಒ ಶಾಶ್ವತ್ ಶರ್ಮ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 13:49 IST
Last Updated 11 ಫೆಬ್ರುವರಿ 2026, 13:49 IST
   

ಬೆಂಗಳೂರು: ಒಂದು ಬಾರಿಗೆ ಬಳಕೆಗೆ ಬರುವ ಪಾಸ್‌ವರ್ಡ್‌ (ಒಟಿಪಿ) ಆಧರಿಸಿದ ನಡೆಯುವ ಬ್ಯಾಂಕಿಂಗ್‌ ವಂಚನೆ ಕೃತ್ಯಗಳನ್ನು ತಡೆಯುವ ಉದ್ದೇಶದಿಂದ ಏರ್‌ಟೆಲ್‌ ಕಂಪನಿಯು ಹೊಸ ಸೇವೆಯೊಂದನ್ನು ಆರಂಭಿಸಿದೆ.

ಯಾವುದೋ ನೆಪದಲ್ಲಿ ಅವಸರದ ಸನ್ನಿವೇಶ ಸೃಷ್ಟಿಸುವ ವಂಚಕರು, ಅಮಾಯಕರಿಂದ ಬ್ಯಾಂಕಿಂಗ್‌ ವಹಿವಾಟಿನ ಒಟಿಪಿ ಕೇಳುತ್ತಾರೆ. ಅದನ್ನು ಪಡೆದು ಅವರು ಅಮಾಯಕರ ಹಣವನ್ನು ಬೇರೊಂದು ಖಾತೆಗೆ ವರ್ಗಾವಣೆ ಮಾಡುತ್ತಾರೆ.

ಅಪಾಯ ಸೃಷ್ಟಿಯಾಗಬಹುದಾದ ಇಂತಹ ಸನ್ನಿವೇಶಗಳನ್ನು ಏರ್‌ಟೆಲ್‌ನ ಎ.ಐ. ಆಧಾರಿತ ವ್ಯವಸ್ಥೆಯು ಗುರುತಿಸುತ್ತದೆ. ತನ್ನ ಗ್ರಾಹಕರನ್ನು ಅದರ ಬಗ್ಗೆ ಎಚ್ಚರಿಸುವ ಕೆಲಸ ಮಾಡುತ್ತದೆ. ಅಪಾಯಕಾರಿ ಆಗಬಹುದಾದ ಕರೆಯೊಂದರ ಸಂದರ್ಭದಲ್ಲಿ ಬ್ಯಾಂಕ್‌ ಒಟಿಪಿ ಮೊಬೈಲ್‌ಗೆ ಬಂದರೆ, ಅದನ್ನು ಬೇರೊಬ್ಬರಿಗೆ ನೀಡುವುದರ ಅಪಾಯದ ಬಗ್ಗೆ ಏರ್‌ಟೆಲ್‌ನ ವ್ಯವಸ್ಥೆಯು ಎಚ್ಚರಿಕೆ ನೀಡುತ್ತದೆ ಎಂದು ಪ್ರಕಟಣೆ ವಿವರಿಸಿದೆ.

ADVERTISEMENT

‘ಎ.ಐ. ಆಧಾರವಾಗಿ ಇರಿಸಿಕೊಂಡು ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ವ್ಯವಸ್ಥೆಯನ್ನು ವಂಚನೆಯ ಉದ್ದೇಶದ ಕೃತ್ಯಗಳನ್ನು ಗುರುತಿಸಿ, ಎಚ್ಚರಿಸುವಂತೆ ರೂಪಿಸಲಾಗಿದೆ. ಇದನ್ನು ವ್ಯಾಪಕವಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ, ಇದು ಗಣನೀಯ ಪ್ರಮಾಣದ ನಿಖರತೆಯನ್ನು ತೋರಿಸಿದೆ’ ಎಂದು ಕಂಪನಿಯ ಸಿಇಒ ಶಾಶ್ವತ್ ಶರ್ಮ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.