ಯಳಂದೂರು: ಖಾರ, ಸುವಾಸನೆ ಹಾಗೂ ವಿಶಿಷ್ಟ ರುಚಿಗೆ ಹೆಸರಾಗಿರುವ ಸಣ್ಣ ಈರುಳ್ಳಿ ಕೊಯ್ಲಿಗೆ ಬಂದಿದ್ದು, ಉತ್ತಮ ಇಳುವರಿ ಜೊತೆಗೆ ಉತ್ತಮ ಧಾರಣೆಯೂ ಸಿಗುತ್ತಿದೆ. ಇದು ರೈತರಲ್ಲಿ ಸಂತಸ ಮೂಡಿಸಿದೆ.
ಕಳೆದ ಬಾರಿ ನಷ್ಟ ಅನುಭವಿಸಿದ್ದರಿಂದ, ಪ್ರಸಕ್ತ ವರ್ಷ ಈರುಳ್ಳಿ ನಾಟಿಗೆ ಹೆಚ್ಚಿನ ರೈತರು ಹಿಂಜರಿದಿದ್ದರು. ಕೆಲವರಷ್ಟೇ ಬಿತ್ತನೆ ಮಾಡಿದ್ದರು. ಬಹುತೇಕರು ಗುಣಮಟ್ಟದ ಈರುಳ್ಳಿ ಬೆಳೆದಿದ್ದು, ಕಟಾವು ಮಾಡಿದ ಈರುಳ್ಳಿ ತಾಕಿನ ಬಳಿಗೇ ಬಂದು ವ್ಯಾಪಾರಿಗಳು ಖರೀದಿಸುತ್ತಿದ್ದಾರೆ. ಬೆಲೆ ಸ್ಥಿರವಾಗಿ ಒಂದೆರಡು ತಿಂಗಳು ಮುಂದುವರಿದರೆ ಹೆಚ್ಚಿನ ಲಾಭ ದೊರೆಯಲಿದೆ.
‘ಬೇಸಿಗೆ ಹಂಗಾಮಿನಲ್ಲಿ ಒಂದೂವರೆ ಎಕರೆಯಲ್ಲಿ ಈರುಳ್ಳಿ ನಾಟಿ ಮಾಡಿದ್ದೆವು. ಆರಂಭದಲ್ಲಿ ಉಷ್ಣಾಂಶ ಹೆಚ್ಚಿತ್ತು. ಒಂದೆರಡು ಬಾರಿ ಮಳೆಯಾಗಿದ್ದೂ ಬೆಳೆಗೆ ಪೂರಕವಾಯಿತು. ಈಗ ಹೆಚ್ಚಿನ ಬೇಡಿಕೆ ಇದೆ’ ಎನ್ನುತ್ತಾರೆ ಹೊನ್ನೂರು ಹೊರವಲಯದ ಬೆಳೆಗಾರ ರವಿ.
‘1 ಎಕರೆಗೆ ₹50 ಸಾವಿರ ಖರ್ಚಾಗಿದ್ದು, 60 ಕ್ವಿಂಟಲ್ ಇಳುವರಿ ಸಿಗಬಹುದು. ಕ್ವಿಂಟಲ್ಗೆ ₹5,000 ದರವಿರುವುದರಿಂದ ಉತ್ತಮ ಲಾಭ ದೊರೆಯುವ ನಿರೀಕ್ಷೆ ಇದೆ’ ಎಂದರು.
‘ಮುಂಗಾರು ಹಂಗಾಮಿನಲ್ಲೂ ಈರುಳ್ಳಿ ನಾಟಿ ಮಾಡಲು ರೈತರು ಸಿದ್ಧತೆ ನಡೆಸಿದ್ದಾರೆ. ಕೆಲವು ವ್ಯಾಪಾರಿಗಳು ಗುಣಮಟ್ಟದ ನಾಟಿ ಈರುಳ್ಳಿ ಖರೀದಿಸಿ ಸಂಗ್ರಹಿಸುತ್ತಿದ್ದು, ಬಿತ್ತನೆ ಬೀಜವಾಗಿ ಮಾರುತ್ತಾರೆ. ಹಾಗಾಗಿ ಬೇಡಿಕೆ ಹೆಚ್ಚಿದೆ’ ಎಂದು ದಲ್ಲಾಳಿಗಳಾದ ಮಹದೇವ ಮತ್ತು ನಂಜುಂಡ ಹೇಳಿದರು.
‘ತಮಿಳುನಾಡು ಮತ್ತು ಕೇರಳದಲ್ಲಿ ಈರುಳ್ಳಿ ಆವಕ ಕಡಿಮೆಯಾಗಿರುವುದರಿಂದ ಧಾರಣೆ ಹೆಚ್ಚಾಗಿದೆ’ ಎಂದು ಬೆಳೆಗಾರ ಕಟ್ಟೆ ಗಣಿಗನೂರು ರಂಗಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.