ಬೆಂಗಳೂರು: ತಮ್ಮ ಪ್ರಯತ್ನದಿಂದಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ, ತಾಪಮಾನ ಪರೀಕ್ಷಾ ಉಪಕರಣ, ಶವಾಗಾರಗಳಿಗೆ ಅನಿಲ ಮತ್ತು ವಿದ್ಯುತ್ ಫರ್ನೇಸ್ ಹಾಗೂ ಆಂಬುಲೆನ್ಸ್ಗಳ ಮೇಲಿನ ತೆರಿಗೆ ಕಡಿತದ ತೀರ್ಮಾನ ಕೈಗೊಂಡಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ರಾಜ್ಯದ ಪ್ರತಿನಿಧಿಯಾದ ಬಸವರಾಜ ಬೊಮ್ಮಾಯಿ ವರ್ಚ್ಯುಯಲ್ ಆಗಿ ಪಾಲ್ಗೊಂಡಿದ್ದರು.
‘ತಾಪಮಾನ ಪರೀಕ್ಷಾ ಉಪಕರಣಗಳು, ಶವಾಗಾರಗಳಲ್ಲಿ ಬಳಸುವ ಅನಿಲ ಮತ್ತು ವಿದ್ಯುತ್ ಫರ್ನೇಸ್ಗಳ ಮೇಲಿನ ತೆರಿಗೆಯನ್ನು ಶೇ 18ರಿಂದ 12ಕ್ಕೆ ಇಳಿಕೆ ಮಾಡುವಂತೆ ಸಚಿವರ ಗುಂಪು ಶಿಫಾರಸು ಮಾಡಿತ್ತು. ಆಂಬುಲೆನ್ಸ್ಗಳ ಮೇಲಿನ ತೆರಿಗೆ ಕಡಿತಕ್ಕೆ ಶಿಫಾರಸು ಮಾಡಿರಲಿಲ್ಲ. ತಾಪಮಾನ ಪರೀಕ್ಷಾ ಉಪಕರಣಗಳು, ಶವಾಗಾರಗಳಲ್ಲಿ ಬಳಸುವ ಅನಿಲ ಮತ್ತು ವಿದ್ಯುತ್ ಫರ್ನೇಸ್ಗಳ ಮೇಲಿನ ತೆರಿಗೆಯನ್ನುಶೇ 5ಕ್ಕೆ ಹಾಗೂ ಆಂಬುಲೆನ್ಸ್ಗಳ ಮೇಲಿನ ತೆರಿಗೆಯನ್ನು ಶೇ 28ರಿಂದ ಶೇ 12ಕ್ಕೆ ಕಡಿಮೆ ಮಾಡುಂತೆ ನಾನು ಸಲ್ಲಿಸಿದ ಬೇಡಿಕೆಗೆ ಮಂಡಳಿ ಒಪ್ಪಿಗೆ ನೀಡಿದೆ’ ಎಂದು ಬೊಮ್ಮಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಗೆ ಆಗ್ರಹ: 2022ರ ನಂತರದ ಜಿಎಸ್ಟಿ ಪರಿಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಮಂಡಳಿಯ ಸಭೆಯನ್ನು ಕರೆಯುವಂತೆ ಒತ್ತಾಯಿಸಲಾಗಿದೆ. ಈ ವಿಷಯದಲ್ಲೂ ಕೇಂದ್ರ ಸಚಿವರು ರಾಜ್ಯದ ಬೇಡಿಕೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.