
ನವದೆಹಲಿ: ನಿತ್ಯ ಬಳಕೆಯ ಉತ್ಪನ್ನಗಳು, ಆಹಾರ ಉತ್ಪನ್ನಗಳು, ವಾಹನಗಳು ಸೇರಿದಂತೆ ಸರಿಸುಮಾರು 375 ಉತ್ಪನ್ನಗಳ ಬೆಲೆಯು ನವರಾತ್ರಿಯ ಮೊದಲ ದಿನವಾದ ಸೋಮವಾರದಿಂದ ಕಡಿಮೆ ಆಗಲಿವೆ.
ವಿವಿಧ ಉತ್ಪನ್ನಗಳು ಹಾಗೂ ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಜಿಎಸ್ಟಿ ಮಂಡಳಿ ಪರಿಷ್ಕರಿಸಿದ್ದು, ಪರಿಷ್ಕೃತ ದರಗಳು ಸೋಮವಾರದಿಂದ ಜಾರಿಗೆ ಬರುತ್ತಿವೆ. ಇದರ ಪ್ರಯೋಜನವನ್ನು ಬಹುತೇಕ ಕಂಪನಿಗಳು ಗ್ರಾಹಕರಿಗೆ ವರ್ಗಾವಣೆ ಮಾಡಿವೆ.
ಇಷ್ಟು ವರ್ಷ ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ ನಾಲ್ಕು ತೆರಿಗೆ ಹಂತಗಳು (ಶೇ 5, 12, 18 ಮತ್ತು 28) ಇದ್ದವು. ಆದರೆ ಇನ್ನು ಮುಂದೆ ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ ಎರಡು ತೆರಿಗೆ ಹಂತಗಳು (ಶೇ 5 ಮತ್ತು 18) ಇರಲಿವೆ. ಐಷಾರಾಮಿ ಉತ್ಪನ್ನಗಳು ಹಾಗೂ ತಂಬಾಕಿನ ಉತ್ಪನ್ನಗಳಿಗೆ ಶೇ 40ರಷ್ಟು ತೆರಿಗೆ ಇರಲಿದೆ. ಈ ಬದಲಾವಣೆಗಳ ಪರಿಣಾಮವಾಗಿ ದೇಶದ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳನ್ನು (ಎಫ್ಎಂಸಿಜಿ) ತಯಾರಿಸುವ ಕಂಪನಿಗಳು ಪರಿಷ್ಕೃತ ದರವನ್ನು ಪ್ರಕಟಿಸಿವೆ. ಸೋಪು, ಶಾಂಪೂ, ಟೂತ್ಪೇಸ್ಟ್ ಸೇರಿದಂತೆ ತಮ್ಮ ಹತ್ತು ಹಲವು ಉತ್ಪನ್ನಗಳ ಮೇಲೆ ಹೊಸ ಎಂಆರ್ಪಿ ನಮೂದಿಸಿವೆ.
ಕುರುಕಲು, ಕಾಫಿ ಮತ್ತು ಚಹಾ ಪುಡಿ, ಐಸ್ಕ್ರೀಂ, ಚಾಕೊಲೇಟ್ ಹಾಗೂ ಇತರ ಆಹಾರ ವಸ್ತುಗಳ ತಯಾರಿಕಾ ಕಂಪನಿಗಳು ಕೂಡ ತೆರಿಗೆ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿವೆ.
ಈ ಕಂಪನಿಗಳು ಪರಿಷ್ಕೃತ ಎಂಆರ್ಪಿ ಇರುವ ಉತ್ಪನ್ನಗಳನ್ನು ವಿತರಕರಿಗೆ, ಇ–ವಾಣಿಜ್ಯ ಕಂಪನಿಗಳ ಗೋದಾಮುಗಳಿಗೆ, ಸಾಂಪ್ರದಾಯಿಕ ಕಿರಾಣಿ ಅಂಗಡಿಗಳಿಗೆ ರವಾನಿಸಿರುವುದಾಗಿ ಹೇಳಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಉತ್ಪನ್ನಗಳ ಬೆಲೆಯನ್ನು ವಿಶೇಷವಾದ ರಿಯಾಯಿತಿಗಳ ಮೂಲಕ ಸರಿಹೊಂದಿಸಲಾಗಿದೆ ಎಂದು ಹೇಳಿವೆ.
ಡಾಬರ್, ಐಟಿಸಿ, ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್, ಇಮಾಮಿ, ನೆಸ್ಲೆ, ಆರ್ಸಿಪಿಎಲ್, ಅಮೂಲ್, ಎಚ್ಯುಎಲ್ನಂತಹ ಪ್ರಮುಖ ಕಂಪನಿಗಳು ಪರಿಷ್ಕೃತ ದರದ ಪಟ್ಟಿಯನ್ನು ತಮ್ಮ ವಿತರಕರಿಗೆ ರವಾನಿಸಿವೆ. ಅಲ್ಲದೆ, ತಮ್ಮ ವೆಬ್ಸೈಟ್ಗಳ ಮೂಲಕ ಹೊಸ ದರವನ್ನು ಗ್ರಾಹಕರಿಗೂ ತಿಳಿಸಿವೆ.
ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಫಿಕ್ಕಿ) ಈಚೆಗೆ ಸಿದ್ಧಪಡಿಸಿರುವ ವರದಿಯೊಂದು, ಜಿಎಸ್ಟಿ ದರ ಪರಿಷ್ಕರಣೆಯ ಪರಿಣಾಮವಾಗಿ ಅಲ್ಪಾವಧಿಯಲ್ಲಿ ವರಮಾನ ನಷ್ಟ ಉಂಟಾದರೂ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿ ಆಗುವ ಏರಿಕೆಯು ವರಮಾನ ನಷ್ಟವನ್ನು ಸರಿಹೊಂದಿಸಿಕೊಡುತ್ತದೆ ಎಂದು ಹೇಳಿದೆ.
ಈ ಕಂಪನಿಗಳು ಪರಿಷ್ಕೃತ ಎಂಆರ್ಪಿ ಇರುವ ಉತ್ಪನ್ನಗಳನ್ನು ವಿತರಕರಿಗೆ, ಇ–ವಾಣಿಜ್ಯ ಕಂಪನಿಗಳ ಗೋದಾಮುಗಳಿಗೆ, ಸಾಂಪ್ರದಾಯಿಕ ಕಿರಾಣಿ ಅಂಗಡಿಗಳಿಗೆ ರವಾನಿಸಿರುವುದಾಗಿ ಹೇಳಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಉತ್ಪನ್ನಗಳ ಬೆಲೆಯನ್ನು ವಿಶೇಷವಾದ ರಿಯಾಯಿತಿಗಳ ಮೂಲಕ ಸರಿಹೊಂದಿಸಲಾಗಿದೆ ಎಂದು ಹೇಳಿವೆ.
ಡಾಬರ್, ಐಟಿಸಿ, ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್, ಇಮಾಮಿ, ನೆಸ್ಲೆ, ಆರ್ಸಿಪಿಎಲ್, ಅಮೂಲ್, ಎಚ್ಯುಎಲ್ನಂತಹ ಪ್ರಮುಖ ಕಂಪನಿಗಳು ಪರಿಷ್ಕೃತ ದರದ ಪಟ್ಟಿಯನ್ನು ತಮ್ಮ ವಿತರಕರಿಗೆ ರವಾನಿಸಿವೆ. ಅಲ್ಲದೆ, ತಮ್ಮ ವೆಬ್ಸೈಟ್ಗಳ ಮೂಲಕ ಹೊಸ ದರವನ್ನು ಗ್ರಾಹಕರಿಗೂ ತಿಳಿಸಿವೆ.
ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಫಿಕ್ಕಿ) ಈಚೆಗೆ ಸಿದ್ಧಪಡಿಸಿರುವ ವರದಿಯೊಂದು, ಜಿಎಸ್ಟಿ ದರ ಪರಿಷ್ಕರಣೆಯ ಪರಿಣಾಮವಾಗಿ ಅಲ್ಪಾವಧಿಯಲ್ಲಿ ವರಮಾನ ನಷ್ಟ ಉಂಟಾದರೂ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿ ಆಗುವ ಏರಿಕೆಯು ವರಮಾನ ನಷ್ಟವನ್ನು ಸರಿಹೊಂದಿಸಿಕೊಡುತ್ತದೆ ಎಂದು ಹೇಳಿದೆ.
ಆರ್ಥಿಕ ಬೆಳವಣಿಗೆಗೆ ವೇಗ: ಪ್ರಧಾನಿ
ಜಿಎಸ್ಟಿ ದರಗಳಲ್ಲಿನ ಪರಿಷ್ಕರಣೆಯು ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಹೆಚ್ಚಿಸಲಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಇದು ದೊಡ್ಡದಾದ ಹಾಗೂ ಮುಖ್ಯವಾದ ಹೆಜ್ಜೆ ಎಂದು ಹೇಳಿದ್ದಾರೆ.
ಅಲ್ಲದೆ, ಸ್ವದೇಶಿ ಉತ್ಪನ್ನಗಳ ಬಳಕೆಯು ದೇಶದ ಸಮೃದ್ಧಿಗೆ ಇರುವ ಮಾರ್ಗ ಎಂದು ಪ್ರತಿಪಾದಿಸಿದ್ದಾರೆ.
ಜಿಎಸ್ಟಿ ಸುಧಾರಣಾ ಕ್ರಮಗಳು ಜಾರಿಗೆ ಬರುವ ಹಿಂದಿನ ದಿನವಾದ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಸ್ವದೇಶಿ ಉತ್ಪನ್ನಗಳ ಬಳಕೆಯು ದೇಶದ ಸ್ವಾತಂತ್ರ್ಯ ಚಳವಳಿಗೆ ಬಲ ನೀಡಿದ್ದ ಬಗೆಯಲ್ಲೇ ದೇಶದ ಸಮೃದ್ಧಿಗೂ ಬಲ ತಂದುಕೊಡುತ್ತದೆ ಎಂದಿದ್ದಾರೆ.
‘ಪ್ರತಿ ಮನೆಯನ್ನೂ ನಾವು ಸ್ವದೇಶಿಯ ಸಂಕೇತವನ್ನಾಗಿಸಬೇಕು, ಪ್ರತಿ ಅಂಗಡಿಯನ್ನೂ ಸ್ವದೇಶಿ
ಉತ್ಪನ್ನಗಳಿಂದ ಅಲಂಕರಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ.
ಆದಾಯ ತೆರಿಗೆ ವಿನಾಯಿತಿ ಯನ್ನು ವಾರ್ಷಿಕ ₹12 ಲಕ್ಷಕ್ಕೆ ಹೆಚ್ಚಿಸಿದ ಕೆಲವು ತಿಂಗಳ ನಂತರ ದಲ್ಲಿ ಜಿಎಸ್ಟಿ ವ್ಯವಸ್ಥೆ ಯಲ್ಲಿ ತರುತ್ತಿರುವ ಸುಧಾರಣೆಯು ನಾಗರಿಕರಿಗೆ ಅನುಕೂಲ ಕಲ್ಪಿಸಲಿದೆ. ವೆಚ್ಚ ತಗ್ಗಿಸಿ, ಉಳಿತಾಯ ಹೆಚ್ಚಿಸಿ ತಮ್ಮ ಕನಸುಗಳನ್ನು ಸಾಕಾರಗೊಳಿಸಿ ಕೊಳ್ಳಲು ಅವರಿಗೆ ನೆರವಾಗಲಿದೆ. ಅಲ್ಲದೆ, ಈ ಎರಡು ಕ್ರಮಗಳಿಂದಾಗಿ ಜನರ ಕೈಯಲ್ಲಿ ₹2.5 ಲಕ್ಷ ಕೋಟಿ ಉಳಿಯಲಿದೆ ಎಂದು ಹೇಳಿದ್ದಾರೆ.
ಸ್ವದೇಶಿಗೆ ಆದ್ಯತೆ:
ಸ್ವದೇಶಿ ವಸ್ತುಗಳ ಖರೀದಿ ಮತ್ತು ಮಾರಾಟವು ದೇಶದ ಅಭಿವೃದ್ಧಿಗೆ ವೇಗ ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ. ದೇಶದಲ್ಲೇ ತಯಾರಾದ ಉತ್ಪನ್ನಗಳ ಖರೀದಿಗೆ ಜನರು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
‘ನಾನು ಸ್ವದೇಶಿ ಉತ್ಪನ್ನ ಖರೀದಿ ಸುತ್ತೇನೆ, ನಾನು ಸ್ವದೇಶಿ ಉತ್ಪನ್ನ ಮಾರಾಟ ಮಾಡುತ್ತೇನೆ ಎನ್ನುವುದು ಹೆಮ್ಮೆಯ ಸಂಗತಿ ಯಾಗಬೇಕು’ ಎಂದು ಕೂಡ ಪ್ರಧಾನಿ ಹೇಳಿದ್ದಾರೆ. ‘ಸೋಮವಾರದಿಂದ ಜಿಎಸ್ಟಿ ಉಳಿತಾಯ ಹಬ್ಬ ಶುರು ವಾಗುತ್ತದೆ. ಇದರಿಂದಾಗಿ ಪ್ರತಿ ಕುಟುಂಬದಲ್ಲಿ ಸಂತಸ ಮೂಡುತ್ತದೆ’ ಎಂದಿದ್ದಾರೆ.
ಮೋದಿ ಮಾತು
*ತಯಾರಿಕಾ ಚಟುವಟಿಕೆಗೆ ಉತ್ತೇಜನ ನೀಡಿ, ಹೂಡಿಕೆಗೆ ಪೂರಕವಾದ ವಾತಾವರಣವನ್ನು ರಾಜ್ಯಗಳು ನಿರ್ಮಾಣ ಮಾಡಬೇಕು
*‘ನಾಗರಿಕ ದೇವೋ ಭವ’ ಎಂಬುದು ಸರ್ಕಾರದ ಮಂತ್ರ ಎನ್ನುವುದನ್ನು ಜಿಎಸ್ಟಿ ಪರಿಷ್ಕರಣೆಯು
ಪ್ರತಿಬಿಂಬಿಸುತ್ತಿದೆ
*ಅತಿಸಣ್ಣ, ಸಣ್ಣ ಮತ್ತು ಗುಡಿಕೈಗಾರಿಕೆಗಳು ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ಹೊಂದಿವೆ. ಸಾಧ್ಯವಾದಷ್ಟು ಮಟ್ಟಿಗೆ ದೇಶದಲ್ಲಿ ತಯಾರಿಕೆಯನ್ನು ಹೆಚ್ಚಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.