ನವದೆಹಲಿ: ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ನಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಚರ್ಚಿಸಲು ಪ್ರಧಾನಿ ಕಚೇರಿಯು (ಪಿಎಂಒ) ತುರ್ತು ಸಭೆ ಕರೆದಿದೆ.
ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಸಂಸ್ಥೆಯಲ್ಲಿನ ವಿದ್ಯಮಾನಗಳನ್ನು ಪರಿಶೀಲಿಸಲು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ಸಚಿವಾಲಯದ ಕಾರ್ಯದರ್ಶಿಗೆ ನಿರ್ದೇಶನ ನೀಡಿರುವುದರಿಂದ ಈ ತುರ್ತು ಸಭೆ ಕರೆಯಲಾಗಿದೆ.
ಹಣಕಾಸು ಮುಗ್ಗಟ್ಟಿನ ಕಾರಣಕ್ಕೆ ಸಂಸ್ಥೆಯು ಈಗಾಗಲೇ ತನ್ನ ಅಂತರರಾಷ್ಟ್ರೀಯ ಸೇವೆಯನ್ನು ರದ್ದುಪಡಿಸಿದೆ. ಇದು ಸೋಮವಾರದವರೆಗೆ ಜಾರಿಯಲ್ಲಿ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.
50ಕ್ಕೂ ಕಡಿಮೆ ವಿಮಾನ ಹಾರಾಟ: ಸಂಸ್ಥೆಯು ಸದ್ಯಕ್ಕೆ 50ಕ್ಕೂ ಕಡಿಮೆ ವಿಮಾನಗಳ ಹಾರಾಟ ನಿರ್ವಹಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾರಾಟ ನಡೆಸುತ್ತಿರುವ ವಿಮಾನಗಳ ಸಂಖ್ಯೆ ಎಷ್ಟು ಎನ್ನುವುದನ್ನು ಅವರು ಖಚಿತಪಡಿಸಿಲ್ಲ.
16 ಹೊಸ ವಿಮಾನಗಳು: ವಿಮಾನಗಳ ಹಾರಾಟ ರದ್ದು ಸಂಖ್ಯೆ ಕಡಿಮೆ ಮಾಡಲು ಮತ್ತು ದೇಶಿ – ವಿದೇಶಿ ಸೇವೆ ಮುಂದುವರೆಸಲು ಸಂಸ್ಥೆಯು ಗುತ್ತಿಗೆ ಆಧಾರದ ಮೇಲೆ 16 ‘ಬೋಯಿಂಗ್ 737–800’ ವಿಮಾನಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಸಂಸ್ಥೆಯು ಶುಕ್ರವಾರ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.