
ನಿರ್ಮಲಾ ಸೀತಾರಾಮನ್
ನವದೆಹಲಿ (ಪಿಟಿಐ): ವಿಕಸಿತ ಭಾರತಕ್ಕಾಗಿನ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಉನ್ನತಾಧಿಕಾರ ಸಮಿತಿಯನ್ನು ಕೇಂದ್ರ ಸರ್ಕಾರವು ಶೀಘ್ರವೇ ರಚಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಭಿವೃದ್ಧಿ ಹೊಂದಿದ ಭಾರತದ ಹಣಕಾಸಿನ ಅಗತ್ಯಗಳನ್ನು ಪೂರೈಸಬಲ್ಲ ಬೃಹತ್ ಬ್ಯಾಂಕ್ಗಳ ಸೃಷ್ಟಿಗೆ ಅಗತ್ಯವಿರುವ ನೀಲನಕ್ಷೆಯನ್ನು ಈ ಸಮಿತಿಯು ಸಿದ್ಧಪಡಿಸಬೇಕಿದೆ.
‘ವಿಕಸಿತ ಭಾರತಕ್ಕೆ ಅಗತ್ಯವಿರುವ ಹಣಕಾಸಿನ ನೆರವು ನೀಡುವಂತಹ ಬ್ಯಾಂಕಿಂಗ್ ವ್ಯವಸ್ಥೆ ಹೊಂದಲು ನಾವು ಏನೆಲ್ಲ ಮಾಡಬೇಕು ಎಂಬುದನ್ನು ಸಮಿತಿಯು ನಮಗೆ ತಿಳಿಸಬೇಕಿದೆ’ ಎಂದು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ನಿರ್ಮಲಾ ಅವರು ಹೇಳಿದ್ದಾರೆ.
ಸಮಿತಿಯು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ವಿಲೀನಕ್ಕೆ ಶಿಫಾರಸು ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರವಾಗಿ ನಿರ್ಮಲಾ ಅವರು, ‘ಇದನ್ನು ಅಷ್ಟು ಸಂಕುಚಿತವಾಗಿ ನೋಡಬಾರದು’ ಎಂದು ಹೇಳಿದ್ದಾರೆ.
‘ವಿಕಸಿತ ಭಾರತದ ಹಣಕಾಸಿನ ಅಗತ್ಯಗಳನ್ನು ಒದಗಿಸುವಂತಹ ಬ್ಯಾಂಕಿಂಗ್ ವಲಯಕ್ಕಾಗಿ ಈ ಸಮಿತಿ. ನಾವು ವಿಕಸಿತ ಭಾರತದ ಗುರಿಯನ್ನು ತಲುಪಬೇಕಿದೆ... ಅದಕ್ಕೆ ಹಣ ಬೇಕು, ಹಣಕಾಸಿನ ನೆರವು ಬೇಕು, ಸಾಲ ಬೇಕು, ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೌಲಭ್ಯ ತಲುಪಬೇಕು’ ಎಂದು ನಿರ್ಮಲಾ ವಿವರಣೆ ನೀಡಿದ್ದಾರೆ.
ಸಮಿತಿಯನ್ನು ಶೀಘ್ರದಲ್ಲಿಯೇ ರಚಿಸಲಾಗುತ್ತದೆ ಎಂದಿದ್ದಾರೆ. ಸಮಿತಿಯ ರಚನೆ ಪ್ರಸ್ತಾವ ಈ ಬಾರಿಯ ಬಜೆಟ್ನಲ್ಲಿ ಇದೆ.
ನವದೆಹಲಿ (ಪಿಟಿಐ): ಸರ್ಕಾರದ ನೀತಿಗಳಲ್ಲಿ ಮತ್ತೆ ಮತ್ತೆ ಬದಲಾವಣೆ ತರುತ್ತಿರಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಿಹೇಳಿದ್ದುದು ಈ ಬಾರಿಯ ಬಜೆಟ್ಅನ್ನು ರೂಪಿಸಿದೆ ಎಂದು ನಿರ್ಮಲಾ ತಿಳಿಸಿದ್ದಾರೆ. ‘ಜನರು ಸ್ಥಿರತೆಯನ್ನು ಬಯಸುತ್ತಾರೆ.
ಹೀಗಾಗಿಯೇ ಅವರು ಮೋದಿ ಅವರನ್ನು ಸತತ ಮೂರನೆಯ ಬಾರಿಗೆ ಚುನಾಯಿಸಿದ್ದಾರೆ...’ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ‘ನೀತಿಗಳು ಇದ್ದಕ್ಕಿದ್ದಂತೆ ಬದಲಾಗಬಾರದು ಎಂಬುದನ್ನು ಪ್ರಧಾನಿಯವರು ಯಾವಾಗಲೂ ಹೇಳುತ್ತಿರುತ್ತಾರೆ. ಸರ್ಕಾರವು ಒಮ್ಮೆ ತನ್ನ ನೀತಿಯನ್ನು ಪ್ರಕಟಿಸಿದ ನಂತರದಲ್ಲಿ ಅದರ ಅನುಷ್ಠಾನದಲ್ಲಿ ಸ್ಥಿರತೆಯಿಂದ ಹೆಜ್ಜೆ ಇರಿಸುತ್ತದೆ’ ಎಂದು ಹೇಳಿದ್ದಾರೆ.
ಬಜೆಟ್ ಘೋಷಣೆಗಳನ್ನು ಒಂದು ವರ್ಷದ ಹಣಕಾಸಿನ ಲೆಕ್ಕಾಚಾರಕ್ಕೆ ಸಂಬಂಧಿಸಿದ ಕಡತವನ್ನಾಗಿ ಮಾತ್ರವೇ ಕಾಣಬಾರದು. ಅದನ್ನು ದೀರ್ಘಾವಧಿಯ ಯೋಜನೆಯ ಭಾಗವಾಗಿ ನೋಡಬೇಕು ಎಂದು ನಿರ್ಮಲಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.