ನವದೆಹಲಿ: ಸಾಗರೋತ್ತರ ಹೂಡಿಕೆದಾರರ ಬೇಡಿಕೆಗೆ ಕೊನೆಗೂ ಮಣಿದಿರುವ ಕೇಂದ್ರ ಸರ್ಕಾರವು, ಸರ್ಚಾರ್ಜ್ಹೆಚ್ಚಳದ ಬಜೆಟ್ ಪ್ರಸ್ತಾವಗಳನ್ನು ರದ್ದುಪಡಿಸಿರುವುದಾಗಿ ಪ್ರಕಟಿಸಿದೆ.
‘ಷೇರುಗಳ ವರ್ಗಾವಣೆಯ ಅಲ್ಪಾವಧಿ ಮತ್ತು ದೀರ್ಘಾವಧಿ ಲಾಭ ಗಳಿಕೆ ಮೇಲಿನ ಸರ್ಚಾರ್ಜ್ ಹಿಂತೆಗೆದುಕೊಳ್ಳಲಾಗಿದೆ. ಬಜೆಟ್ ಮುಂಚಿನ ಪರಿಸ್ಥಿತಿಯೇ ಇನ್ನು ಮುಂದೆಯೂ ಮುಂದುವರೆಯಲಿದೆ. ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸರ್ಚಾರ್ಜ್ ಹೆಚ್ಚಳದಿಂದ ₹ 2 ರಿಂದ ₹ 5 ಕೋಟಿ ವಾರ್ಷಿಕ ಆದಾಯ ಹೊಂದಿದವರ ಮೇಲಿನ ಆದಾಯ ತೆರಿಗೆ ಹೊರೆಯು ಶೇ 39ರಷ್ಟು ಮತ್ತು ₹ 5 ಕೋಟಿಗಿಂತ ಹೆಚ್ಚಿನ ವರಮಾನದವರಿಗೆ ಶೇ 42.7ರವರೆಗೆ ಹೆಚ್ಚಳಗೊಂಡಿತ್ತು.
ಸರ್ಚಾರ್ಜ್ ವಿಧಿಸುವ ಬಜೆಟ್ ಪ್ರಸ್ತಾವನೆಯು ವಿದೇಶಿ ಹೂಡಿಕೆದಾರರನ್ನು ನಿರುತ್ಸಾಹಗೊಳಿಸಿತ್ತು. ಷೇರುಪೇಟೆಯ ವಹಿವಾಟು ನಿರಂತರ ಕುಸಿತ ಕಾಣುತ್ತ ಬಂದಿತ್ತು. ಈ ಪ್ರತಿಕೂಲ ಬೆಳವಣಿಗೆ ಹಿನ್ನೆಲೆಯಲ್ಲಿ ಷೇರು ವಹಿವಾಟುದಾರರು ಮತ್ತು ವಿದೇಶಿ ಹೂಡಿಕೆದಾರರ ಪ್ರತಿನಿಧಿಗಳು ಸಚಿವೆ ನಿರ್ಮಲಾ ಅವರನ್ನು ಭೇಟಿಯಾಗಿ ಸರ್ಚಾರ್ಜ್ ರದ್ದುಪಡಿಸುವುದೂ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.