ನವದೆಹಲಿ:ಯೆಸ್ ಬ್ಯಾಂಕ್ ಮೇಲಿನ ನಿರ್ಬಂಧ ಮಾರ್ಚ್ 18, ಬುಧವಾರ ಸಂಜೆ 6ರಿಂದ ಸಡಿಲಿಕೆಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಯೆಸ್ ಬ್ಯಾಂಕ್ ಠೇವಣಿದಾರರ ಹಣ ಸಂಪೂರ್ಣ ಸುರಕ್ಷಿತವಾಗಿದೆ ಮತ್ತು ಆತಂಕ ಪಡಲು ಯಾವುದೇ ಕಾರಣಗಳಿಲ್ಲ.ಬ್ಯಾಂಕ್ನ ಹೊಸ ಆಡಳಿತ ಮಂಡಳಿಯು ಮಾರ್ಚ್ 26ರಿಂದ ಕಾರ್ಯನಿರ್ವಹಿಸಲಿದೆ ಎಂದು ತಿಳಸಿದ್ದಾರೆ.
ಕೋವಿಡ್–19 ಸಾಂಕ್ರಾಮಿಕ ರೋಗಕ್ಕೆ ಭಾರತ ಹೊರತಾಗಿಲ್ಲ. ಈಗಾಗಲೇ ದೇಶದಲ್ಲಿ 100ಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಕೋವಿಡ್–19 ವಾಣಿಜ್ಯ ಚಟುವಟಿಕೆಗೆ ಅಡ್ಡಿಯಾಗಿ ಭಾರತದ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರಬಹುದಾಗಿದೆ.ಸೋಂಕು ತಡೆಗೆ ಸರ್ಕಾರ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.
ಸೋಂಕು ಹರಡುವುದನ್ನು ತಡೆಯಲು ಡಿಜಿಟಲ್ ಪಾವತಿ ವ್ಯವಸ್ಥೆ ಅನುಸರಿಸುವಂತೆಯೂ ಸಲಹೆ ನೀಡಿದ್ದಾರೆ.ಕೊರೊನಾ ವೈರಸ್ ಸೋಂಕಿನಿಂದಾಗಿ ಭಾರತದ ಆರ್ಥಿಕತೆ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಆರ್ಬಿಐ ಪರಿಶೀಲಿಸುತ್ತಿದೆ. ಕ್ರಮಗಳ ಕುರಿತು ಏಪ್ರಿಲ್ 3ರಂದು ಹಣಕಾಸುನೀತಿ ಪರಿಶೀಲನೆಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಸಾಂಕ್ರಾಮಿಕ ಕಾಯಿಲೆ ಪರಿಣಾಮದಿಂದಾಗಿ ದೇಶದ ಆರ್ಥಿಕತೆ ಮಂದಗತಿಯಲ್ಲಿ ಸಾಗಲಿದೆ ಹಾಗೂ ಅದರಿಂದ ಜಾಗತಿಕ ಬೆಳವಣಿಗೆಯ ಮೇಲೂ ಪರಿಣಾಮವಾಗಲಿದೆ. ಈ ಎಲ್ಲದರಿಂದ ಭಾರತದ ಬೆಳವಣಿಗೆಗೆ ಪೆಟ್ಟು ಬೀಳಬಹುದಾಗಿದೆ.ಪ್ರವಾಸೋದ್ಯಮ, ವಿಮಾನಯಾನ, ಪ್ರಾದೇಶಿಕ ಸಾರಕು ಸಾಗಣೆ, ದೇಶೀಯ ವಹಿವಾಟು,ಅತಿಥಿ ಸತ್ಕಾರ ಸೇವಾ ವಲಯಗಳು ಈಗಾಗಲೇ ನಷ್ಟಕ್ಕೆ ಒಳಗಾಗಿವೆ. ಷೇರುಪೇಟೆಗಳ ಮೇಲೂ ಇದರ ಪರಿಣಾಮ ಬೀರಿದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.