ನವದೆಹಲಿ: ರಾಷ್ಟ್ರೀಯ ಷೇರುಪೇಟೆಯ (ಎನ್ಎಸ್ಇ) ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಚಿತ್ರಾ ರಾಮಕೃಷ್ಣ ಅವರನ್ನು ದೆಹಲಿಯ ನ್ಯಾಯಾಲಯವು 14 ದಿನಗಳ ವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಷೇರುಗಳನ್ನು ತ್ವರಿತವಾಗಿ ಖರೀದಿಸಲು ಹಾಗೂ ಮಾರಾಟ ಮಾಡಲು ವರ್ತಕರಿಗೆ ಅವಕಾಶ ಕಲ್ಪಿಸುವ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸೋಮವಾರ ಈ ಆದೇಶ ಪ್ರಕಟಿಸಿದೆ.
ಚಿತ್ರಾ ಅವರು ತನಿಖೆಗೆ ಸಹಕರಿಸುತ್ತಿಲ್ಲ, ಕೇಳುವ ಪ್ರಶ್ನೆಗಳಿಗೆ ನುಣುಚಿಕೊಳ್ಳುವ ರೀತಿ ಉತ್ತರಿಸುತ್ತಿದ್ದಾರೆ ಎಂದು ಸಿಬಿಐ ಕೋರ್ಟ್ಗೆ ತಿಳಿಸಿತು.
ಮನೆಯ ಊಟ ಪೂರೈಸಲು ಅನುಮತಿ ನೀಡುವಂತೆ ಚಿತ್ರಾ ಅವರ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದರು. 'ನ್ಯಾಯಾಂಗ ಬಂಧನದಲ್ಲಿಯೂ ಊಟ ಚೆನ್ನಾಗಿಯೇ ಇರುತ್ತದೆ. ಹಲವು ಬಾರಿ ನಾನೂ ಅಲ್ಲಿನ ಊಟ ಮಾಡಿರುವೆ' ಎಂದು ನ್ಯಾಯಾಧೀಶರು ಹೇಳಿದ್ದಾಗಿ ವರದಿಯಾಗಿದೆ.
ಪ್ರಾರ್ಥನೆಯ ಪುಸ್ತಕ, ಮಾಸ್ಕ್ ಸೇರಿದಂತೆ ಹಲವು ಬೇಡಿಕೆಗಳನ್ನು ವಕೀಲರು ಕೋರ್ಟ್ ಮುಂದಿಟ್ಟಿದ್ದರು. ಅವರೇನೂ ವಿಐಪಿ ಅಲ್ಲ ಎಂದ ನ್ಯಾಯಾಧೀಶರು, 'ವಿಐಪಿ ಕೈದಿಗಳು ಎಲ್ಲವನ್ನೂ ಕೋರುತ್ತಾರೆ. ಅದಕ್ಕಾಗಿ ಎಲ್ಲ ನಿಯಮಗಳನ್ನೂ ಬದಲಿಸಬೇಕಾಗುತ್ತದೆ. ಎಲ್ಲ ಬಂದಿಗಳೂ ಒಂದೇಯೇ. ಅವರೇನೂ ವಿಐಪಿ ಅಲ್ಲ' ಎಂದು ನ್ಯಾಯಾಧೀಶರು ಹೇಳಿದರು.
ಸಿಬಿಐ ಮಾರ್ಚ್ 6ರಂದು ಚಿತ್ರಾ ಅವರನ್ನು ಬಂಧಿಸಿತ್ತು. ಅವರನ್ನು ಸಿಬಿಐ ಏಳು ದಿನಗಳ ವರೆಗೂ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.
ಚಿತ್ರಾ ಅವರು ಸುಬ್ರಮಣಿಯನ್ ಅವರನ್ನು ತಮ್ಮ ಸಲಹೆಗಾರ ಆಗಿ 2013ರಲ್ಲಿ ನೇಮಕ ಮಾಡಿದ್ದರು. ನಂತರ ಅವರಿಗೆ ಜಿಒಒ ಆಗಿ ಬಡ್ತಿ ನೀಡಲಾಗಿತ್ತು. ಸುಬ್ರಮಣಿಯನ್ ಅವರ ನೇಮಕ ಹಾಗೂ ಅವರಿಗೆ ಬಡ್ತಿ ನೀಡಿದ್ದರ ಹಿಂದೆ ‘ಹಿಮಾಲಯದ ಯೋಗಿ’ಯ ಸಲಹೆ ಕೆಲಸ ಮಾಡಿತ್ತು ಎಂಬ ಆರೋಪ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.