ಬೆಂಗಳೂರು:ಸರ್ಕಾರಕ್ಕೆ ನೀಡಬೇಕಾದ ಶುಲ್ಕದಲ್ಲಿ ₹ 1.47 ಲಕ್ಷ ಕೋಟಿ ಬಾಕಿ ಉಳಿಸಿಕೊಂಡಿರುವ ದೂರಸಂಪರ್ಕ ಕಂಪನಿಗಳು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅದರ ಪರಿಣಾಮ ಶುಕ್ರವಾರ ಭಾರ್ತಿ ಇನ್ಫ್ರಾಟೆಲ್ ಸೇರಿದಂತೆ ಟೆಲಿಕಾಂ ಕಂಪನಿ ಷೇರುಗಳು ಕುಸಿತ ಕಂಡಿವೆ.
ದೂರಸಂಪರ್ಕ ಕಂಪನಿಗಳು ಬಾಕಿ ಉಳಿಸಿಕೊಂಡಿರುವ ಪರವಾನಗಿ ಶುಲ್ಕ ಹಾಗೂ ತರಂಗಾಂತರಗಳ ಬಳಕೆ ಶುಲ್ಕ ಪಾವತಿಸುವಂತೆ ಕಳೆದ ವರ್ಷ ಅಕ್ಟೋಬರ್ನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ದಂಡ, ದಂಡಕ್ಕೆ ವಿಧಿಸಲಾಗಿರುವ ಬಡ್ಡಿ ಸೇರಿದಂತೆ ಪಾವತಿಸಬೇಕಾದ ಮೊತ್ತ ಏರಿಕೆಯಾಗಿರುವ ಬಗ್ಗೆ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ತೀರ್ಪು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಮನವಿ ಸಲ್ಲಿಸಿದ್ದವು.
ಸುಪ್ರೀಂ ಕೋರ್ಟ್ ಮರುಪರಿಶೀಲನೆಗೆ ಸಮ್ಮತಿಸದ ಕಾರಣ, ಹೂಡಿಕೆದಾರರ ಟೆಲಿಕಾಂ ಕಂಪನಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದು ವಿದೇಶಿ ನೇರ ಬಂಡವಾಳ ಹೂಡಿಕೆಯ ಮೇಲೂ ಪರಿಣಾಮ ಬೀರಬಹುದಾಗಿದೆ ಕ್ವಾಂಟಮ್ ಸೆಕ್ಯುರಿಟೀಸ್ ನಿರ್ದೇಶಕ ನೀರಜ್ ದಿವಾನ್ ಅಭಿಪ್ರಾಯ ಪಟ್ಟಿದ್ದಾರೆ.
ರಾಷ್ಟ್ರೀಯ ಷೇರು ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಶೇ 0.19ರಷ್ಟು ಇಳಿಕೆಯಾಗಿ 12,332 ಅಂಶ ಮುಟ್ಟಿದರೆ, ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶೇ 0.16ರಷ್ಟು ಇಳಿಕೆಯಾಗಿ 41,866.16 ಅಂಶಗಳಿಗೆ ಕುಸಿದಿದೆ.
ವೊಡಾಫೋನ್ ಐಡಿಯಾ ಲಿಮಿಟೆಡ್ ಷೇರು ಎರಡು ತಿಂಗಳ ಕನಿಷ್ಠ, ಶೇ 40ರಷ್ಟು ಕುಸಿತದಿದೆ. ವೊಡಾಫೋನ್ ಐಡಿಯಾದ ಷೇರುದಾರ ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರು ಸಹ ಶೇ 6ರಷ್ಟು ಇಳಿಕೆಯಾಗಿದೆ.
ಭಾರ್ತಿ ಇನ್ಫ್ರಾಟೆಲ್ ಲಿಮಿಡೆಟ್ ಷೇರು ಶೇ 13.5ರಷ್ಟು ಇಳಿಕೆಯಾಗಿದ್ದು, ಮೂರು ವರ್ಷದಲ್ಲಿ ಮೊದಲ ಬಾರಿಗೆ ದಿನದ ವಹಿವಾಟಿನಲ್ಲಿ ಅತಿ ಕಡಿಮೆ ಮಟ್ಟಕ್ಕೆ ಕುಸಿದಿದೆ.
ವೊಡಾಫೋನ್ ಐಡಿಯಾ ಖಾಸಗಿ ಬ್ಯಾಂಕ್ಗಳ ಜತೆಗೆ ಎಸ್ಬಿಐನಲ್ಲಿ ಸಾಲ ಹೊಂದಿದ್ದು, ಎಸ್ಬಿಐ ಶೇ 4.1ರಷ್ಟು, ಇಂಡಸ್ಇಂಡ್ ಬ್ಯಾಂಕ್ ಲಿ. ಷೇರುಗಳು ಶೇ 5ರಷ್ಟು ಕುಸಿದವೆ. ಆರಂಭದ ವಹಿವಾಟಿನಲ್ಲಿ ಯೆಸ್ ಬ್ಯಾಂಕ್ ಲಿಮಿಡೆಟ್ ಷೇರು ಶೇ 7.4ರಷ್ಟು ಇಳಿಕೆ ಕಂಡಿತ್ತು.
ಪಾವತಿಸಬೇಕಾದ ಶುಲ್ಕ ಬಾಕಿ ಇದ್ದರೂ ಭಾರ್ತಿ ಏರ್ಟೆಲ್ ಲಿಮಿಟೆಡ್ ಷೇರು ಶೇ 5.2ರಷ್ಟು ಏರಿಕೆಯಾಗಿದೆ. ಇನ್ನು ರಿಲಯನ್ಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಕಂಪನಿಗಳ ತ್ರೈಮಾಸಿಕ ಹಣಕಾಸು ಫಲಿತಾಂಶ ಹೊರ ಬೀಳುವುದರಿಂದ; ರಿಲಯನ್ಸ್ ಷೇರು ಶೇ 2 ಹಾಗೂ ಟಾಟಾ ಕನ್ಸಲ್ಟೆನ್ಸಿ ಷೇರು ಶೇ 0.7ರಷ್ಟು ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.