ADVERTISEMENT

ಗುರುರಾಜ ಕರಜಗಿ ಅಂಕಣ– ಬೆರಗಿನ ಬೆಳಕು| ನಿಜವಾದ ಸುಖಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 19:30 IST
Last Updated 24 ಜನವರಿ 2023, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಜಗದ ಕಲ್ಯಾಣದೊಳಗಾತ್ಮಕಲ್ಯಾಣವನು |
ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು ||
ಜಗದ ಜೀವಿತದಿ ನಿಜ ಜೀವಿತದ ಪೂರ್ತಿಯನು |
ಬಗೆಯಲರಿತವನೆ ಸುಖಿ – ಮಂಕುತಿಮ್ಮ || 807 ||

ಪದ-ಅರ್ಥ: ಕಲ್ಯಾಣದೊಳಗಾತ್ಮಕಲ್ಯಾಣವನು=ಕಲ್ಯಾಣದೊಳಗೆ+ಆತ್ಮ+ಕಲ್ಯಾಣವನು, ಬೀದಿಗಳೊಳು=ಬೀದಿಗಳಲ್ಲಿ, ನಿಜಾತ್ಮಯಾತ್ರೆಯನು=ನಿಜ+ಆತ್ಮ+ಯಾತ್ರೆಯನು, ಬಗೆಯಲರಿತವನೆ=ಬಗೆಯಲು(ತಿಳಿಯಲು)+ಅರಿತವನೆ.
ವಾಚ್ಯಾರ್ಥ: ಜಗತ್ತಿನ ಕಲ್ಯಾಣದೊಳಗೆ ತನ್ನ ಆತ್ಮದ ಕಲ್ಯಾಣವನ್ನು, ತನ್ನ ಸ್ವಂತದ ಆತ್ಮದ ಯಾತ್ರೆಯನ್ನು
ಜಗತ್ತಿನ ವ್ಯವಹಾರಗಳಲ್ಲಿ, ಜಗತ್ತಿನ ಜೀವನದ ವಿಧಾನಗಳಲ್ಲಿ ತನ್ನ ಜೀವಿತದ ಸಾಧನೆಯನ್ನು ಮಾಡಲು ತಿಳಿದವನೆ ಸುಖಿ.
ವಿವರಣೆ: ಶಿಶುನಾಳ ಶರೀಫ್‌ನ ಒಂದು ಬೆಡಗಿನ ತತ್ವಪದ ಹೀಗಿದೆ. ಸಂಸಾರದಿ ಸದ್ಗತಿ ಹೊಂದಿ
ಹವಣರಿತು ಮಾಯೆಯ ಜಯಿಸಿ
ಮರಣಗೆಲಿದವನೆ ಶಿವಯೋಗಿ || ಪ ||
ಭವಭಾರ ಕರ್ಮಗಳನು
ಬಯಸದೆ ಬ್ರಹ್ಮದೆ ಬೆರೆತು
ಬ್ರಹ್ಮಜ್ಞಾನವು ದೊರೆವತನಕ
ತ್ರಿನಯನನಾಶ್ರಯವ ಹಿಡಿದು
ಆವುದನು ಅರಿಯದೆ ಮುನ್ನ
ಅನುವರಿತು ಸವಿಗರಿದು
ವಿಷಯಗಳನೇ ನಿರಾಕರಿಸಿ
ಜವಗೆ ಸಿಕ್ಕದೆ ನಡೆವನೆ ಶಿವಯೋಗಿ .....

ಇದು ಒಬ್ಬ ಮಹಾನ್ ಶಿವಯೋಗಿ ಸಂಸಾರದಲ್ಲೇ ಇದ್ದು ಸರಿಯಾದ ನಡತೆಯಿಂದ ಮಾಯೆಯನ್ನು, ಮರಣವನ್ನು ಗೆದ್ದವನ ನಡೆ. ಅವನು ಸಂಸಾರದಲ್ಲೇ ಇದ್ದವನು, ತನ್ನ ನಡತೆಯಿಂದ ಮಾಯೆಯನ್ನು ಗೆದ್ದವನು. ಕರ್ಮದಲ್ಲೇ ಆತ ಇದ್ದಾನೆ, ಆದರೆ ಕರ್ಮದ ಫಲವನ್ನು ಅಪೇಕ್ಷಿಸದೆ, ಬ್ರಹ್ಮಜ್ಞಾನ ದೊರೆಯುವ ತನಕ ತ್ರಿನಯನನ ಅಂದರೆ ಶಿವನಿಗೆ ಶರಣು ಹೋಗಿ, ವಿಷಯಗಳನ್ನು ನಿರಾಕರಿಸಿ, ಯಮಪಾಶದಿಂದ ಪಾರಾಗುತ್ತಾನೆ ಶಿವಯೋಗಿ. ಅವನು ಮುಕ್ತನಾಗುತ್ತಾನೆ. ಈ ಪದದ ಸಾರ ತುಂಬ ಚೆನ್ನಾಗಿದೆ. ನಾನು ಮುಕ್ತನಾಗಬೇಕಾದರೂ ಅದಕ್ಕೆ ಸಾಧನವಾಗುವುದು ಇದೇ ಪ್ರಪಂಚ. ಪ್ರಪಂಚದಲ್ಲೇ ಇದ್ದು, ಸಾಧನೆ ಮಾಡಿ ಅದರಿಂದ ವಿಮುಕ್ತಿ ಹೊಂದಬೇಕು. ಕಗ್ಗ ಹೇಳುತ್ತದೆ, ನನ್ನ ಕಲ್ಯಾಣವನ್ನು ಜಗತ್ತಿನ ಕಲ್ಯಾಣದಲ್ಲೇ ಕಾಣಬೇಕು. ಯಾಕೆಂದರೆ ನಾನು ಅದರ ಹೊರಗಿಲ್ಲ. ನನ್ನ ಆತ್ಮದ ಉತ್ಕರ್ಷವಾಗುವುದು ಈ ಜಗತ್ತಿನ ವ್ಯವಹಾರಗಳಲ್ಲೇ. ತನ್ನ ಜೀವನದ ಪರಮಸಾಧನೆ ಆಗುವುದೂ ಈ ಜಗದ ಜೀವಿತದಲ್ಲೇ. ಇದೊಂದು ಉಜ್ಜೀವನದ ಬಗೆ. ಇದೊಂದು ರೀತಿಯಲ್ಲಿ ಈಜಿ ನದಿದಾಟುವ ಬಗೆ. ನದಿ ದಾಟಬೇಕಾದರೆ ನೀರಿಗೇ ಹಾರಬೇಕು. ನೀರನ್ನು ಹಿಂದೆ ತಳ್ಳಿದಾಗ ಮುಂದೆ ಪ್ರಯಾಣ. ಅಂತೆಯೇ ಪ್ರಪಂಚದಲ್ಲೇ ಇರಬೇಕು. ಅದಕ್ಕೆ ಅಂಟಿಕೊಳ್ಳದೆ, ಹಿಂದೆ ತಳ್ಳುತ್ತ ಮುಂದೆ ಸಾಗುವ, ಅದರಲ್ಲೇ ಆನಂದವನ್ನು ಕಾಣುವವನೇ ನಿಜವಾದ ಸುಖಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.