ADVERTISEMENT

ಮೈಸೂರು ದಸರಾ|ಭಾರ ಹೊರುವ ತಾಲೀಮು ಶುರು: 500 ಕೆ.ಜಿ ಹೊತ್ತ ಕ್ಯಾಪ್ಟನ್‌ ಅಭಿಮನ್ಯು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 2:34 IST
Last Updated 4 ಸೆಪ್ಟೆಂಬರ್ 2025, 2:34 IST
ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಬುಧವಾರ 500 ಕೆ.ಜಿ ಭಾರ ಹೊತ್ತು ಸಾಗಿದ ಅಂಬಾರಿ ಆನೆ ‘ಅಭಿಮನ್ಯು’ ಹಾಗೂ ಗಜಪಡೆಯನ್ನು ನೋಡಲು ಜಮಾಯಿಸಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.
ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಬುಧವಾರ 500 ಕೆ.ಜಿ ಭಾರ ಹೊತ್ತು ಸಾಗಿದ ಅಂಬಾರಿ ಆನೆ ‘ಅಭಿಮನ್ಯು’ ಹಾಗೂ ಗಜಪಡೆಯನ್ನು ನೋಡಲು ಜಮಾಯಿಸಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.   

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ‘ಜಂಬೂಸವಾರಿ’ಗೆ 28 ದಿನ ಬಾಕಿ ಇದ್ದು, ಅಂಬಾರಿ ಆನೆ ‘ಅಭಿಮನ್ಯು’ಗೆ ಭಾರ ಹೊರಿಸುವ ತಾಲೀಮು ಬುಧವಾರ ಶುರುವಾಯಿತು.  

ಅರಮನೆಯಿಂದ 5 ಕಿ.ಮೀ ದೂರದ ಬನ್ನಿಮಂಟಪಕ್ಕೆ ಸುಮಾರು 500 ಕೆ.ಜಿ ಭಾರ ಹೊತ್ತ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಹೇಮಾವತಿ ಜೊತೆಗೆ ಗಾಂಭೀರ್ಯದಿಂದ ಹೆಜ್ಜೆ ಹಾಕಿದನು. ಉಳಿದ 11 ಆನೆಗಳು ಅವರನ್ನು ಅನುಸರಿಸಿದವು. ‘ಗೋಪಿ’ ವಿಶ್ರಾಂತಿಯಲ್ಲಿದ್ದನು. 

ಅರಮನೆ ಆವರಣದಲ್ಲಿನ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಡಿಸಿಎಫ್ ಐ.ಬಿ.ಪ್ರಭುಗೌಡ ಸಂಜೆ 4.02ಕ್ಕೆ ‘ಅಭಿಮನ್ಯು’ ಹಾಗೂ ಕುಮ್ಕಿಗಳಾದ ‘ಹೇಮಾವತಿ’ ಹಾಗೂ ‘ಕಾವೇರಿ’ ಆನೆಗಳಿಗೆ ಪೂಜೆ ಸಲ್ಲಿಸಿ ಭಾರ ಹೊರಿಸುವ ತಾಲೀಮಿಗೆ ಚಾಲನೆ ನೀಡಿದರು. 

ADVERTISEMENT

ಅರಮನೆ ಅರ್ಚಕ ಪ್ರಹ್ಲಾದ ರಾವ್‌ ಪೂಜಾ ವಿಧಿ–ವಿಧಾನ ನೆರವೇರಿಸಿದರು. ಅರಿಸಿನ, ಗಂಧವನ್ನಿಟ್ಟು, ಧೂಪ–ದೀಪದ ಆರತಿ ಮಾಡಿದರು. ಪಾದಗಳಿಗೆ ಹೂಗಳನ್ನಿಟ್ಟು ಪೂಜೆ ಸಲ್ಲಿಸಿದರು. ಹಣ್ಣು, ಕಾಯಿ, ಕಬ್ಬುಗಳ ನೈವೈದ್ಯ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹೂಗಳನ್ನು ನೀಡಿ ‘ದುರ್ಗಾ ಸ್ತೋತ್ರ’ವನ್ನು ಹೇಳಿಸಿ, ಪುಷ್ಪವೃಷ್ಟಿ ಮಾಡಿಸಿದರು. 

ಮೊದಲಿಗೆ ಆನೆಗಳನ್ನು ಕುಳ್ಳಿರಿಸಿದ ಮಾವುತರು ನಮ್ದಾ ಗಾದಿ (ಮೆತ್ತನೆಯ ಹಾಸಿಗೆ)ಯನ್ನು ಆನೆಯ ಬೆನ್ನ ಮೇಲೇರಿಸಿ ಕಟ್ಟಿದರು. ನಂತರ, ವಿವಿಧ ತೂಕಗಳ ಮರಳಿನ ಮೂಟೆಗಳನ್ನು ಹೊರಿಸಲಾಯಿತು. ನಂತರ ಪ್ರಹ್ಲಾದ ರಾವ್ ಆರತಿ ಬೆಳಗಿದರೆ, ತಾಲೀಮು ಉಸ್ತುವಾರಿ ಅಕ್ರಂ ಈಡುಗಾಯಿ ಒಡೆದರು. 

‘ಅಭಿಮನ್ಯು’, ‘ಕಾವೇರಿ’ ಹಾಗೂ ‘ಹೇಮಾವತಿ’ಯನ್ನು ‘ಭೀಮ’, ‘ಏಕಲವ್ಯ’, ‘ಸುಗ್ರೀವ’, ‘ಮಹೇಂದ್ರ’, ‘ಪ್ರಶಾಂತ’, ‘ಕಾವೇರಿ’, ‘ಕಂಜನ್’, ‘ರೂಪ’, ಶ್ರೀಕಂಠ’ ಹಾಗೂ ‘ಧನಂಜಯ’ ಆನೆಗಳು ಅನುಸರಿಸಿದವು. ಮಧ್ಯದಲ್ಲಿ ಅನುಭವಿಗಳಾದ ‘ಮಹೇಂದ್ರ’, ಕೊನೆಯಲ್ಲಿನ ‘ಅರ್ಜುನ’ನ ಜಾಗದಲ್ಲಿ ‘ಧನಂಜಯ’ ಇದ್ದು, ಗಜಪಡೆ ಸಾಲನ್ನು ನಿರ್ದೇಶಿಸುತ್ತಿದ್ದರು. 

ಕೈ ಮುಗಿದರು: ಆನೆಗಳು ‘ಜಂಬೂಸವಾರಿ’ ಮಾರ್ಗದಲ್ಲಿ ಸಾಗುತ್ತಿದ್ದಾಗ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಆನೆಗಳೊಂದಿಗೆ ಸೆಲ್ಫಿ, ಫೋಟೊ ತೆಗೆದುಕೊಂಡರು. ಗಜಪಡೆಗೆ ಕೈ ಮುಗಿದರು. 

ಸಂಜೆ 4.42ಕ್ಕೆ ಅರಮನೆ ಬಲರಾಮ ದ್ವಾರದಿಂದ ಹೊರಟ ಆನೆಗ ಬನ್ನಿಮಂಟಪ ತಲುಪಲು ಒಂದೂವರೆ ಗಂಟೆ ತೆಗೆದುಕೊಂಡವು. ನಂತರ 20 ನಿಮಿಷ ವಿರಮಿಸಿ ರಾತ್ರಿ 8ಕ್ಕೆ ಅರಮನೆಗೆ ವಾಪಸಾದವು.

‘ಐದು ಆನೆಗಳಿಗೆ ತಾಲೀಮು’
ಡಿಸಿಎಫ್ (ವನ್ಯಜೀವಿ) ಐ.ಬಿ.ಪ್ರಭುಗೌಡ ಮಾತನಾಡಿ ‘5 ವರ್ಷದಿಂದ ಅಂಬಾರಿ ಹೊರುತ್ತಿರುವ ಅಭಿಮನ್ಯುವಿಗೆ ಭಾರ ಹೊರಿಸುವ ಅಭ್ಯಾಸ ಆರಂಭಿಸಲಾಗಿದೆ. 300 ಕೆ.ಜಿ  ತೂಕದ ಮರಳಿನ ಮೂಟೆಗಳ ಜತೆಗೆ 200 ಕೆ.ಜಿಯಷ್ಟು ನಮ್ದಾ ಗಾದಿ ಚಾಪು ಹಗ್ಗಗಳು ತೊಟ್ಟಿಲು ಸೇರಿ ಸುಮಾರು 500 ಕೆ.ಜಿಯಷ್ಟು ಭಾರವಿದೆ’ ಎಂದರು.  ‘ಧನಂಜಯ ಮಹೇಂದ್ರ ಪ್ರಶಾಂತ ಭೀಮ ಏಕಲವ್ಯನಿಗೆ ನಂತರ ಹೊರಿಸಲಾಗುವುದು. ಮತ್ತೆ ಅಭಿಮನ್ಯು ಹೊರಲಿದ್ದಾನೆ. ಹಂತ ಹಂತವಾಗಿ ಭಾರವನ್ನು ಸಾವಿರ ಕೆ.ಜಿ ವರೆಗೂ ಹೆಚ್ಚಿಸಲಾಗುವುದು. ಭಾರದ ನಡಿಗೆ ತಾಲೀಮಿನ ನಂತರ ಆನೆಗಳಿಗೆ ವಿಶ್ರಾಂತಿ ಬೇಕಾಗುತ್ತದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.