
ಚಿತ್ರ; ಗೆಟ್ಟಿ
ವೀಳ್ಯದೆಲೆ ಇಲ್ಲದೆ ತಾಂಬೂಲ ಹಾಕಲು ಸಾಧ್ಯವೇ ಇಲ್ಲ. ಹಿಂದೂ ಸಂಪ್ರದಾಯದಲ್ಲಿ ಈ ಎಲೆಗೆ ವಿಶೇಷ ಪ್ರಾತಿನಿಧ್ಯವಿದೆ. ಅಲ್ಲದೆ, ಯಾವುದೇ ಶುಭಕಾರ್ಯವು ವೀಳ್ಯದೆಲೆ ಇಲ್ಲದೆ ಅಪೂರ್ಣ. ಪುರಾಣಗಳಲ್ಲೂ ವೀಳ್ಯದೆಲೆ ಕುರಿತು ಕಥೆಗಳಿರುವುದನ್ನು ಕಾಣಬಹುದು.
ವೀಳ್ಯದೆಲೆಯನ್ನು ಪೂಜೆ, ಹೋಮ, ಹವನ, ಮದುವೆ ಹಾಗೂ ಇತರೆ ಎಲ್ಲಾ ಶುಭ ಕಾರ್ಯಗಳಲ್ಲಿ ಬಳಸುತ್ತೇವೆ. ವೀಳ್ಯದೆಲೆ ಇಲ್ಲದೆ ಪೂಜೆ ನಡೆಯುವುದಿಲ್ಲ. ತೆಂಗಿನಕಾಯಿಗೆ ಇರುವಷ್ಟೇ ಮಹತ್ವ ವೀಳ್ಯದೆಲೆಗೂ ಇದೆ.
ವೀಳ್ಯದೆಲೆಯ ಮೇಲ್ಭಾಗದಲ್ಲಿ ಲಕ್ಷ್ಮೀ, ಮಧ್ಯಭಾಗದಲ್ಲಿ ಸರಸ್ವತಿ, ಕೊನೆಯ ಭಾಗದಲ್ಲಿ ಗೌರಿಯ ವಾಸವಿದ್ದಾರೆ ಎಂಬ ನಂಬಿಕೆ ಇದೆ. ಈ ಕಾರಣದಿಂದಲೇ ಕೆಲವರು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಕೈಯನ್ನು ವೀಳ್ಯದೆಲೆಯ ರೂಪದಂತೆ ಜೋಡಿಸಿಕೊಂಡು ‘ಕರಾಗ್ರೆ ವಸತೆ ಲಕ್ಷ್ಮೀ, ಕರಮಧ್ಯೆ ಸರಸ್ವತಿ, ಕರಮೂಲೇತು ಸ್ಥಿತಾ ಗೌರಿ ಪ್ರಭಾತೇ ಕರದರ್ಶನಂ’ ಎನ್ನುವ ಶ್ಲೋಕ ಹೇಳಿ ದಿನ ಆರಂಭಿಸುತ್ತಾರೆ.
ವೀಳ್ಯದೆಲೆಯಿಂದಲೂ ಮಾಲೆ ಮಾಡಲಾಗುತ್ತದೆ. ಆ ಮಾಲೆಯನ್ನು ಆಂಜನೇಯನಿಗೆ ಹಾಗೂ ದುರ್ಗಾ ದೇವಿಗೆ ಅರ್ಪಣೆ ಮಾಡಲಾಗುತ್ತದೆ.
ಮಂಗಳವಾರದಂದು ಹನುಮನಿಗೆ ವೀಳ್ಯದೆಲೆ ಮಾಲೆ ಅರ್ಪಿಸಿ, ಪೂಜೆ ಸಲ್ಲಿಸುವುದರಿಂದ ದುಷ್ಟ ಶಕ್ತಿಗಳ ಪ್ರಭಾವದಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ.
ವೀಳ್ಯದೆಲೆಯಲ್ಲಿ ದೀಪವನ್ನು ಕೂಡ ಹಚ್ಚಲಾಗುತ್ತದೆ. ವೀಳ್ಯದೆಲೆಗೆ ಅರಿಸಿನ ಕುಂಕುಮ ಹಚ್ಚಿ, ಅದರ ಮೇಲೆ ಹಣತೆ ಇಟ್ಟು, ತುಪ್ಪದ ದೀಪ ಹಚ್ಚಬೇಕು. ಹೀಗೆ ಜೋಡಿ ದೀಪವನ್ನು ಹಚ್ಚುವುದರಿಂದ ಲಕ್ಷ್ಮೀ ಕೃಪೆ ಸದಾ ನಿಮ್ಮ ಮೇಲಿರುತ್ತದೆ. ಮಾಂಗಲ್ಯ ಭಾಗ್ಯ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ.
ಪುರಾಣಗಳ ಪ್ರಕಾರ, ಸೀತಾ ಮಾತೆಯು ಆಂಜನೇಯನಿಗೆ ಧನ್ಯವಾದ ಹಾಗೂ ಗೌರವ ಅರ್ಪಿಸಲು ವೀಳ್ಯದೆಲೆ ಹಾರವನ್ನು ಹಾಕಿದ್ದರು ಎಂದು ಹೇಳಲಾಗುತ್ತದೆ. ಆಂಜನೇಯ ತಾನು ರಾಮನ ಬಂಟ, ರಾಮನ ಸಂದೇಶವನ್ನು ತಂದಿದ್ದೇನೆ ಎಂದು ತಿಳಿಸಿದಾಗ ಸೀತಾ ಮಾತೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಂಜನೇಯ ಸೀತೆಯ ಆಶೀರ್ವಾದ ಕೋರಿದಾಗ, ಸೀತೆಯ ವೀಳ್ಯದೆಲೆಗಳನ್ನು ಕಿತ್ತು, ಹಾರ ಮಾಡಿ ಆಂಜನೇಯನಿಗೆ ಹಾಕಿದಳಂತೆ ಎಂದು ಹೇಳಲಾಗುತ್ತದೆ. ಜನಪದ ವೈದ್ಯದಲ್ಲಿ ವೀಳ್ಯದೆಲೆಯನ್ನು ಔಷಧವಾಗಿಯೂ ಬಳಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.