
ಪ್ರಾತಿನಿಧಿಕ ಚಿತ್ರ
ಶಕ್ತಿಯ ಮೂಲವಾದ ಸೂರ್ಯ ದಕ್ಷಿಣದಿಂದ ಉತ್ತರಾಯಣ ಕಡೆಗೆ ತನ್ನ ಪಥ ಬದಲಿಸುವ ಸಮಯ ಭೂಮಿಗೂ ತಾಯ್ತನದ ಸಂತಸ. ಈ ಬದಲಾವಣೆಯ ಉತ್ಸಾಹವೇ ಸಂಕ್ರಾಂತಿಯ ಸಂಭ್ರಮ.
ನಿಸರ್ಗದ ಬದಲಾವಣೆಯನ್ನು ಬದುಕಿಗೂ ಅನ್ವಯಿಸಿಕೊಂಡು ಭೂ ತಾಯಿಗೆ ನಮಿಸುವ ಈ ಹಬ್ಬದ ಆಚರಣೆ ಆಯಾ ಪ್ರದೇಶಕ್ಕೆ ತಕ್ಕಂತೆ ವಿಭಿನ್ನತೆಯನ್ನೂ ಹೊಂದಿದೆ. ಕರ್ನಾಟಕದ ಜನತೆಗೆ ಇದು ಸುಗ್ಗಿ ಹಬ್ಬವೆಂದೆ ಖ್ಯಾತಿ. ಉತ್ತರ ಕರ್ನಾಟಕದವರಿಗೆ ಜೋಳ, ಹಳೇ ಮೈಸೂರು ಭಾಗದವರಿಗೆ ರಾಗಿ, ಮಲೆನಾಡು, ಕರಾವಳಿಯವರಿಗೆ ಅಡಿಕೆ, ಕೆಲಕಡೆ ಭತ್ತ, ಕಬ್ಬು... ಹೀಗೆ ತಮ್ಮ ಹೊಟ್ಟೆ ತುಂಬಿಸುವ ಫಸಲಿನ ರಾಶಿ ಅಥವಾ ಕಣ ಮಾಡುವುದು ಸಂಕ್ರಾಂತಿಯ ಸೊಗಡು.
ಸಂಕ್ರಾಂತಿ ಕೃಷಿಕರ ಪಾಲಿಗೆ ಸುಗ್ಗಿ ಹಬ್ಬ. ಎಳ್ಳು ಅಮವಾಸ್ಯೆಗೆ ಭೂತಾಯಿಗೆ ನಮಿಸಿ ಚೆರಗ ಚೆಲ್ಲಿ, ಭೂತಾಯಿ ಮಡಿಲಲ್ಲಿ ಕುಳಿತು ಊಟ ಮಾಡಿದರೆ, ಸಂಕ್ರಾಂತಿಯಂದು ಭೂಮಿ ನೀಡಿದ ಕೃಷಿ ಉತ್ಪನ್ನಕ್ಕೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ, ಪ್ರಕೃತಿ ಮಡಿಲಲ್ಲಿ ಕುಳಿತು ಸಾಮೂಹಿಕ ಭೋಜನ ಮಾಡಲಾಗುತ್ತದೆ. ಅನ್ನ ನೀಡುವ ಭೂತಾಯಿಯ ಆರಾಧನೆ ಹಿಂದೂಗಳ ಪ್ರಮುಖ ಆಚರಣೆ ಮತ್ತು ನಂಬಿಕೆ. ನಮಗೆ ಎಲ್ಲವನ್ನೂ ನೀಡುವ ಭೂಮಿಗೆ ನಾವೆಂದೂ ಋಣಿಯಾಗಿರಬೇಕು ಎನ್ನುವ ಧ್ಯೇಯ ಅದರಲ್ಲಿ ಅಡಗಿದೆ.
ಮಕರ ಸಂಕ್ರಾಂತಿ ಹಬ್ಬಕ್ಕೆ ಬೆಳೆಗಳೆಲ್ಲ ಮೈದುಂಬಿ ನಳನಳಿಸುತ್ತವೆ. ಮುಂಗಾರಿನಲ್ಲಿ ಬಿತ್ತಲ್ಪಟ್ಟ ಶೇಂಗಾ, ಜೋಳ, ಮೆಕ್ಕೆಜೋಳ, ಭತ್ತ, ಎಳ್ಳು, ತೊಗರಿ, ಅವರೆ, ಕಬ್ಬು, ಸಜ್ಜೆ, ಹಸಿ ಕಡಲೆ ಸುಲಿಗಾಯಿ ಫಸಲು ನೀಡಲು ಸಜ್ಜಾಗಿ, ಭೂಮಿ ಹಸಿರಿನಿಂದ ಸಿಂಗರಿಸಿಕೊಂಡಿರುತ್ತವೆ.
ಉತ್ತರಕರ್ನಾಟಕದಲ್ಲಿ ಸಂಕ್ರಾಂತಿ ಸೊಬಗು
ಉತ್ತರ ಕರ್ನಾಟಕ ಭಾಗದಲ್ಲಿ ಸಂಕ್ರಾಂತಿ ಎಂದರೆ ನಮ್ಮವರೊಂದಿಗೆ ಹಬ್ಬದೂಟ ಮಾಡಿ ಪ್ರೀತಿ ಹಬ್ಬಿಸಿ, ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ‘ನಾವು ನೀವು ಎಳ್ಳು- ಬೆಲ್ಲದ್ಹಂಗ ಇರುನು’ ಎಂದು ಪರಸ್ಪರರೆಡೆಗಿನ ಬಾಂಧವ್ಯ ವೃದ್ಧಿಸಿಕೊಳ್ಳುವುದು. ಇಲ್ಲಿ ಮೊದಲು ನೆನಪಾಗುವುದೇ ಮಾದ್ಲಿ ಮತ್ತು ಸಜ್ಜಿ ರೊಟ್ಟಿ. ಜೊತೆಗೆ ಜೋಳದ ಕಡಬು, ಪುಂಡಿ ಪಲ್ಯ, ಎಣ್ಣೆಗಾಯಿ ಪಲ್ಯ, ವಿವಿಧ ಸೊಪ್ಪು ಪಲ್ಯ, ಕೆಂಪು ಚಟ್ನಿ, ಶೇಂಗಾ ಚಟ್ನಿ, ಗುರೆಳ್ಳ ಚಟ್ನಿ, ಪಚಡಿ, ಹೋಳಿಗೆ, ಮೊಸರನ್ನ, ಅನ್ನ, ಸಾರು, ಹಪ್ಪಳ, ಸಂಡಿಗೆ, ಮಜ್ಜಿಗೆ, ಅಂಬಲಿ... ಹೀಗೆ ನೆನೆದರೆ ಬಾಯಲ್ಲಿ ನೀರುಣಿಸುವ ಖಾದ್ಯಗಳೆಲ್ಲ ಸಂಕ್ರಾಂತಿ ನೆಪದಲ್ಲಿ ನಮ್ಮ ಮುಂದಿರುತ್ತವೆ.
ಗೃಹಿಣಿಯರು ಬೆಳಿಗ್ಗೆ ಬೇಗ ಎದ್ದು, ಅಡುಗೆ ಮಾಡಿ, ಮನೆ ಸ್ವಚ್ಛಗೊಳಿಸಿ, ತೋರಣ, ರಂಗೋಲಿ ಹಾಕಿ ಅಲಂಕರಿಸಿದರೆ; ದನ, ಕರುಗಳನ್ನು ತೊಳೆದು, ಪೂಜೆ ಮಾಡುವ ಸರದಿ ಮನೆಯ ಗಂಡಸರದ್ದು. ಎಲ್ಲಾ ಒಟ್ಟಾಗಿ ಕಾರು, ಬೈಕ್, ಟ್ರ್ಯಾಕ್ಟರ್, ಎತ್ತುಬಂಡಿ ತೆಗೆದುಕೊಂಡು ಸ್ನೇಹಿತರು, ಸಂಬಂಧಿಕರ ಜೊತೆ ಸೇರಿ ನದಿ ತಟಕ್ಕೆ ಹೋಗಿ, ಪೂಜೆ ಸಲ್ಲಿಸಿ, ಪುಣ್ಯ ಸ್ನಾನ, ಸಾಮೂಹಿಕ ಭೋಜನ ಮಾಡಿ, ಎಳ್ಳು- ಬೆಲ್ಲ ವಿನಿಮಯ ಮಾಡಿಕೊಂಡು, ಸ್ವಲ್ಪ ವಿಶ್ರಾಂತಿ ಪಡೆದು, ಪ್ರೀತಿ ಹೊತ್ತು, ಬಾಂಧವ್ಯ ಗಟ್ಟಿ ಮಾಡಿಕೊಂಡು ಮರಳುತ್ತಾರೆ. ತಮ್ಮ ಹಿಂದೂಯೇತರ ಸ್ನೇಹಿತರನ್ನು ಜೊತೆಗೆ ಕರೆದುಕೊಂಡು ಹೋಗಿ ಊಟ ಮಾಡಿ ವಿವಿಧತೆಯಲ್ಲಿ ಏಕತೆ ಎನ್ನುವ ಭಾವವನ್ನು ಗಟ್ಟಿಗೊಳಿಸುತ್ತ, ಸಾಮರಸ್ಯ ಸಾರುತ್ತಾರೆ.
ದಕ್ಷಿಣ ಭಾಗದಲ್ಲಿ ಜಾನುವಾರುಗಳನ್ನು ಬೆಂಕಿ ಹಾಯಿಸುವ ಸಂಪ್ರದಾಯ ಉಂಟು. ಜಾನುವಾರುಗಳನ್ನು ಅಲಂಕರಿಸಿ ಒಣಹುಲ್ಲಿಗೆ ಬೆಂಕಿ ಹಾಕಿ ಆ ಕಿಚ್ಚದ ಮೇಲೆ ಅವುಗಳನ್ನು ಓಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.