
ಉಜ್ಜಯಿನಿ ಜಿಲ್ಲಾ ಅಧಿಕೃತ ಚಿತ್ರ
ಭಾರತೀಯರಲ್ಲಿ ಸರ್ಪಗಳಿಗೆ ಪೂಜಾನೀಯ ಸ್ಥಾನ ನೀಡಲಾಗಿದೆ. ಸರ್ಪಗಳ ಕುರಿತು ನಮ್ಮ ಪುರಾಣದಲ್ಲಿ ಹಲವಾರು ಕಥೆಗಳಿವೆ. ಸರ್ಪಗಳು ದೇವರಿಗೆ ಸಮ ಎಂಬ ನಂಬಿಕೆ ಇದೆ. ಜಾತಕಾನುಸಾರವಾಗಿ ಸರ್ಪ ದೋಷವಿದ್ದರೆ, ಅವುಗಳನ್ನು ಪೂಜಿಸುವುದರ ಮೂಲಕ ಪರಿಹಾರ ಮಾಡಿಕೊಳ್ಳಬಹುದು.
ಮಾತ್ರವಲ್ಲ ಸರ್ಪದೋಷ ಪರಿಹಾರದಿಂದ ವಿವಾಹ, ಸಂತಾನ, ದಾಂಪತ್ಯ ಸುಖ ಹಾಗೂ ಉದ್ಯೋಗಗಳು ದೊರೆತಯುತ್ತವೆ ಎಂಬ ನಂಬಿಕೆ ಇದೆ. ಹಾಗಾಗಿ ನೂರಾರು ಸರ್ಪಗಳ ದೇವಾಲಯಗಳಿವೆ. ಅವುಗಳ ಪೈಕಿ ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಭೇಟಿ ನೀಡಲು ಅವಕಾಶವಿರು ನಾಗ ದೇವಸ್ಥಾನದ ಬಗ್ಗೆ ತಿಳಿಯೋಣ.
ಮಧ್ಯಪ್ರದೇಶದಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದ 2ನೇ ಮಹಡಿಯಲ್ಲಿರುವ ಶ್ರೀ ನಾಗಚಂದ್ರೇಶ್ವರ ದೇವಸ್ಥಾನದ ಬಾಗಿಲುಗಳು ವರ್ಷಕ್ಕೊಮ್ಮೆ ತೆರೆಯಲಾಗುತ್ತದೆ. ಅಂದರೆ ನಾಗರ ಪಂಚಮಿ ಹಬ್ಬದಂದು ತೆರೆಯಲಾಗುತ್ತದೆ. ಈ ದೇವಸ್ಥಾನ ಉಜ್ಜಯಿನಿಯ ಪ್ರಸಿದ್ಧ ದೇವಾಲಯಗಳ ಪೈಕಿ ಒಂದಾಗಿದೆ.
ವರ್ಷವೆಲ್ಲ ಬಾಗಿಲು ಹಾಕಿರುವ ಈ ದೇವಾಲಯ ನಾಗಪಂಚಮಿಯಂದು ಮಾತ್ರ ತೆರೆಯಲ್ಪಡುತ್ತದೆ. ಈ ದಿನ ಇಲ್ಲಿಗೆ ಭಕ್ತರು ನಾಗದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಅದರಲ್ಲಿಯೂ ನಾಗರಪಂಚಮಿಯಂದು ಮಧ್ಯರಾತ್ರಿ 12ಗಂಟೆಯಿಂದಲೇ ಭಕ್ತರು ಇಲ್ಲಿಗೆ ಬರಲಾರಂಭಿಸುತ್ತಾರೆ.
ಅಪರೂಪದ ವಿಗ್ರಹ:
ಬೇರೆಲ್ಲೂ ಕಾಣದ ವಿಭಿನ್ನವಾದ ಶಿವ ಹಾಗೂ ಪಾರ್ವತಿಯ ಮೂರ್ತಿ ಕೂಡ ಇಲ್ಲಿದೆ. ಈ ವಿಗ್ರಹದಲ್ಲಿ ವಿಶೇಷವಾಗಿ 10 ಹೆಡೆಯ ಶೇಷನಾನಿಂದ ಸುತ್ತುವರೆದಿದೆ. ಅದರ ಮೇಲೆ ಶಿವ ಮತ್ತು ಪಾರ್ವತಿ ಆಸೀನರಾಗಿದ್ದಾರೆ. ಈ ರೀತಿಯ ಶಿವನ ವಿಗ್ರಹ ಈವರೆಗೆ ಬೇರೆಲ್ಲೂ ಪತ್ತೆಯಾಗಿಲ್ಲ.
ದೇವಾಲಯದ ಇತಿಹಾಸ
ಈ ದೇವಾಲಯವನ್ನು 11ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಪರಮಾರ ರಾಜವಂಶದ ರಾಜನಾಗಿದ್ದ ಭೋಜನು ಈ ದೇವಾಲಯವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ಇಲ್ಲಿ ಪ್ರತಿಸ್ಠಾಪಿಸಲಾದ ಈ ವಿಗ್ರಹವನ್ನು ನೇಪಾಳದಿಂದ ತರಲಾಯಿತು ಎಂಬ ಹತ್ತಾರು ಕಥೆಗಳು ಚಾಲ್ತಿಯಲ್ಲಿವೆ. ಕಾಲಾನಂತರದಲ್ಲಿ ಈ ದೇವಾಲಯವನ್ನು 1732ರಲ್ಲಿ ಸಿಂಧಿಯಾ ಕುಟುಂಬದ ಮಹಾರಾಜ ರಾಣೋಜಿ ಸಿಂಧಿಯಾ ನವೀಕರಿಸಿದರು ಎಂಬ ಉಲ್ಲೇಖ ಸಿಗುತ್ತವೆ. ಇಲ್ಲಿಗೆ ಭೇಟಿ ನೀಡುವುದರಿಂದ ನಾಗದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ದಿನದ 24 ಗಂಟೆ ಪೂಜೆ:
ಈ ದೇವಾಲಯದ ವಿಶೇಷ ಎಂದರೆ ನಾಗರ ಪಂಚಮಿಯ ಹಿಂದಿನ ದಿನದ ರಾತ್ರಿ 12ಗಂಟೆಗೆ ಬಾಗಿಲು ತೆರೆದು ಪೂಜಾ ಕಾರ್ಯ ಆರಂಭವಾದರೆ ಪಂಚಮಿಯ ದಿನ ಮುಗಿಯುವ ಮರುದಿನ 12ಗಂಟೆ ಗಂಟೆಯವರೆಗೆ ನಿರಂತರ ಪೂಜೆ ನಡೆಯುತ್ತದೆ. ದಿನದ 24 ಗಂಟೆ ಪೂಜಿಸಲ್ಪಡುವ ವಿರಳ ದೇವಾಲಯಗಳಲ್ಲಿ ಒಂದಾಗಿದೆ.
ಭಾರತದ ವಿವಿಧ ಭಾಗಗಳಲ್ಲಿ ನಾಗದೇವತೆಗಳ ದೇವಾಲಯಗಳಿವೆ. ಆದರೆ ಈ ದೇವಾಲಯವು ವಿಭಿನ್ನ ಮತ್ತು ವಿಶೇಷ ದೇವಾಲಯವಾಗಿದೆ. ಇಲ್ಲಿಗೆ ಭೇಟಿ ನೀಡಿ ಬಂದರೆ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.