ಬಾಗಲಕೋಟೆ: ಈ ವರ್ಷ ಮಳೆ ಚೆನ್ನಾಗಿಯೇ ಆಗಿತ್ತು. ಮೆಣಸಿನಕಾಯಿ ಬೆಳೆಯೂ ಚೆನ್ನಾಗಿ ಬಂದಿತ್ತು. ಆದರೆ, ಬೆಲೆ ಇಲ್ಲದ್ದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜೋಳ, ಕಡಲೆ, ಗೋಧಿ ಬೆಳೆದುಕೊಡಿದ್ದ ರೈತರು ಕಳೆದ ಕೆಲ ವರ್ಷಗಳಿಂದ ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಬೆಲೆ ಕುಸಿತದಿಂದಾಗಿ ಮೆಣಸಿನಕಾಯಿ ರೈತರ ಪಾಲಿಗೆ ಖಾರವಾಗಿ ತಳಮಳ ಹೆಚ್ಚಿಸಿದೆ.
ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಮೆಣಸಿನಕಾಯಿಯನ್ನು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಈಗ 12 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.
ಕಳೆದ ವರ್ಷ ಗುಂಟೂರು ಮೆಣಸಿನಕಾಯಿ ಪ್ರತಿ ಕ್ವಿಂಟಲ್ಗೆ ₹15 ಸಾವಿರಕ್ಕೂ ಹೆಚ್ಚಿತ್ತು. ಈ ಬಾರಿ ₹9 ರಿಂದ ₹13 ಸಾವಿರ ಸಿಗುತ್ತಿದೆ. ಬ್ಯಾಡಗಿ ಮೆಣಸಿನಕಾಯಿ ಕಳೆದ ವರ್ಷ ಪ್ರತಿ ಕ್ವಿಂಟಲ್ ಗೆ ₹ 30 ಸಾವಿರದಿಂದ ₹35 ಸಾವಿರವರೆಗೆ ಮಾರಾಟವಾಗಿತ್ತು. ಈ ಬಾರಿ ₹18 ರಿಂದ ₹25 ಸಾವಿರವರೆಗೆ ಮಾರಾಟವಾಗುತ್ತಿದೆ.
‘ಕಳೆದ ವರ್ಷ ಬೆಲೆ ಸಿಗಲಿಲ್ಲ ಎಂದು ಕೋಲ್ಡ್ ಸ್ಟೋರೇಜ್ ಗಳಲ್ಲಿ ಸ್ಟಾಕ್ ಮಾಡಿಡಲಾಗಿತ್ತು. ಅದೂ ಸೇರಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕವಾಗಿದೆ. ನಿರೀಕ್ಷಿತ ಬೆಲೆ ಸಿಗುತ್ತಿಲ್ಲ’ ಎಂದು ಸೂಳಿಭಾವಿಯ ಹುನಗುಂದ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರವಿ ಸಜ್ಜನರ ತಿಳಿಸಿದರು.
‘ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿಗಳೆರಡನ್ನೂ ಬೆಳೆದಿದ್ದೇವೆ. ಪ್ರತಿ ಎಕರೆಗೆ ಬ್ಯಾಡಗಿ ಮೆಣಸಿನಕಾಯಿ ಮೂರು ಕ್ವಿಂಟಲ್ ಇಳುವರಿ ಬರುತ್ತದೆ. ಗುಂಟೂರು 7 ರಿಂದ 9 ಕ್ವಿಂಟಲ್ನಷ್ಟು ಬರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದೆ ಎಂದು ರೈತ ವಿರೂಪಾಕ್ಷಪ್ಪ ಹೇಳಿದರು.
‘ಎರಡು ವರ್ಷದ ಹಿಂದೆ ಉತ್ತಮ ಬೆಲೆ ದೊರೆತಿತ್ತು. ಇದರಿಂದ ಮೆಣಸಿನಕಾಯಿ ಬೆಳೆಯಲು ಆರಂಭಿಸಿದ್ದೆವು. ಎರಡು ವರ್ಷಗಳಿಂದ ಉತ್ತಮ ಬೆಲೆ ಸಿಗದಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ರೈತರು ಅಳಲು ತೋಡಿಕೊಂಡರು.
ಬಾಗಲಕೋಟೆಯಲ್ಲಿಲ್ಲ ಮಾರುಕಟ್ಟೆ
ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಗುಂಟೂರು ಹಾಗೂ ಬ್ಯಾಡಗಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಮಾರುಕಟ್ಟೆ ಇಲ್ಲ. ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದ ವರ್ಷ ಒಣ ಮೆಣಸಿನಕಾಯಿ ಖರೀದಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದಕ್ಕೆ ಉತ್ತಮ ಪ್ರತಿಕ್ರಿಯೆ ರೈತರು ಹಾಗೂ ವ್ಯಾಪಾರಸ್ಥರಿಂದ ದೊರೆಯದ್ದರಿಂದ ಖರೀದಿ ನಡೆಯಲಿಲ್ಲ. ‘ಜಿಲ್ಲೆಯಲ್ಲಿ ಮೆಣಸಿನಕಾಯಿ ಖರೀದಿಗೆ ಮಾರುಕಟ್ಟೆಯಿಲ್ಲ. ಹುಬ್ಬಳ್ಳಿ ಅಥವಾ ಬ್ಯಾಡಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು. ಅದಕ್ಕೆ ಸಾರಿಗೆ ಖರ್ಚು ಹೆಚ್ಚುವರಿಯಾಗುತ್ತಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.