ಬಾಗಲಕೋಟೆ: ‘ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಬೇಕು. ಆಪರೇಷನ್ ಸಿಂಧೂರ ಮೂಲಕ ಭಯೋತ್ಪಾದಕರಿಗೆ ಪಾಠ ಕಲಿಸಲು ಸೇನೆ ಮುಂದಾಗಿದೆ. ಯುದ್ಧಕ್ಕೆ ಕರೆ ಬಂದರೆ ಈಗಲೂ ಹೋಗಲು ಸಿದ್ಧರಿದ್ದೇವೆ’ ಹೀಗೆಂದು ಜಿಲ್ಲೆಯ ಮಾಜಿ ಸೈನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
‘ಜಿಲ್ಲೆಯಲ್ಲಿ 2 ಸಾವಿರದಷ್ಟು ಮಾಜಿ ಸೈನಿಕರಿದ್ದೇವೆ. ಈಗಾಗಲೇ ಅಲ್ಲಲ್ಲಿ ಸಮಾಲೋಚನೆ ನಡೆಸಿದ್ದೇವೆ. ಯಾವುದೇ ಕ್ಷಣದಲ್ಲಿ ಕರೆ ಬಂದರೂ ಯುದ್ಧದ ಭೂಮಿಗೆ ತೆರಳುತ್ತೇವೆ’ ಎಂದರು.
‘ದೇಶದ ಒಳತಿಗಾಗಿ ದಿಟ್ಟ ಹೆಜ್ಜೆ ಇಡಲಾಗಿದೆ. ಇಲ್ಲಿಯವರೆಗೆ ಆಗಿರುವ ಯುದ್ಧಗಳೇ ಬೇರೆ. ಈ ಯುದ್ಧವೇ ಬೇರೆ. ಬಹಳ ಸಿದ್ಧತೆಯೊಂದಿಗೆ ಮಾಸ್ಟರ್ ಪ್ಲಾನ್ ಮಾಡಿಕೊಂಡು ಮುನ್ನುಗ್ಗಲಾಗಿದೆ. ಇಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು ಮಾಜಿ ಹಾಗೂ ಹಾಲಿ ಯೋಧರ ಅರೇಸೇನಾ ಪಡೆಗಳ ಸಂಘದ ಜಿಲ್ಲಾ ಅಧ್ಯಕ್ಷ ಶಿದ್ದಲಿಂಗಯ್ಯ ವಸ್ತ್ರದ ಹೇಳಿದರು.
‘ಗಡಿ ಭದ್ರತಾ ಪಡೆಯಲ್ಲಿ 26 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದೇನೆ. ನಾಯಕ ಸುಬೇದಾರನಾಗಿ ನಿವೃತ್ತಿಯಾಗಿದ್ದೇನೆ. ಯುದ್ಧ ಆರಂಭವಾದ ಮಾತ್ರಕ್ಕೆ ಜನರು ಗಾಬರಿಯಾಗುವ ಅವಶ್ಯಕತೆ ಇಲ್ಲ. ಸಾರ್ವಜನಿಕರಿಗೆ ಅವಶ್ಯಕ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿರುತ್ತದೆ. ಯುದ್ಧ ಆರಂಭವಾದರೆ ಜನರು ಹೇಗೆ ನಡೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ’ ಎಂದರು.
‘ಒಳ್ಳೆಯ ಕಾರ್ಯಾಚರಣೆ ನಡೆಯುತ್ತಿದೆ. ಭಯೋತ್ಪಾದನೆ ಬೇರು ಸಮೇತ ಕಿತ್ತು ಹಾಕಬೇಕು. ಇಲ್ಲದಿದ್ದರೆ ಅಮಾಯಕ ಸಾರ್ವಜನಿಕರು, ಸೈನಿಕರು ಆಗಾಗ ಜೀವ ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದು ಸಿಆರ್ಪಿಎಫ್ನಲ್ಲಿ ಇನ್ಸ್ಪೆಕ್ಟರ್ ಆಗಿ ನಿವೃತ್ತರಾಗಿರುವ ಪ್ರಭುಲಿಂಗಯ್ಯ ಕಾಳಹಸ್ತಿಮಠ.
‘ಭಯೋತ್ಪಾದನೆ ನಿರ್ಮೂಲನೆಗೆ ಬದ್ಧ’
ಬಾಗಲಕೋಟೆ: ಭಯೋತ್ಪಾದನೆ ನಿರ್ಮೂಲನೆಗೆ ಪ್ರಧಾನಿ ನರೇಂದ್ರ ಮೋದಿ ಆಪರೇಷನ್ ಸಿಂಧೂರ ಮೂಲಕ ಪ್ರಾರಂಭ ಮಾಡಿದ್ದಾರೆ ಅಷ್ಟೇ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಯೋತ್ಪಾದನೆ ನಿರ್ಮೂಲನೆಗೆ ಭಾರತ ಬದ್ಧವಾಗಿದೆ. ಉಗ್ರಹ 9 ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ದೇಶದ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಪ್ರಧಾನಿ ಅವರು ವಿಶ್ವಕ್ಕೆ ನೀಡಿದ್ದಾರೆ ಎಂದರು.
ಸ್ವಾಗತ: ಭಯೋತ್ಪಾದಕ ನೆಲೆಗಳ ಮೇಲಿನ ಸೇನೆಯ ದಾಳಿ ಉಗ್ರರಿಗೆ ಕಲಿಸಿದ ಪಾಠ ಮಾತ್ರವಲ್ಲ ಅವರಿಗೆ ಆಶ್ರಯ ಸೇರಿದಂತೆ ಇನ್ನಿತರ ನೆರವು ನೀಡಿ ಭಾರತದ ವಿರುದ್ಧ ಛೂಬಿಡುತ್ತಿದ್ದ ಪಾಕಿಸ್ತಾನಕ್ಕೂ ಕಲಿಸಿದ ಪಾಠವಾಗಿದೆ ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಹದ್ಲಿ ಹೇಳಿದ್ದಾರೆ.
ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಪೈಶಾಚಿಕ ಕೃತ್ಯಕ್ಕೆ ಭಾರತೀಯ ಸೇನೆ ಸೂಕ್ತ ಪ್ರತಿಕ್ರಿಯೆ ನೀಡಿದ್ದು ಶ್ಲಾಘನೀಯ.ಭಯೋತ್ಪಾದನೆಯ ಮೂಲವನ್ನೇ ಧ್ವಂಸ ಮಾಡುವ ದಿಸೆಯಲ್ಲಿ ಆಪರೇಷನ್ ಸಿಂಧೂರ ದಿಟ್ಟ ನಿರ್ಧಾರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮಾಯಕರ ಹೋದ ಜೀವ ಮರಳಿ ಬರುವುದಿಲ್ಲ. ಆ ಜೀವದ ಬೆಲೆ ಭಯೋತ್ಪಾದಕರಿಗೆ ಗೊತ್ತಾಗುವಂತೆ ಮಾಡಬೇಕು. ಪೂರ್ಣವಾಗಿ ನಿರ್ಮೂಲನೆ ಮಾಡಬೇಕು-ಪ್ರಭುಲಿಂಗಯ್ಯ ಕಾಳಹಸ್ತಿಮಠ ಮಾಜಿ ಯೋಧ
ಏರ್ಸ್ಟ್ರೈಕ್ ಮೂಲಕ ದೇಶವು ತಕ್ಕ ಉತ್ತರ ನೀಡಿದೆ. ಭಯೋತ್ಪಾದನೆ ವಿರುದ್ಧದ ಹೋರಾಟ ತೀವ್ರಗೊಳ್ಳಬೇಕು.-ಶಿದ್ದಲಿಂಗಯ್ಯ ವಸ್ತ್ರದ ಜಿಲ್ಲಾ ಅಧ್ಯಕ್ಷ ಮಾಜಿ ಹಾಗೂ ಹಾಲಿ ಯೋಧರ ಅರೇಸೇನಾ ಪಡೆಗಳ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.