
ಮಹಾಲಿಂಗಪುರ (ಬಾಗಲಕೋಟೆ): ಚಿಮ್ಮಡ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ಶನಿವಾರ ನಡೆದ ಬೆಳಗಾವಿ ವಿಭಾಗಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕರ 14ರ ವಯೋಮಿತಿ ಒಳಗಿನ ವಿಭಾಗದಲ್ಲಿ ಬಾಗಲಕೋಟೆ ಹಾಗೂ 17ರ ವಯೋಮಿತಿ ಒಳಗಿನ ವಿಭಾಗದಲ್ಲಿ ಶಿರಸಿ ತಂಡಗಳು ಗೆಲವು ಸಾಧಿಸಿದವು.
14ರ ವಯೋಮಿತಿ ಒಳಗಿನ ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ಕಾರವಾರ ತಂಡವನ್ನು 12-38ರಿಂದ ಬಾಗಲಕೋಟೆ ತಂಡ ಸೋಲಿಸಿತು.
ಗೋಲ್ಡನ್ ರೇಡ್ ಮೂಲಕ ಲೀಗ್ ಹಂತದಲ್ಲಿ ಶುಭಾರಂಭ ಮಾಡಿದ್ದ ಕಾರವಾರ ತಂಡದ ಆಟಗಾರರು ಸೋತರು. ಇದಕ್ಕೂ ಮುನ್ನ ನಡೆದ ಸಮಿಫೈನಲ್ನಲ್ಲಿ ಬಾಗಲಕೋಟೆ ತಂಡ 44-25 ರಿಂದ ಗದಗ ತಂಡವನ್ನು ಹಾಗೂ ಕಾರವಾರ ತಂಡ 51-47 ರಿಂದ ಚಿಕ್ಕೋಡಿ ತಂಡವನ್ನು ಸೋಲಿಸಿ ಫೈನಲ್ ತಲುಪಿದ್ದವು.
17ರ ವಯೋಮಿತಿ ಒಳಗಿನ ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ಧಾರವಾಡ ತಂಡವನ್ನು 30-32 ರಿಂದ ಶಿರಸಿ ತಂಡ ಸೋಲಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಹಲವಾರು ತಿರುವು ಪಡೆದು ಧಾರವಾಡ ತಂಡ ವಿರೋಚಿತ ಸೋಲನ್ನು ಅನುಭವಿಸಿತು.
ಇದಕ್ಕೂ ಮುನ್ನ ನಡೆದ ಸಮಿಫೈನಲ್ನಲ್ಲಿ ಧಾರವಾಡ ತಂಡ 48-47ರಿಂದ ಕಾರವಾರ ತಂಡವನ್ನು ಹಾಗೂ ಶಿರಸಿ ತಂಡ 42-27 ರಿಂದ ಗದಗ ತಂಡವನ್ನು ಸೋಲಿಸಿ ಫೈನಲ್ ತಲುಪಿದ್ದವು.
ಸಮಾರೋಪ ಸಮಾರಂಭ: ಶನಿವಾರ ತಡರಾತ್ರಿ ನಡೆದ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಶಾಸಕ ಸಿದ್ದು ಸವದಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರು ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು. ಮುತ್ತು ಢವಳೇಶ್ವರ, ರಾಜು ಬಗನಾಳ, ಶಂಕರ ಬಟಕುರ್ಕಿ, ಬಿಇಒ ಎ.ಕೆ.ಬಸಣ್ಣನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.