
ಬೀಳಗಿ: ತಾಯಿ ನಿಧನದ ದಿನ ಅಂತ್ಯಕ್ರಿಯೆ ಮುಗಿಸಿ ನಾಟಕ ಮಾಡಲು ಹೋಗಿರುವುದು ಪುಂಡಲೀಕಪ್ಪನವರ ಕಲಾ ತಲ್ಲೀನತೆಗೆ ಸಾಕ್ಷಿಯಾಗಿದೆ. 50 ವರ್ಷಕ್ಕೂ ಹೆಚ್ಚು ಕಾಲ ಕಲಾದೇವಿಯ ಆರಾಧನೆಗೆ ಅಧ್ಯಕ್ಷತೆ ಪಟ್ಟವನ್ನು ಪರಿಷತ್ ನೀಡಿ ಗೌರವಿಸಿದ್ದು ಶ್ಲಾಘನೀಯ ಎಂದು ಪ್ರಾಚಾರ್ಯ ಎಸ್.ಕೆ. ಬಂಗಾರಿ ಹೇಳಿದರು.
ತಾಲ್ಲೂಕಿನ ಬಾಡಗಿ ಗ್ರಾಮದ ಬಕ್ಕೇಶ್ವರ ಮಠದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ, ತಾಲ್ಲೂಕು ಘಟಕ ಮತ್ತು ಮಹಿಳಾ ಘಟಕ, ಬಾಡಗಿ ವಲಯ ಘಟಕದ ಆಶ್ರಯದಲ್ಲಿ ಜರುಗಿದ ಬೀಳಗಿ ತಾಲ್ಲೂಕು ಪ್ರಥಮ ಕನ್ನಡ ಜಾನಪದ ಸಮ್ಮೇಳನದಲ್ಲಿ ಅಧ್ಯಕ್ಷ ಪುಂಡಲೀಕಪ್ಪ ಗಾಣಗೇರ ಅವರ ಬದುಕು-ಸಾಧನೆ ಕುರಿತು ಅವರರು ಮಾತನಾಡಿದರು.
ಸಾಹಿತಿ ವೀರೇಂದ್ರ ಶೀಲವಂತ ಮಾತನಾಡಿ, ಹಿಮ್ಮೇಳ ಗಾಯಕ, ಹಾರ್ಮೋನಿಯಂ ವಾದಕ, ಭಜನಾ ಹಾಡುಗಾರರಾಗಿ ಪುಂಡಲೀಕಪ್ಪ ಗಾಣಗೇರ ಇಂದಿನ ಕಲಾವಿದರಿಗೆ ಆದರ್ಶಪ್ರಾಯ ಆಗಿರುವರು ಎಂದರು.
ಪಟ್ಟಣದ ಸಹಕಾರ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ ಮಾತನಾಡಿದರು.
ಬಕ್ಕೇಶ್ವರ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಬಿ.ಆರ್. ಸೊನ್ನದ, ಜಿ. ಆರ್. ಹವೇಲಿ, ಸೋಮನಗೌಡ ಪಾಟೀಲ, ಕಸ್ತೂರಿ ಪತ್ತಾರ, ಎಸ್.ವೈ. ಕಿರಸೂರ ಇದ್ದರು.
ಜಾನಪದ ಕಲಾವಿದರ ಮಾಸಾಶನ ₹5 ಸಾವಿರಕ್ಕೆ ಹೆಚ್ಚಿಸಬೇಕು. ಜಾನಪದ ಕಲಾವಿದರ ಮಾಸಾಶನ ಪಡೆಯಲು ವಯಸ್ಸು 50ಕ್ಕೆ ಇಳಿಸುವುದು. ತತ್ವ ಪದಕ್ಕೆ ಪ್ರತ್ಯೇಕವಾದ ಅಕಾಡೆಮಿ ಸ್ಥಾಪಿಸಬೇಕು. ಜಾನಪದ ಕಲಾವಿದರಿಗೆ ಜೀವವಿಮೆ ಜಾರಿಗೆ ತರಬೇಕು. ಗ್ರಾ.ಪಂ ಅನುದಾನದಲ್ಲಿ ಶೇ 2ರಷ್ಟು ಜಾನಪದ ಕಲೆಗಳಿಗೆ ಮೀಸಲಿಡಬೇಕು. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಜಾನಪದ ಅಕಾಡೆಮಿ ಸ್ಥಾಪಿಸಬೇಕು. ಜನಪದ ಕ್ರೀಡೆಗಳನ್ನು ಸರ್ಕಾರ ಪುನಶ್ಚೇತನ ಗೊಳಿಸಬೇಕು. ಜಾನಪದ ವಿಶ್ವವಿದ್ಯಾನಿಲಯದಲ್ಲಿ ಮೂಲ ಕಲಾವಿದರನ್ನೇ ಉಪನ್ಯಾಸಕರನ್ನಾಗಿ ನೇಮಿಸಬೇಕು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಜಾನಪದ ಭವನಗಳನ್ನು ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಕಜಾಪ ಕಾರ್ಯದರ್ಶಿಗಳಾದ ಎಂ.ಬಿ. ತಾಂಬೋಳಿ, ಗೋದಾವರಿ ಮೂರಜಾವದಮಠ ನಿರ್ಣಯ ಮಂಡಿಸಿದರು. ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ಉಪಸ್ಥಿತಿ, ತಾಲ್ಲೂಕು ಅಧ್ಯಕ್ಷ ಬಿ.ಬಿ. ನಾಯ್ಕ ಅಧ್ಯಕ್ಷತೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ ಎಚ್.ಬಿ. ಮಾಳಗೊಂಡ, ವಲಯಾಧ್ಯಕ್ಷ ದಯಾನಂದ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.