ADVERTISEMENT

ಬಾಗಲಕೋಟೆ: ಹಾಸ್ಟೆಲ್ ಸುತ್ತ ಬೇಲಿ ಹಾಕಿದರು!

ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್: ಗ್ರಾಮಸ್ಥರ ವಿರೋಧ

ವೆಂಕಟೇಶ್ ಜಿ.ಎಚ್
Published 13 ಮೇ 2020, 20:00 IST
Last Updated 13 ಮೇ 2020, 20:00 IST
ಹೊರ ರಾಜ್ಯಗಳಿಂದ ಬಂದವರನ್ನು ತಮ್ಮೂರಿನಲ್ಲಿ ಕ್ವಾರೆಂಟೈನ್‌ಗೆ ಒಳಪಡಿಸುವುದನ್ನು ವಿರೋಧಿಸಿ ಬುಧವಾರ ಬಾದಾಮಿ ತಾಲ್ಲೂಕಿನ ಹೊಸೂರು ಗ್ರಾಮಸ್ಥರು ಸರ್ಕಾರಿ ಹಾಸ್ಟೆಲ್‌ ಸುತ್ತಲೂ ಮುಳ್ಳುಬೇಲಿ ಹಾಕಿ ದಿಗ್ಬಂಧನ ವಿಧಿಸಿದ್ದರು
ಹೊರ ರಾಜ್ಯಗಳಿಂದ ಬಂದವರನ್ನು ತಮ್ಮೂರಿನಲ್ಲಿ ಕ್ವಾರೆಂಟೈನ್‌ಗೆ ಒಳಪಡಿಸುವುದನ್ನು ವಿರೋಧಿಸಿ ಬುಧವಾರ ಬಾದಾಮಿ ತಾಲ್ಲೂಕಿನ ಹೊಸೂರು ಗ್ರಾಮಸ್ಥರು ಸರ್ಕಾರಿ ಹಾಸ್ಟೆಲ್‌ ಸುತ್ತಲೂ ಮುಳ್ಳುಬೇಲಿ ಹಾಕಿ ದಿಗ್ಬಂಧನ ವಿಧಿಸಿದ್ದರು   

ಬಾಗಲಕೋಟೆ: ಕೋವಿಡ್–19 ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಹೊರಜಿಲ್ಲೆ ಹಾಗೂ ರಾಜ್ಯಗಳಿಂದ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆಕಾರ್ಮಿಕರು ಹಾಗೂ ಕಾರ್ಖಾನೆಗಳ ಉದ್ಯೋಗಿಗಳು ಮರಳುತ್ತಿದ್ದಾರೆ. ಹೀಗೆ ಬಂದವರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಪ್ರಕ್ರಿಯೆಗೆ ಜಿಲ್ಲಾಡಳಿತ ಮುಂದಾಗಿದೆ. ಆದರೆ ಅದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಮಂಗಳೂರು, ಪುಣೆ ಹಾಗೂ ಬಿಹಾರದಿಂದ ಬಂದ 14 ಮಂದಿಯನ್ನು ಮಂಗಳವಾರ ರಾತ್ರಿ ಕ್ವಾರೆಂಟೈನ್ ಮಾಡಲು ಮುಂದಾಗಿದ್ದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯ ಕಾರ್ಖಾನೆಯೊಂದಕ್ಕೆ ಸೇರಿದ ಅಧಿಕಾರಿ, ಸಿಬ್ಬಂದಿಗಳು ಅದರಲ್ಲಿ ಇದ್ದರು. ’ಅವರನ್ನು ಕಾರ್ಖಾನೆಯ ಆವರಣದಲ್ಲಿಯೇ ಕ್ವಾರಂಟೈನ್‌ಗೆ ಮಾಡಿ. ನಮ್ಮೂರಿನಲ್ಲಿ ಬೇಡ‘ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ವೇಳೆ ಪ್ರತಿಭಟನೆಗೂ ಮುಂದಾದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಬಾದಾಮಿ ತಹಶೀಲ್ದಾರ್ ಹಾಗೂ ಸಬ್‌ಇನ್‌ಸ್ಪೆಕ್ಟರ್ ಗ್ರಾಮಸ್ಥರೊಂದಿಗೆ ಸಂಧಾನ ನಡೆಸಿ ಅವರ ಮನವೊಲಿಸಿದರು. ಅಕಸ್ಮಾತ್ ಕ್ವಾರಂಟೈನ್‌ಗೆ ಒಳಪಟ್ಟವರಲ್ಲಿ ಯಾರಿಗಾದರೂ ಕೋವಿಡ್–19 ಸೋಂಕು ದೃಢಪಟ್ಟರೂ ಅದು ಬೇರೆಯವರಿಗೆ ಹರಡದಂತೆ ಯಾವ ರೀತಿ ಸುರಕ್ಷತಾ ಕ್ರಮಗಳನ್ನು
ಕೈಗೊಂಡಿದ್ದೇವೆ ಎಂಬುದನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು. ನಂತರ ಅವರಿಗೆ ಅಲ್ಲಿ ಉಳಿಯಲು (ಕ್ವಾರೆಂಟೈನ್) ಅವಕಾಶ ದೊರಕಿತು.

ADVERTISEMENT

ಮುಳ್ಳಿನ ಬೇಲಿ ಹಾಕಿದರು..

ಹೊರರಾಜ್ಯಗಳಿಂದ ವಾಪಸ್ ಮರಳಿದ ವಲಸೆ ಕಾರ್ಮಿಕರನ್ನು ನಮ್ಮೂರಿನಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಿದ್ದಾರೆ ಎಂಬ ಸುದ್ದಿ ಗೊತ್ತಾಗಿ ಬಾದಾಮಿ ತಾಲ್ಲೂಕು ಹೊಸೂರು ಗ್ರಾಮಸ್ಥರು ಬುಧವಾರ ಊರಿನ ಸರ್ಕಾರಿ ಹಾಸ್ಟೆಲ್ ಸುತ್ತಲೂ ಮುಳ್ಳಿನ ಬೇಲಿ ಹಾಕಿ ದಿಗ್ಭಂಧನ ವಿಧಿಸಿದರು.

ಹೊರ ರಾಜ್ಯದವರನ್ನುನಮ್ಮೂರಿಗೆ ಕರೆತರಬೇಡಿ ಎಂಬುದು ಅವರ ಆಗ್ರಹವಾಗಿತ್ತು. ವಿಷಯ ತಿಳಿದು ಗ್ರಾಮಕ್ಕೆ ಬಂದ ತಹಶೀಲ್ದಾರ್
ಸುಹಾಸ್ ಇಂಗಳೆ, ಮುಳ್ಳುಬೇಲಿ ತೆಗೆಯುವಂತೆ ಗ್ರಾಮಸ್ಥರನ್ನು ಕೋರಿದರು. ಅದಕ್ಕೆ ಅವರುಸುತಾರಾಂ ಒಪ್ಪಲಿಲ್ಲ. ಪೊಲೀಸ್ ಸಿಬ್ಬಂದಿಯೊಂದಿಗೆಅಲ್ಲಿಯೇ ಠಿಕಾಣಿ ಹೂಡಿದ್ದ ತಹಶೀಲ್ದಾರ್, ರಾತ್ರಿಯವರೆಗೂ ಗ್ರಾಮಸ್ಥರ ಮನವೊಲಿಕೆ ಕಾರ್ಯದಲ್ಲಿ ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.