ರಾಂಪುರ: ಆಧ್ಯಾತ್ಮಿಕ ತಳಹದಿಯ ಮೇಲೆ ರೂಪುಗೊಂಡಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಶ್ರೇಷ್ಠ ಸಂಸ್ಕಾರ ಹಾಗೂ ಸಂಸ್ಕೃತಿಯ ಗಟ್ಟಿತನವಿರುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಹೇಳಿದರು.
ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಸ್ಥಳೀಯ ಹೇಮ ವೇಮನ ಸದ್ಬೋಧನ ಪೀಠ ಭಾನುವಾರ ಹಮ್ಮಿಕೊಂಡಿದ್ದ ಪೀಠದ ವಾರ್ಷಿಕೋತ್ಸವ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಪತ್ತು ಹೆಚ್ಚಾದಂತೆ ಸಂಸ್ಕೃತಿ ಕ್ಷೀಣಿಸಬಾರದು. ಸಮೃದ್ಧಿ ಮತ್ತು ಸಂಸ್ಕೃತಿಯ ಸಂತುಲನವಾದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
6 ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದಾನಿಗಳು ದತ್ತು ಸ್ವೀಕರಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತಲ್ಲದೇ ಸಾಧಕ ವಿದ್ಯಾರ್ಥಿಗಳು ಮತ್ತು ಬಿತ್ತನೆ ಕೃಷಿಯಲ್ಲಿ ಸಾಧನೆ ಮಾಡಿದ ಎತ್ತುಗಳ ಮಾಲಿಕ ಅಶೋಕ ಮೆಳ್ಳಿ ಅವರನ್ನು ಸನ್ಮಾನಿಸಲಾಯಿತು.
ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ವೇಮನ ಪೀಠದ ಸಂಯೋಜಕ ಹೇಮರಡ್ಡಿ ನೀಲಗುಂದ ಮುಖ್ಯ ಅತಿಥಿಯಾಗಿದ್ದರು.
ಹಿರಿಯ ವಕೀಲ ಎಸ್.ಕೆ.ಯಡಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಹಾಗೂ ಅಮಲಝರಿಯ ಶರೀಫ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಂಡಿತ ಮಾಚಾ, ಸದ್ಬೋಧನ ಪೀಠದ ನಿರ್ದೇಶಕ ರಂಗಣ್ಣ ಕಟಗೇರಿ, ಆಧ್ರಯದಾತರಾದ ಶಂಕರ ಎಚ್.ಎಡಹಳ್ಳಿ ಹಾಗೂ ಹೇಮಾ. ಎಸ್.ಯಡಹಲ್ಳಿ ಅತಿಥಿಗಳಾಗಿದ್ದರು.
ಹೇಮರಡ್ಡಿ ಮಲ್ಲಮಾಂಬೆ ಭಜನಾ ತಂಡದವರು ಪ್ರಾರ್ಥಿಸಿದರು. ಪಾಂಡು ಸನ್ನಪ್ಪನವರ ಸ್ವಾಗತಿಸಿದರು. ಅಜೀತಗೌಡ ಪಾಟೀಲ, ಸಂಜಯ ನಡುವಿನಮನಿ, ಶ್ರೀನಿವಾಸ ಬೆನಕಟ್ಟಿ ನಿರೂಪಿಸಿದರು. ಗಂಗಾ ಅಮಾತೆಪ್ಪನವರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.