ADVERTISEMENT

ಬಾಗಲಕೋಟೆ: ಪ್ರತಿ ಟನ್‌ ಕಬ್ಬಿಗೆ ₹4 ಸಾವಿರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

ಭಾರತೀಯ ಕಿಸಾನ್ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 4:15 IST
Last Updated 5 ನವೆಂಬರ್ 2025, 4:15 IST
ಪ್ರತಿ ಟನ್‌ ಕಬ್ಬಿಗೆ ₹4 ಸಾವಿರ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರು ಪ್ರತಿಭಟನೆ ಮಾಡಿದರು
ಪ್ರತಿ ಟನ್‌ ಕಬ್ಬಿಗೆ ₹4 ಸಾವಿರ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರು ಪ್ರತಿಭಟನೆ ಮಾಡಿದರು   

ಬಾಗಲಕೋಟೆ: ಪ್ರತಿ ಟನ್‌ ಕಬ್ಬಿಗೆ ₹4 ಸಾವಿರ ನೀಡಬೇಕು ಹಾಗೂ ಉಪಉತ್ಪನ್ನಗಳ ಶೇ70ರಷ್ಟು ಲಾಭವನ್ನು ರೈತರಿಗೆ ಕೊಡಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಭಾರತೀಯ ಕಿಸಾನ್ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.

ರೈತರು ಕಬ್ಬು ಬೆಳೆಯಲು ಎಕರೆಗೆ ₹75 ರಿಂದ ₹80 ಸಾವಿರ ಖರ್ಚು ಮಾಡುತ್ತಾರೆ. ಆದರೆ, ಸಕ್ಕರೆ ಕಾರ್ಖಾನೆಯವರು ಪ್ರತಿ ವರ್ಷ ಲಾಭದಾಯಕ ಬೆಲೆ ಹಾಗೂ ಉಪಉತ್ಪನ್ನಗಳ ಲಾಭ ನೀಡಲು ಹಿಂದೇಟು ಹಾಕುತ್ತಾರೆ. ಕಾರ್ಖಾನೆ ಆರಂಭಿಸುವ ಮುನ್ನ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.

ಸತತವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಬೆಳೆಗಳು ಹಾನಿಯಾಗಿದ್ದು, ಕಂದಾಯ ಇಲಾಖೆ ಕೆಲವು ಅಧಿಕಾರಿಗಳು ರೈತರ ಜಮೀನಿಗೆ ಹೋಗದೇ ಮೂರನೇ ವ್ಯಕ್ತಿಗಳಿಂದ ಸಮೀಕ್ಷೆ ಮಾಡಿಸಿದ್ದಾರೆ. ಕೆಲವರಿಗೆ ಅನ್ಯಾಯವಾಗಿದ್ದು, ಅದನ್ನು ಸರಿಪಡಿಸಬೇಕು. ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಬೆಳೆ ವಿಮಾ ಕಂಪನಿಯು ರೈತರಿಗೆ ಮೋಸ ಮಾಡುತ್ತಿದೆ. ವಿಮಾ ಮೊತ್ತವನ್ನು ಕಂಪನಿ ಪ್ರತಿನಿಧಿಗಳೇ ಕಟ್ಟಿ, ತಾವೇ ಪರಿಹಾರ ಪಡೆಯುತ್ತಿದ್ದಾರೆ. ಇದು ಹಲವು ವರ್ಷಗಳಿಂದ ನಡೆಯುತ್ತಿದೆ. ಪ್ರಕರಣವನ್ನು ಸಿಐಡಿ ಅಥವಾ ಸಿಬಿಐ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆ ಈಡೇರಿಸದಿದ್ದರೆ, ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ, ಉ.ಪ್ರಾ.ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ ಯಡಹಳ್ಳಿ ಶಿವನಗೌಡ ಪಾಟೀಲ, ಶ್ರೀಶೈಲ‌ ಮೇಟಿ, ಬಸವರಾಜ ಯಂಕಂಚಿ, ಚಂದ್ರಶೇಖರ ಹಡಪದ, ಅಜಿತ್ ನಾಯಕ, ಎಸ್.ಎಸ್.ಪಾಟೀಲ, ಕಿರಣ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.