
ರಬಕವಿ ಬನಹಟ್ಟಿಯಲ್ಲಿ ನಡೆದ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶದಲ್ಲಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.
ರಬಕವಿ ಬನಹಟ್ಟಿ: ಕನೇರಿ ಸ್ವಾಮೀಜಿಯವರು ಕೆಲವು ಸ್ವಾಮೀಜಿಗಳ ವಿರುದ್ಧ ಮಾತನಾಡಿದಂತಹ ಮಾತುಗಳನ್ನು ಸಮರ್ಥನೆ ಮಾಡಿಕೊಳ್ಳುತ್ತೇನೆ. ವೀರಶೈವ, ಲಿಂಗಾಯತ ಒಂದೇ. ಸನಾತನ ಧರ್ಮದ ಮೇಲೆ ಭಾರತ ನಿಂತಿದೆ. ಹಿಂದೂ ಧರ್ಮದ ಸಂಘಟನೆಗಾಗಿ ಎಲ್ಲರೂ ಒಗ್ಗಟ್ಟಾಗಬೇಕು ಎಂದು ವಿಜಯಪುರದ ಶಾಸಕ ಬನಸಗೌಡ ಪಾಟೀಲ ಯತ್ನಾಳ ಹೇಳಿದರು.
ಶನಿವಾರ ಎಸ್ಆರ್ಎ ಮೈದಾನದಲ್ಲಿ ನಡೆದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಪುರಪ್ರವೇಶ ಮತ್ತು ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲವು ಸ್ವಾಮೀಜಿಗಳು ಬಸವಣ್ಣನರನ್ನು ಪೇಟೆಂಟ್ ತೆಗೆದುಕೊಂಡಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಅವರು ನಮ್ಮ ದೇವರುಗಳ ಬಗ್ಗೆ ಹಗುರವಾಗಿ ಮಾತನಾಡಿ ಮತ್ತೊಂದು ಧರ್ಮ ಹೊಗಳುತ್ತಾರೆ. ಇಸ್ಲಾಂ ಎಂದರೆ ಶಾಂತಿ, ಇಸ್ಲಾಂ ಮತ್ತು ಲಿಂಗಾಯತರು ಸಮಾನರು ಎಂದು ಅಸಂಬದ್ಧವಾಗಿ ಮಾತನಾಡುತ್ತಾರೆ. ನೀವು ಮಾತನಾಡಿರುವುದಕ್ಕೆ ಕನೇರಿಯ ಶ್ರೀಗಳು ಉತ್ತರ ನೀಡಿದ್ದಾರೆ ಎಂದರು.
ಇಂದಿನ ದಿನಗಳಲ್ಲಿ ಗಾಂಧೀಜಿಯವರ ಗೊಂಬೆಗಳಂತೆ ಕಣ್ಣು, ಬಾಯಿ, ಕಿವಿಗಳನ್ನು ಮುಚ್ಚಿಕೊಂಡು ಕುಳಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ.ಅಂಬೇಡ್ಕರ್ ದೇಶ ವಿಭಜನೆ ಮಾಡುವುದಕ್ಕಿಂತ ಮುಂಚೆ, ಭಾರತದಲ್ಲಿನ ಕಟ್ಟಕಡೆಯ ಮುಸ್ಲಿಂ ಪಾಕಿಸ್ತಾನಕ್ಕೆ ಹೋಗಬೇಕು. ಅಲ್ಲಿನ ಕಟ್ಟಕಡೆಯ ಹಿಂದೂ ಭಾರತಕ್ಕೆ ಬರಬೇಕು. ದೇಶದಲ್ಲಿ ಇಸ್ಲಾಂ ಇರುವವರೆಗೆ ಶಾಂತಿ ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದರು.
ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದವರ ಮೇಲೆ ಮತ್ತು ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಿಕ್ಕೆ ಬಂದವರ ಮೇಲೆ ಕ್ರಮ ತೆಗೆದುಕೊಳ್ಳಲಿಲ್ಲ. 2028ರಲ್ಲಿ ಕರ್ನಾಟಕದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿ ಉಳಿಸುವ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂದು ಯತ್ನಾಳ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.