ADVERTISEMENT

ಬಳ್ಳಾರಿ | ಬನ್ನಿಹಟ್ಟಿಯಿಂದ ಅದಿರು ಅಕ್ರಮ ಸಾಗಣೆ ಆರೋಪ: PCR ದಾಖಲಿಸಿದ ಡಿಎಂಜಿ

ನಾಲ್ಕು ದಿನಗಳ ಪ್ರಹಸನಕ್ಕೆ ತೆರೆ

ಆರ್. ಹರಿಶಂಕರ್
Published 4 ನವೆಂಬರ್ 2025, 5:36 IST
Last Updated 4 ನವೆಂಬರ್ 2025, 5:36 IST
ಗೋವಾಕ್ಕೆ ಸಾಗಿಸಲೆಂದು ಬನ್ನಿಹಟ್ಟಿ ರೈಲ್ವೆ ಸೈಡಿಂಗ್‌ನಲ್ಲಿ ಹಾಕಿರುವ ಕಬ್ಬಿಣದ ಅದಿರು 
ಗೋವಾಕ್ಕೆ ಸಾಗಿಸಲೆಂದು ಬನ್ನಿಹಟ್ಟಿ ರೈಲ್ವೆ ಸೈಡಿಂಗ್‌ನಲ್ಲಿ ಹಾಕಿರುವ ಕಬ್ಬಿಣದ ಅದಿರು    

ಬಳ್ಳಾರಿ: ಅಕ್ರಮವಾಗಿ ಅದಿರು ಸಾಗಣೆ ನಡೆಯುತ್ತಿದೆ ಎಂಬ ಆರೋಪದ ಮೇಲೆ ಇತ್ತೀಚೆಗೆ ಸಂಡೂರು ತಾಲೂಕಿನ ಬನ್ನಿಹಟ್ಟಿ ರೈಲ್ವೆ ಸೈಡಿಂಗ್‌ ಮೇಲೆ ದಾಳಿ ನಡೆಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ (ಡಿಎಂಜಿ) ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಅಂತಿಮವಾಗಿ ಸೋಮವಾರ ನ್ಯಾಯಾಲಯದಲ್ಲಿ ಖಾಸಗಿ ದೂರು ನೋಂದಣಿ (ಪಿಸಿಆರ್) ಮಾಡಿದ್ದಾರೆ. 

ಬಳ್ಳಾರಿಯ ಸ್ಪಾಂಜ್ ಐರನ್‌ ಕಂಪನಿಯೊಂದು ಸೂಕ್ತ ಪರ್ಮೀಟ್‌ ಇಲ್ಲದೇ ಗೋವಾದ ಕಂಪನಿಯೊಂದಕ್ಕೆ ಬನ್ನಿಹಟ್ಟಿ ರೈಲ್ವೆ ಸೈಡಿಂಗ್‌ ಮೂಲಕ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದೆ ಎಂಬ ಆರೋಪ ಆರಂಭದಲ್ಲಿ ಕೇಳಿಬಂದಿತ್ತು. ಪರ್ಮೀಟ್‌ಗಳನ್ನು ಪರಿಶೀಲಿಸಿದ್ದ ಡಿಎಂಜಿ ಅಧಿಕಾರಿಗಳು ಅವುಗಳು ಕ್ರಮಬದ್ಧವಾಗಿರುವುದಾಗಿ ತಿಳಿಸಿದ್ದರು. 

ಆದರೆ, ಸ್ಪಾಂಜ್‌ ಐರನ್‌ ಕಂಪನಿಯು ತನ್ನ ಕೈಗಾರಿಕಾ ಘಟಕದಿಂದ ತಂದಿದ್ದ ಅದಿರಿನೊಂದಿಗೆ, ರೈಲ್ವೆ ನಿಲ್ದಾಣದಲ್ಲಿ ಈ ಹಿಂದೆ ಇದ್ದ ಹಳೇ ಅದಿರನ್ನು ಮಿಶ್ರಣ ಮಾಡಿ ಸಾಗಿಸುತ್ತಿರುವ ಆರೋಪಗಳು ಎದುರಾದವು. ಹೀಗಾಗಿ ಡಿಎಂಜಿ ಅಧಿಕಾರಿಗಳು ಅದಿರು ಸಾಗಣೆಯನ್ನು ತಡೆಹಿಡಿದಿದ್ದರು. ಅಂತಿಮವಾಗಿ ವಿವಾದ ನ್ಯಾಯಾಂಗದ ಮೆಟ್ಟಿಲೇರಿದೆ. 

ADVERTISEMENT

ಆದರೆ, ಪ್ರಕರಣದಲ್ಲಿ ಉತ್ತರವೇ ಸಿಗದ ಹಲವು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ.

ಮೊದಲ ದಿನ ಪೊಲೀಸ್‌ ಇಲಾಖೆಯ ಕೆಲ ಸಿಬ್ಬಂದಿಯೇ ರೈಲ್ವೆ ಸೈಡಿಂಗ್‌ ಮೇಲೆ ದಾಳಿ ಮಾಡಿ ಪರಿಶೀಲನೆಗೆ ಮುಂದಾಗಿದ್ದರು. ಆದರೆ, ಈ ಸಿಬ್ಬಂದಿ ತೋರಣಗಲ್‌ ಅಥವಾ ಸಂಡೂರು ವಿಭಾಗಕ್ಕೆ ಸೇರಿದವರೇ ಆಗಿರಲಿಲ್ಲ ಎನ್ನಲಾಗಿದೆ. ಅದು ವಿಶೇಷ ತಂಡವಾಗಿತ್ತು ಎಂದು ಇಲಾಖೆಯ ಕೆಲ ಮಂದಿ ಸಮಜಾಯಿಷಿ ನೀಡುತ್ತಾರೆ. ಆದರೆ, ವಿಶೇಷ ತಂಡ ರಚನೆಯಾದ ಬಗ್ಗೆ ಪೊಲೀಸ್‌ ಇಲಾಖೆಯಿಂದ ಅಧಿಕೃತ ಮಾಹಿತಿ ಈ ವರೆಗೆ ಲಭ್ಯವಾಗಿಲ್ಲ.  

ದಾಳಿಯ ದಿನ ಕೆಲ ಮಾಧ್ಯಮ ಪ್ರತಿನಿಧಿಗಳನ್ನು ಕೆಲ ಪೊಲೀಸ್‌ ಅಧಿಕಾರಿಗಳೇ ಪ್ರೇರಣೆ ನೀಡಿ ಸ್ಥಳಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ. ‘ಪ್ರಕರಣಗಳ ವಿಚಾರಣೆ, ತನಿಖೆಯಲ್ಲಿ ಯಾವುದೇ ಮೂರನೇ ವ್ಯಕ್ತಿಯನ್ನು ಸೇರಿಸಿಕೊಳ್ಳದ ಪೊಲೀಸ್‌ ಇಲಾಖೆಯು ಮಾಧ್ಯಮಗಳನ್ನು ಜತೆಗಿಟ್ಟುಕೊಂಡು ಹೋಗಿ ದಾಳಿ ನಡೆಸುವ ಸಂಪ್ರದಾಯ ಆರಂಭಿಸಿದ್ದು ಯಾವಾಗ, ಯಾಕೆ’ ಎಂದು ಇಲಾಖೆಯ ಕೆಲ ಅಧಿಕಾರಿಗಳೇ ಪ್ರಶ್ನೆ ಮಾಡುತ್ತಿದ್ದಾರೆ. 

ಪೊಲೀಸ್‌ ಇಲಾಖೆಯ ಕೆಲ ಮಂದಿ ಡಿಎಂಜಿ ಅಧಿಕಾರಿಗಳನ್ನು ದಾಳವಾಗಿಸಿಕೊಳ್ಳಲು ಪ್ರಯತ್ನಿಸಿದರು, ಒತ್ತಡ ಹೇರಲು ಯತ್ನಿಸದರೇ ಎಂಬ ಶಂಕೆ ವ್ಯಕ್ತವಾಗಿದೆ.   

ಮೊದಲ ದಿನ ರೈಲ್ವೆ ಸೈಡಿಂಗ್‌ನಲ್ಲಿ ದಾಳಿ ನಡೆಸುತ್ತಿದ್ದ ಪೊಲೀಸರು ಬಳಿಕ ಡಿಎಂಜಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡಿದ್ದರು. ಅವರೂ ಕ್ಲೀನ್‌ ಚಿಟ್‌ ಕೊಟ್ಟಿದ್ದರು. ಆ ಬಳಿಕವೂ ಅದಿರು ಮಿಶ್ರಣವಾಗುತ್ತಿದೆ ಎಂದು ದೂರಿದ ಹಿತಾಸಕ್ತಿಗಳು ಯಾವುವು? 

ಸ್ಥಳೀಯ ರೌಡಿಶೀಟರ್‌ಗಳು ಅಧಿಕಾರಿಗಳ ಮೇಲೆ ಒತ್ತಡ ಹೇರುವ ತಂತ್ರಗಳನ್ನು ಇಲ್ಲಿ ಮಾಡಿದ್ದರು ಎನ್ನಲಾಗಿದೆ. ಬಳಿಕ ಹಣದ ಒಪ್ಪಂದಕ್ಕೆ ಪ್ರಯತ್ನಗಳು ನಡೆದವು ಎಂದು ಹೇಳಲಾಗುತ್ತಿದೆ. ಆದರೆ, ಅದಕ್ಕೆ ಡಿಎಂಜಿ ಅಧಿಕಾರಿಗಳು ಸೊಪ್ಪು ಹಾಕಿಲ್ಲ.  

ಈ ಪ್ರಕರಣದಲ್ಲಿ ಆರಂಭ ಶೂರತ್ವ ತೋರಲು ಹೋಗಿದ್ದ ಕೆಲ ಮಂದಿ ಅಂತಿಮವಾಗಿ ಡಿಎಂಜಿ ಅಧಿಕಾರಿಗಳ ಮೂಲಕ ಕಾರ್ಯ ಸಾಧಿಸಿಕೊಳ್ಳು ಪ್ರಯತ್ನಿಸಿದರು. ಇದನ್ನು ಗ್ರಹಿಸಿದ ಡಿಎಂಜಿ ಅಧಿಕಾರಿಗಳು, ಅಂತಿಮವಾಗಿ ವಿವಾದವನ್ನು ನ್ಯಾಯಾಲಯದ ಅಂಗಣಕ್ಕೆ ತೆಗೆದುಕೊಂಡು ಹೋದರು ಎನ್ನಲಾಗಿದೆ. 

2009ರ ಬಳಿಕ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗಳು, ಅಕ್ರಮ ಅದಿರು ಸಾಗಣೆಗಳು ಬಂದ್‌ ಆಗಿವೆ. ಅದಿರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಣೆ ಮಾಡಬೇಕಿದ್ದರೆ ಎರಡು ಬಾರಿ ಯೋಚಿಸಬೇಕಾದ ಪರಿಸ್ಥಿತಿ ಇದೆ. ಇಷ್ಟು ಕಟ್ಟುನಿಟ್ಟಿನ ಕಾನೂನುಗಳ ನಡುವೆಯೂ ಅಕ್ರಮವಾಗಿ ಅದಿರು ಸಾಗಣೆ ಸಾಧ್ಯವೇ? ಇಲ್ಲವೇ,  ಅಕ್ರಮ ಅದಿರು ಸಾಗಣೆ ಎಂಬ ಅಸ್ತ್ರವನ್ನು ಪ್ರಯೋಗಿಸಿ ಉದ್ದಿಮೆದಾರರನ್ನು ಬೆದರಿಸುವ ತಂತ್ರವೇ. ಇದು ಮುಂದುವರಿದರೆ ಪರಿಸ್ಥಿತಿ ಯಾವ ಹಂತಕ್ಕೆ ಹೋಗಬಹುದು ಎಂಬ ಆತಂಕವನ್ನು ಸದ್ಯ ಅಧಿಕಾರಿಗಳು, ರಾಜಕಾರಣಿಗಳು ವ್ಯಕ್ತಪಡಿಸಿದ್ದಾರೆ.   

ಈ ಮೂರು ದಿನಗಳಲ್ಲಿ ಡಿಎಂಜಿ ಅಧಿಕಾರಿಗಳು ಪ್ರಬಲರ ಒತ್ತಡದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಂತಿಮವಾಗಿ ಸೂಕ್ತವೆನಿಸುವ ನಿರ್ಧಾರವೊಂದಕ್ಕೆ ಬಂದಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.   

ಅದಿರು ಸಾಗಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಡೂರು ನ್ಯಾಯಾಲಯದಲ್ಲಿ ಪಿಸಿಆರ್‌ ಮಾಡಲಾಗಿದೆ. ಮುಂದಿನದ್ದು ನ್ಯಾಯಾಲಯದಲ್ಲಿ ತೀರ್ಮಾನವಾಗಲಿದೆ.   
– ದ್ವಿತೀಯಾ ಇ.ಸಿ ಉಪ ನಿರ್ದೇಶಕಿ ಡಿಎಂಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.