ಬಳ್ಳಾರಿ: ಇಲ್ಲಿನ ಪಾರ್ಶ್ವನಾಥ ಜೈನ್ ಶ್ವೆತಾಂಬರ್ ಮಂದಿರ ಶತಮಾನೋತ್ಸವದ ಸಂದರ್ಭದಲ್ಲಿದ್ದು, ಜೂನ್ 2 ರಿಂದ 6ರವರೆಗೆ ಶ್ರೀ ವಿಮಲ ಸಾಗರ್ ಸುರೀಶ್ವರ್ ಜೀ ಹಾಗೂ ಅವರ ಶೀಷ್ಯಂದಿರ ನೇತೃತ್ವದಲ್ಲಿ ಪಂಚಾನ್ಹಿಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಪಾರ್ಶ್ವನಾಥ ಜೈನ ಶ್ವೇತಾಂಬರ ಮಂದಿರದ ಕಾರ್ಯದರ್ಶಿ ರೋಪನ್ ಜೈನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಪ್ರತಿದಿನ ರಾತ್ರಿ 7.30ಕ್ಕೆ ಶ್ರೀ ಕೊಟ್ಟೂರುಸ್ವಾಮಿ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೂನ್ 5ರಂದು ಬೆಳಿಗ್ಗೆ 8.30ಕ್ಕೆ ಶೋಭಾಯಾತ್ರೆ ಆರಂಭವಾಗುತ್ತದೆ’ ಎಂದು ವಿವರಿಸಿದರು.
‘ಶ್ರೀಪಾರ್ಶ್ವನಾಥ ಜೈನ ಶ್ವೇತಾಂಬರ್ ಸಂಘ ಹಾಗೂ ರಾಜಸ್ಥಾನ ಸಮಾಜದಿಂದ ಅನೇಕ ಸೇವಾ ಕಾರ್ಯಕ್ರಮಗಳು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿವೆ. ಕಳೆದ 15 ವರ್ಷದಿಂದ ಪ್ರತಿದಿನ ಬೆಳಿಗ್ಗೆ 11ಗಂಟೆಯಿಂದ 200 ಜನರಿಗೆ ರೋಟಿಘರ್ ಮೂಲಕ ಒಂದು ರೂಪಾಯಿಗೆ ಊಟ ನೀಡಲಾಗುತ್ತಿದೆ. ನಗರದ ಕಣೇಕಲ್ ರಸ್ತೆಯಲ್ಲಿ 90 ವರ್ಷದಿಂದ ಗೋಶಾಲೆ ನಡೆಯುತ್ತಿದೆ. ಆರೋಗ್ಯ ಮತ್ತು ಕಣ್ಣಿನ ಉಚಿತ ತಪಾಸಣೆ ಶಿಬಿರ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಅನಿಲ್, ಪ್ರಕಾಶ್ ಜೈನ್, ಭರತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.