ADVERTISEMENT

ಸಂಡೂರು: ಪಾಳು ಬಿದ್ದ ಖನಿಜ ತನಿಖಾ ಠಾಣೆ

ಸುಪ್ರೀಂ ಕೋರ್ಟ್‌ನ 2013ರ ಆದೇಶದ ಅನ್ವಯ ನಾಲ್ಕು ಸ್ಥಳಗಳಲ್ಲಿ ಆರಂಭ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 5:30 IST
Last Updated 2 ಜನವರಿ 2026, 5:30 IST
ಸಂಡೂರು ತಾಲ್ಲೂಕಿನ ಮೆಟ್ರಿಕಿ ಗ್ರಾಮದ ಆಂಧ್ರ ಗಡಿಯಲ್ಲಿನ ಸಂಯುಕ್ತ ಖನಿಜ ತನಿಖಾ ಠಾಣೆಯ ತೂಕ ಮಾಪನ ಯಂತ್ರದ ಕಾಮಗಾರಿ ಅರ್ಧಕ್ಕೆ ನಿಂತಿದೆ
ಸಂಡೂರು ತಾಲ್ಲೂಕಿನ ಮೆಟ್ರಿಕಿ ಗ್ರಾಮದ ಆಂಧ್ರ ಗಡಿಯಲ್ಲಿನ ಸಂಯುಕ್ತ ಖನಿಜ ತನಿಖಾ ಠಾಣೆಯ ತೂಕ ಮಾಪನ ಯಂತ್ರದ ಕಾಮಗಾರಿ ಅರ್ಧಕ್ಕೆ ನಿಂತಿದೆ   

ಸಂಡೂರು: ತಾಲ್ಲೂಕಿನ ಬಂಡ್ರಿ, ಮೆಟ್ರಿಕಿ ಗ್ರಾಮಗಳಲ್ಲಿನ ಖನಿಜ ಸಂಯುಕ್ತ ತನಿಖಾ ಠಾಣೆಗಳು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸದೆ ವ್ಯರ್ಥವಾಗಿವೆ.

ಅದಿರು ಅಕ್ರಮ ಸಾಗಾಣಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ತಾಲ್ಲೂಕಿನ ರಾಜಾಪುರ, ಬನ್ನಿಹಟ್ಟಿ, ಮೆಟ್ರಿಕಿ, ಬಂಡ್ರಿ ಗ್ರಾಮಗಳ ವ್ಯಾಪ್ತಿಯಲ್ಲಿ ಸುಪ್ರೀಂ ಕೋರ್ಟ್‌ನ 2013ರ ಆದೇಶದ ಪ್ರಕಾರ ಒಟ್ಟು ನಾಲ್ಕು ಸ್ಥಳಗಳಲ್ಲಿ ಠಾಣೆಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ತೆರೆಯಲಾಗಿದೆ.

ಅದಿರು ಅಕ್ರಮ ಸಾಗಾಣೆ ತಡೆಯಲು ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದ ಪರಿಣಾಮ ಅದಿರು ಸಾಗಾಣಿಕೆ ಮಾರ್ಗದಲ್ಲಿ ಖನಿಜ ಸಂಯುಕ್ತ ತನಿಖಾ ಠಾಣೆಗಳನ್ನು ಆರಂಭಿಸಲು ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ADVERTISEMENT

ಸದ್ಯ ಬಂಡ್ರಿ, ರಾಜಾಪುರ ಗ್ರಾಮಗಳ ವ್ಯಾಪ್ತಿಯಲ್ಲಿನ ತನಿಖಾ ಠಾಣೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಳಿದ ಎರಡು ಠಾಣೆಗಳು ಕಾರ್ಯಭಾರವಿಲ್ಲದೆ ಹಲವಾರು ವರ್ಷಗಳಿಂದ ಸ್ಥಗಿತಗೊಂಡಿವೆ.

ಬಂಡ್ರಿ ಗ್ರಾಮದ ಬಳಿಯ ಖನಿಜ ಠಾಣೆಗೆ ಬೀಗ ಜಡಿಯಲಾಗಿದ್ದು, ಮೆಟ್ರಿಕಿ ಗ್ರಾಮದ ಆಂಧ್ರ ಗಡಿಲ್ಲಿನ ಖನಿಜ ತನಿಖಾ ಠಾಣೆಯ ಆವರಣದಲ್ಲಿ ತೂಕ ಮಾಪನ ಯಂತ್ರದ ಕಾಮಗಾರಿಯು ಅರ್ಧಕ್ಕೆ ನಿಂತಿದೆ. 

ಎರಡು ಗ್ರಾಮಗಳಲ್ಲಿನ ಸಂಯುಕ್ತ ಖನಿಜ ತನಿಖಾ ಠಾಣೆಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ವಹಣೆಯ ಕೊರತೆಯಿಂದ ನಿರುಪಯುಕ್ತವಾಗಿದ್ದರಿಂದ ಈ ಠಾಣೆಗಳ ವ್ಯಾಪ್ತಿಯಲ್ಲಿ ಜಲ್ಲಿಕಲ್ಲು, ಎಂ ಸ್ಯಾಂಡ್, ಮರಳು ಗಣಿಗಾರಿಕೆಯು ಅಕ್ರಮವಾಗಿ ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ತನಿಖಾ ಠಾಣೆಗಳ ಕಾರ್ಯಾಚರಣೆ ಸ್ಥಗಿತಗೊಂಡಿರುವುದರಿಂದ ಕ್ವಾರಿ ಮಾಲೀಕರು ಒಂದೇ ಪರ್ಮಿಟ್‌ನಲ್ಲಿ ನಿರಂತರವಾಗಿ ಅಕ್ರಮ ಸಾಗಾಣಿಕೆ ಮಾಡಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. 

ಅಕ್ರಮ ಸಾಗಾಣಿಕೆಯ ಮೇಲೆ ಕಣ್ಗಾವಲು ಇರಿಸಲು ರಾಜ್ಯ ಸರ್ಕಾರವು ಈ ಕೂಡಲೇ ಖನಿಜ ತನಿಖಾ ಠಾಣೆಗಳಿಗೆ ನೂತನ ಕಟ್ಟಡ, ತೂಕದ ಮಾಪನ ಯಂತ್ರಗಳ ಅಳವಡಿಕೆ, ಅಗತ್ಯ ಸಿಬ್ಬಂದಿ ಸೇರಿದಂತೆ ಇತರೆ ಮೂಲ ಸೌಲಭ್ಯ ಕಲ್ಪಿಸಿ, ಶೀಘ್ರದಲ್ಲೇ ಆರಂಭಿಸಬೇಕು ಎಂಬುದು ಜನರು ಒತ್ತಾಯ.

ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದ ಬಳಿಯ ಸಂಯುಕ್ತ ಖನಿಜ ತನಿಖಾ ಠಾಣೆಗೆ ಬೀಗ ಬಿದ್ದಿದೆ
ಶ್ರೀಶೈಲ ಆಲ್ದಳ್ಳಿ
ದ್ವಿತೀಯಾ ಇ.ಸಿ.

ಸ್ಥಗಿತಗೊಂಡ ಸಂಯುಕ್ತ ಖನಿಜ ತನಿಖಾ ಠಾಣೆಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮೂಲ ಸೌಲಭ್ಯಗಳನ್ನು ಕಲ್ಪಿಸಿ ಶೀಘ್ರವಾಗಿ ಪುನರ್ ಆರಂಭಿಸಬೇಕು

–ಶ್ರೀಶೈಲ ಆಲ್ದಳ್ಳಿ ಜನ ಸಂಗ್ರಾಮ ಪರಿಷತ್‌ ಮುಖಂಡ

ಸ್ಥಗಿತಗೊಂಡ ಎರಡು ಖನಿಜ ತನಿಖಾ ಠಾಣೆಗಳ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಠಾಣೆಗಳನ್ನು ಆರಂಭಿಸಲು ಸೂಕ್ತ ಕ್ರಮ ವಹಿಸಲಾಗುವುದು

–ದ್ವಿತೀಯಾ ಇ.ಸಿ. ಗಣಿ ಇಲಾಖೆ ಉಪ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.