ADVERTISEMENT

ತಟ್ಟೆ ಇಡ್ಲಿ, ಫಡ್ಡಿಗೆ ‘ಶಾಸ್ತ್ರಿ’ ಹೋಟೆಲ್‌

ಶಶಿಕಾಂತ್ ಎಸ್. ಶೆಂಬೆಳ್ಳಿ
Published 22 ಸೆಪ್ಟೆಂಬರ್ 2018, 11:43 IST
Last Updated 22 ಸೆಪ್ಟೆಂಬರ್ 2018, 11:43 IST
ಹೊಸಪೇಟೆಯ ಮೇನ್ ಬಜಾರ್‌ನಲ್ಲಿರುವ ಶಾಸ್ತ್ರಿ ಹೋಟೆಲ್‌ನಲ್ಲಿ ಬಿಸಿ... ಬಿಸಿ... ಫಡ್ಡು ಸಿದ್ಧಗೊಳ್ಳುತ್ತಿರುವುದು
ಹೊಸಪೇಟೆಯ ಮೇನ್ ಬಜಾರ್‌ನಲ್ಲಿರುವ ಶಾಸ್ತ್ರಿ ಹೋಟೆಲ್‌ನಲ್ಲಿ ಬಿಸಿ... ಬಿಸಿ... ಫಡ್ಡು ಸಿದ್ಧಗೊಳ್ಳುತ್ತಿರುವುದು   

ಹೊಸಪೇಟೆ: ಇಲ್ಲಿನ ತಟ್ಟೆ ಇಡ್ಲಿ ಮಲ್ಲಿಗೆ ಹೂವಿನಷ್ಟೇ ಮೃದುವಾಗಿರುತ್ತದೆ. ಬಾಯಲ್ಲಿ ಹಲ್ಲಿಲ್ಲದವರು ತಿನ್ನಬಹುದು. ಮೆಲ್ಲಬೇಕೆಂದಿಲ್ಲ. ಬಾಯಿಗೆ ಹಾಕಿಕೊಂಡರೆ ಕ್ಷಣಾರ್ಧದಲ್ಲಿ ಕರಗಿ ಹೋಗುತ್ತದೆ. ಅದನ್ನು ಸವಿಯಲು ಬೆಳಿಗ್ಗೆಯೇ ಜನ ಹೋಟೆಲ್‌ಗೆ ದಾಂಗುಡಿ ಇಡುತ್ತಾರೆ.

ಇದು ಮೇನ್‌ ಬಜಾರ್‌ನ ನಗರೇಶ್ವರ ದೇಗುಲದ ಎದುರಿಗಿರುವ ಶಾಸ್ತ್ರಿ ಹೋಟೆಲ್‌. ಬೆಳಿಗ್ಗೆ ಆರು ಗಂಟೆಗೆ ಇಲ್ಲಿ ಉಪಾಹಾರ ಸಿದ್ಧವಾಗಿರುತ್ತದೆ. ಅಷ್ಟೊತ್ತಿಗಾಗಲೇ ವಿವಿಧ ಕಡೆಗಳಿಂದ ಜನ ಬಂದಿರುತ್ತಾರೆ. ಅಷ್ಟೇ ಅಲ್ಲ, ಬೆಳಿಗ್ಗೆ ವಾಯು ವಿಹಾರ ಮುಗಿಸಿಕೊಂಡು ಹೋಗುವವರು ಒಂದೆರಡು ಬಿಸಿ... ಬಿಸಿ... ತಟ್ಟೆ ಇಡ್ಲಿ ತಿಂದು ಹೋಗುತ್ತಾರೆ. ಮನೆಗೆ ಪಾರ್ಸಲ್‌ ಕೊಂಡೊಯ್ಯುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಎರಡು ತಟ್ಟೆ ಇಡ್ಲಿ ಬೆಲೆ ₹ 25 ಇದೆ. ನಗರದ ಒಂದೆರಡು ಹೋಟೆಲ್‌ಗಳಲ್ಲಿ ವಾರದಲ್ಲಿ ಎರಡು ದಿನ ದಿನ ತಟ್ಟೆ ಇಡ್ಲಿ ಮಾಡುತ್ತಾರೆ. ಆದರೆ, ಇಲ್ಲಿ ನಿತ್ಯವೂ ಮಾಡಲಾಗುತ್ತದೆ. ಇಲ್ಲಿನ ರುಚಿ ಕೂಡ ಭಿನ್ನ ಎನ್ನುತ್ತಾರೆ ಗ್ರಾಹಕರು.

ತಟ್ಟೆ ಇಡ್ಲಿ ಜತೆಗೆ ಇಲ್ಲಿನ ಫಡ್ಡಿಗೂ ಬಹಳ ಬೇಡಿಕೆ ಇದೆ. ಅದರೊಂದಿಗೆ ಕೊಡುವ ಕೆಂಪು ಚಟ್ನಿ ಒಳ್ಳೆಯ ಕಾಂಬಿನೇಷನ್‌. ಟೊಮ್ಯಾಟೊ, ಒಣ ಮೆಣಸಿನಕಾಯಿ, ಜೀರಿಗೆ ಹಾಗೂ ಕೊತ್ತಂಬರಿ ಹಾಕಿ ಅದನ್ನು ತಯಾರಿಸಲಾಗುತ್ತದೆ. ಅಂದಹಾಗೆ ಹತ್ತು ಫಡ್ಡಿಗೆ ₹ 30 ಬೆಲೆ ಇದೆ.

ADVERTISEMENT

ದೋಸೆ ಇಷ್ಟಪಡುವವರು ‘ಹೊಸಪೇಟೆ ಬೆಣ್ಣೆ ದೋಸೆ’ ಸವಿದು ಹೋಗುತ್ತಾರೆ. ಜಿಲ್ಲೆಯ ಕೊಟ್ಟೂರಿನಿಂದ ಶುದ್ಧ ಬೆಣ್ಣೆ ತಂದು ತಯಾರಿಸುವುದರಿಂದ ಅದರ ರುಚಿಯೇ ಬೇರೆ ಎನ್ನುವುದು ಗ್ರಾಹಕರ ಮಾತು. ಇನ್ನುಳಿದಂತೆ ಟೊಮ್ಯಾಟೊ ದೋಸೆ, ಮಸಾಲ್‌ ದೋಸೆ, ಕೊಟ್ಟೂರು ಮಿರ್ಚಿ, ಮಂಡಕ್ಕಿ ವಗ್ಗರಣೆಯೂ ಸಿಗುತ್ತದೆ.

ಸಹೋದರರಾದ ಹಳ್ಳಿ ಶೆಟ್ರು ಕೊಟ್ರೇಶ ಹಾಗೂ ಮಂಜುನಾಥ ಅವರು ಈ ಹೋಟೆಲಿನ ಮಾಲೀಕರು. ಏಳು ಜನ ಕೆಲಸ ಮಾಡುವವರು ಇದ್ದಾಗಲೂ ಸಹೋದರರಿಬ್ಬರೂ ಎಲ್ಲ ಕೆಲಸ ಮಾಡುತ್ತಾರೆ. ಹಣೆ ಮೇಲೆ ಫಳಫಳ ಹೊಳೆಯುವ ವಿಭೂತಿ ಧರಿಸುವ ಹಳ್ಳಿ ಶೆಟ್ರು ಕೊಟ್ರೇಶ ಅಡುಗೆ ಕೋಣೆಯಲ್ಲಿ ಓಡಾಡಿ ಕೆಲಸ ಮಾಡಿದರೆ, ಅವರ ಕಿರಿಯ ಸಹೋದರ ಮಂಜುನಾಥ ಅವರು ಗಲ್ಲಾ ಪೆಟ್ಟಿಗೆ ಮುಂದೆ ನಿಂತಿರುತ್ತಾರೆ.

12 ವರ್ಷಗಳಿಂದ ಒಂದೇ ಸ್ಥಳದಲ್ಲಿ ಹೋಟೆಲ್‌ ನಡೆಸುತ್ತಿರುವ ಹಳ್ಳಿ ಶೆಟ್ರು ಕೊಟ್ರೇಶ ಬಹಳ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ. ಅದನ್ನು ಅವರ ಬಾಯಿಂದಲೇ ಕೇಳಿ. ‘ಹೋಟೆಲ್‌ಗೂ ಮುನ್ನ ಎಂಟು ವರ್ಷ ತಳ್ಳುಬಂಡಿ ಮೇಲೆ ತಟ್ಟೆ ಇಡ್ಲಿ, ಫಡ್ಡು, ಚಹಾ ಮಾರಾಟ ಮಾಡುತ್ತಿದ್ದೇವು. ನಗರದ ದೀಪಾಯನ ಶಾಲೆಯ ಸಮೀಪ ನಮ್ಮ ಕಾಯಂ ಠಿಕಾಣಿ ಆಗಿತ್ತು. ಆದರೆ, ಒಂದು ದಿನ ಏಕಾಏಕಿ ಬಂದು ತಳ್ಳುಗಾಡಿ ನಿಲ್ಲಿಸದಂತೆ ಸೂಚಿಸಿದರು. ಸಾಲ ಮಾಡಿ, ಹೋಟೆಲ್‌ ಆರಂಭಿಸಿದೆವು. ಕಷ್ಟಪಟ್ಟು ಪ್ರಾರಂಭಿಸಿದ ಕೆಲಸ ನಮ್ಮ ಕೈ ಹಿಡಿದಿದೆ’ ಎಂದರು.

ಬೆಳಿಗ್ಗೆ ಆರರಿಂದ ಮಧ್ಯಾಹ್ನ 12ರ ವರೆಗೆ, ಸಂಜೆ ಐದರಿಂದ ರಾತ್ರಿ ಹತ್ತರ ವರೆಗೆ ಹೋಟೆಲ್‌ ತೆರೆದಿರುತ್ತದೆ. ಹಳ್ಳಿ ಶೆಟ್ರು ಕೊಟ್ರೇಶ ಮೊಬೈಲ್‌ ಸಂಖ್ಯೆ: 70228 28100.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.