ADVERTISEMENT

ವಿಜಯನಗರಕ್ಕೆ ಸೇರಿಸಲು ಆಗ್ರಹಿಸಿ ಕಂಪ್ಲಿ ಬಂದ್‌ ನಾಳೆ

ಸಚಿವರಿಗೆ ಘೇರಾವ್ ಯತ್ನ: ಕಾರ್ಯಕರ್ತರು ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 9:47 IST
Last Updated 29 ನವೆಂಬರ್ 2020, 9:47 IST
ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಘೇರಾವ್‌ ಹಾಕಲು ಸಿದ್ಧರಾಗಿದ್ದ ವಿವಿಧ ಸಂಘಟನೆಗಳ ಮುಖಂಡರನ್ನು ಬಳ್ಳಾರಿಯಲ್ಲಿ ಭಾನುವಾರ ಪೊಲೀಸರು ವಶಕ್ಕೆ ಪಡೆದರು.
ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಘೇರಾವ್‌ ಹಾಕಲು ಸಿದ್ಧರಾಗಿದ್ದ ವಿವಿಧ ಸಂಘಟನೆಗಳ ಮುಖಂಡರನ್ನು ಬಳ್ಳಾರಿಯಲ್ಲಿ ಭಾನುವಾರ ಪೊಲೀಸರು ವಶಕ್ಕೆ ಪಡೆದರು.   
""
""

ಬಳ್ಳಾರಿ/ಕಂಪ್ಲಿ: ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ನಗರದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಅವರಿಗೆ ಘೇರಾವ್‌ ಹಾಕಲು ಸಿದ್ಧತೆ ನಡೆಸಿದ್ದ ಕರ್ನಾಟಕ ಜನಸೈನ್ಯ ಸಂಘಟನೆಯ ಇಪ್ಪತ್ತಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ಇದೇ ವೇಳೆ, ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸದೇ ಇರುವುದನ್ನು ಖಂಡಿಸಿ ಸೋಮವಾರ ಬಂದ್‌ ಆಚರಿಸಲು ಕಂಪ್ಲಿ ತಾಲ್ಲೂಕು ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾನುವಾರ ಸಭೆ ನಡೆಸಿ ನಿರ್ಧರಿಸಿದರು.

ಇದೇ ಸಂದರ್ಭದಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌, ‘ಎಲ್ಲರ ಅಭಿಪ್ರಾಯವನ್ನು ಪಡೆದೇ ವಿಭಜನೆಯ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಸಾರ್ವಜನಿಕ ಆಕ್ಷೇಪಣೆಗಳನ್ನು ಸಲ್ಲಿಸಲು ಕೆಲವೇ ದಿನಗಳಲ್ಲಿ ಪ್ರಕಟಣೆ ನೀಡಲಾಗುವುದು. ಆಗ ವಿಭಜನೆಯ ವಿರೋಧಿಗಳು ಸೇರಿದಂತೆ ಎಲ್ಲರೂ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಅವುಗಳನ್ನು ಪರಿಶೀಲಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ADVERTISEMENT
ವಿಜಯನಗರ ಜಿಲ್ಲೆಗೆ ಸೇರಿಸಲು ಆಗ್ರಹಿಸಿ ಸೋಮವಾರ ಬಂದ್‌ ಆಚರಿಸುವ ಕುರಿತು ಕಂಪ್ಲಿಯಲ್ಲಿ ಭಾನುವಾರ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಹೇಮಯ್ಯಸ್ವಾಮಿ ಮಾತನಾಡಿದರು.

ವಶಕ್ಕೆ: ಬಿಜೆಪಿಯ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಚಿವರು ಬರಲಿದ್ದ ಹಿನ್ನೆಲೆಯಲ್ಲಿ ನಗರದ ಕನಕದುರ್ಗಮ್ಮ ಗುಡಿ ಮುಂದೆ ಘೇರಾವ್‌ ಹಾಕಲು ಸಂಘಟನೆಯ ಮುಖಂಡ ಕೆ.ಎರ್ರಿಸ್ವಾಮಿ ನೇತೃತ್ವದಲ್ಲಿ ಸಿದ್ಧತೆ ನಡೆದಿತ್ತು.

ಆದರೆ ಸಚಿವರು ಬರುವ ಮುನ್ನವೇ ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿದ್ದ ಎಲ್ಲರನ್ನೂ ವಶಕ್ಕೆ ಪಡೆದು ಎಪಿಎಂಸಿ ಠಾಣೆಗೆ ಕರೆದೊಯ್ದರು. ಸಮಾವೇಶ ಮುಗಿದರೂ ಅವರನ್ನು ಪೊಲೀಸರು ಬಿಟ್ಟಿರಲಿಲ್ಲ.

ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಮುಖಂಡರಾದ ಎರ್ರಿಸ್ವಾಮಿ, ಸಿದ್ಮಲ್‌ ಮಂಜುನಾಥ್‌, ’ವಿಭಜನೆಯ ವಿರುದ್ಧ ಪ್ರತಿಭಟನೆಯನ್ನು ಹತ್ತಿಕ್ಕುವ ಸಚಿವರ ಪ್ರಯತ್ನ ಖಂಡನೀಯ. ವಿಭಜನೆ ನಿರ್ಧಾರವನ್ನು ಕೈಬಿಡುವವರೆಗೂ ಹೋರಾಟ ನಿಲ್ಲದು’ ಎಂದು ಹೇಳಿದರು.

ಬಂದ್‌: ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲನ್ನೇ ವಿಜಯನಗರದಿಂದ ಹೊರಕ್ಕೆ ಇಡುವ ಪ್ರಯತ್ನ ಸರಿಯಲ್ಲ. ಈ ನಿರ್ಧಾರ ವಾಪಸ್ ಪಡೆಯಬೇಕು ಎಂದು ಮುಖಂಡರುಸಭೆಯಲ್ಲಿ ಆಗ್ರಹಿಸಿದರು.

ಸಭೆಯಲ್ಲಿ ಸಮಿತಿಯ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ವಿವಿಧ ಸಂಘಟನೆಗಳ ಮುಖಂಡರಾದ ಜಿ.ರಾಮಪ್ಪ, ದಾನಪ್ಪ, ಕೆ.ಶಂಕರಪ್ಪ, ಕೆ.ಮನೋಹರ್, ಪುರಸಭೆ ಸದಸ್ಯರಾದ ವಿ.ಎಲ್‌.ಬಾಬು, ಪ್ರಸಾದ್‌, ವೀರಾಂಜನೇಯುಲು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.