ADVERTISEMENT

ಆನೇಕಲ್: ಕನ್ನಡಿಗರಿಗೆ ಮೀಸಲಾತಿ ಬೇಕು

ಉದ್ಯೋಗಾವಕಾಶ: ಸ್ಥಳೀಯರಿಗೆ ಆದ್ಯತೆ ಸಿಗಲಿ– ಕೆ.ಶಿವರಾಮು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 5:38 IST
Last Updated 5 ಫೆಬ್ರುವರಿ 2023, 5:38 IST
ಆನೇಕಲ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿರುವ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕಿ ವತ್ಸಲ ಅವರು ರಚಿಸಿರುವ ‘ಕಪ್ಪೆಯ ಮದುವೆ’ ಪುಸ್ತಕವನ್ನು ಸಮ್ಮೇಳನಾಧ್ಯಕ್ಷ ಡಾ.ಜಿ.ಮುನಿರಾಜು ಬಿಡುಗಡೆ ಮಾಡಿದರು
ಆನೇಕಲ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿರುವ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕಿ ವತ್ಸಲ ಅವರು ರಚಿಸಿರುವ ‘ಕಪ್ಪೆಯ ಮದುವೆ’ ಪುಸ್ತಕವನ್ನು ಸಮ್ಮೇಳನಾಧ್ಯಕ್ಷ ಡಾ.ಜಿ.ಮುನಿರಾಜು ಬಿಡುಗಡೆ ಮಾಡಿದರು   

ಆನೇಕಲ್ : ‌ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶಗಳಲ್ಲಿ ಮೀಸಲಾತಿ ನೀಡಬೇಕು. ಇಲ್ಲಿಯ ನೆಲ, ಜಲ ಬಳಕೆ ಮಾಡುವ ಕಂಪನಿಗಳು ಉದ್ಯೋಗ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮು ಹೇಳಿದರು.

ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿರುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ
ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಈ ವರದಿಯನ್ನು ಸರ್ಕಾರ ಸಮರ್ಪಕವಾಗಿ ಜಾರಿಗೆ ತಂದರೆ ಉದ್ಯೋಗದ ಸಮಸ್ಯೆ ನಿವಾರಣೆಯಾಗುತ್ತದೆ
ಎಂದರು.

ಕೇಂದ್ರ ಸರ್ಕಾರದ ಹುದ್ದೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿಯೂ ಪರೀಕ್ಷೆ ಬರೆಯುವ ಅವಕಾಶ ದೊರೆತಿದೆ. ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪರೀಕ್ಷೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ADVERTISEMENT

ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆದು ತೇರ್ಗಡೆಯಾಗುವುದು ಸಾಧ್ಯವೇ ಎಂಬ ಭಾವನೆಯಿತ್ತು. ಆದರೆ ಸಾಧನೆಗೆ ಅಸಾಧ್ಯವಾದುದ್ದು ಯಾವುದು ಇಲ್ಲ. ಹಾಗಾಗಿಯೇ ಕನ್ನಡದಲ್ಲಿ ಐಎಎಸ್‌ ತೇರ್ಗಡೆಯಾದ ಅವಕಾಶ ದೊರೆಯಿತು. ಕನ್ನಡ ಅತ್ಯಂತ ಶ್ರೀಮಂತವಾದ ಭಾಷೆ ಈ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ಭವಿಷ್ಯವನ್ನು ರೂಪಿಸುವ ಭಾಷೆಯಾಗಬೇಕು ಎಂದರು.

ಸಮ್ಮೇಳನಾಧ್ಯಕ್ಷ ಡಾ.ಜಿ.ಮುನಿರಾಜು ಮಾತನಾಡಿ, ಸಾಹಿತ್ಯದ ಕಂಪನ್ನು ತಾಲ್ಲೂಕಿನ ಎಲ್ಲೆಡೆ ಹರಡುವಲ್ಲಿ ಸಾಹಿತ್ಯ ಸಮ್ಮೇಳನ ಉತ್ತಮ ವೇದಿಕೆಯಾಗಿದೆ. ಯುವ ಬರಹಗಾರರು, ಕವಿಗಳ ಸಾಧನೆಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಮ್ಮೇಳನದ ತೀರ್ಮಾನಗಳು ಹಾಳೆಯಲ್ಲಿಯೇ ಉಳಿಯುತ್ತವೆ. ಇವುಗಳು ಜಾರಿಯಾಗಿ ಕನ್ನಡಿಗರ ಬದುಕನ್ನು ಹಸುನು ಮಾಡಬೇಕು ಎಂದು ಸಮ್ಮೇಳನಾಧ್ಯಕ್ಷ ಡಾ.ಜಿ.ಮುನಿರಾಜು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ.ಜಯಲಕ್ಷ್ಮೀ, ಮುಖಂಡರಾದ ಪಟಾಪಟ್‌ ನಾಗರಾಜು, ಜಿಗಣಿ ಶಂಕರ್, ಮಂಜುನಾಥ ದೇವ, ರಾವಣ, ಹುಲ್ಲಹಳ್ಳಿ ಶ್ರೀನಿವಾಸ್, ಮುನಿರಾಜುಗೌಡ, ತಿಮ್ಮರಾಜು, ರವಿರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷ ಆದೂರು ಪ್ರಕಾಶ್‌ ಇದ್ದರು.

ಸಮ್ಮೇಳನದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿಸಿದರು. ಸಮ್ಮೇಳನಾಧ್ಯಕ್ಷರ ಜೊತೆ ಮಾತು ಮಂಥನ, ಬಹಿರಂಗ ಅಧಿವೇಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.