
ಆನೇಕಲ್: ಅತ್ತಿಬೆಲೆ-ಆನೇಕಲ್ ಮುಖ್ಯ ರಸ್ತೆಯ ಹಾಲ್ದೇನಹಳ್ಳಿ ರೈಲ್ವೇ ಗೇಟ್ ಬಳಿ ಬಿಎಂಟಿಸಿ ಬಸ್ಸೊಂದು ಕೆಟ್ಟು ನಿಂತಿದ್ದರಿಂದ ಕೆಲ ಕಾಲ ಆತಂಕ ಉಂಟಾಗಿತ್ತು. ಸ್ಥಳೀಯರು ಮತ್ತು ವಾಹನ ಸವಾರರು ಬಸ್ನ್ನು ತಳ್ಳಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಅತ್ತಿಬೆಲೆಯಿಂದ ಆನೇಕಲ್ಗೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಕೆಟ್ಟು ನಿಂತಿತು. ಇದರಿಂದಾಗಿ ಆನೇಕಲ್ ಕಡೆಗೆ ದಿನ್ನೂರುವರೆಗೂ ಮತ್ತು ಅತ್ತಿಬೆಲೆಯ ಕಡೆಗೆ ಕರ್ಪೂರುವರೆಗೂ ಸುಮಾರು 2ಕಿ.ಮೀ.ಗೂ ಹೆಚ್ಚು ದೂರ ವಾಹನ ದಟ್ಟಣೆ ಉಂಟಾಗಿತು. ಬೈಕ್ ಮತ್ತು ಕಾರುಗಳು ನಿಂತಲ್ಲೇ 40ನಿಮಿಷಕ್ಕೂ ಹೆಚ್ಚು ಕಾಲ ನಿಂತಿದ್ದವು. ರೈಲ್ವೇ ಗೇಟ್ನ ಸಮಸ್ಯೆಯಿಂದ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದ ದೃಶ್ಯ ಹಾಲ್ದೇನಹಳ್ಳಿ ಗೇಟ್ ಬಳಿ ಕಂಡು ಬಂದಿತು.
ಪ್ರತಿ ರೈಲು ಬಂದಾಗ 20ನಿಮಿಷಕ್ಕೂ ಹೆಚ್ಚು ಸಮಯ ರೈಲ್ವೇ ಗೇಟ್ ಹಾಕಾಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಪರ್ಯಾಯ ಮಾರ್ಗಗಳಿಲ್ಲದೇ ರೈಲ್ವೇ ಗೇಟ್ ಬಳಿ ನಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮೇಲ್ಸೇತುವೆ ಅಥವಾ ಅಂಡರ್ಪಾಸ್ ಸೇರಿದಂತೆ ಯಾವುದಾದರೂ ಪರ್ಯಾಯ ಮಾರ್ಗವನ್ನು ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಹಾಲ್ದೇನಹಳ್ಳಿ ರೈಲ್ವೇ ಗೇಟ್ ರಸ್ತೆಯನ್ನು ತುರ್ತು ಸಂದರ್ಭದಲ್ಲಿ ಯಾರು ಸಹ ಬಳಸಬೇಡಿ, ರೈಲ್ವೇ ಗೇಟ್ ಬಳಿ ಒಮ್ಮೆ ನಿಂತು ಗೇಟ್ ಹಾಕಿದರೆ ಕನಿಷ್ಟ ಅರ್ಧ ಗಂಟೆ ಸಮಯ ಹಿಡಿಯುತ್ತದೆ. ವಾಹನಗಳ ಉದ್ದನೆಯ ಸಾಲು ಕಂಡು ಬರುತ್ತದೆ. ಇಕ್ಕಿಟ್ಟಿನಲ್ಲಿ ದ್ವಿಚಕ್ರ ವಾಹನಗಳ ಪರದಾಡುವಂತಾಗಿದೆ. ಹಾಗಾಗಿ ಪರ್ಯಾಯ ರಸ್ತೆ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಅಕ್ಷರ ಕಾಲೇಜಿನ ಪ್ರಾಧ್ಯಾಪಕ ಸುನೀಲ್ಕುಮಾರ್ ಒತ್ತಾಯಿಸಿದ್ದಾರೆ.
ರೈಲ್ವೇ ಗೇಟ್ಗೆ ಪರ್ಯಾಯ ರಸ್ತೆ ಕಲ್ಪಿಸಲು ರೈಲ್ವೇ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕೇಳಸೇತುವೆ ಇದ್ದರೂ ಉಪಯೋಗಕ್ಕೆ ಬಾರದಾಗಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಉಪಯೋಗವಾಗುತ್ತಿಲ್ಲ. ರೈಲ್ವೇ ಗೇಟ್ಗೆ ಪರ್ಯಯಾ ರಸ್ತೆಗಳಿಲ್ಲ ಮತ್ತು ರೈಲುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಂಬುಲೆನ್ಸ್ ಸೇರಿದಂತೆ ತುರ್ತು ಪರಿಸ್ಥಿತಿಯಲ್ಲಿ ಪರದಾಡಬೇಕಾಗುತ್ತದೆ. ಹಾಗಾಗಿ ರೈಲ್ವೇ ಗೇಟ್ ಬಳಿ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಆನೇಕಲ್ನ ಚಂದ್ರಣ್ಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.