
ದೊಡ್ಡಬಳ್ಳಾಪುರ: ಇ-ಸ್ವತ್ತು ತಂತ್ರಾಂಶ 2.0 ಜಾರಿಯಾಗಲಿದೆ ಎನ್ನುವ ಕಾರಣಕ್ಕೆ ಇ–ಸ್ವತ್ತು ತಂತ್ರಾಂಶ 1.0 ಜಾರಿಯಲ್ಲಿದ್ದ ಸಂದರ್ಭ ಎರಡು ತಿಂಗಳಿಂದ ಯಾವ ಅರ್ಜಿ ಸ್ವೀಕರಿಸಿಲ್ಲ. ಖಾತೆ ಮಾಡಿಕೊಟ್ಟಿಲ್ಲ. ಇದೀಗ ಇ-ಸ್ವತ್ತು ತಂತ್ರಾಂಶ 2.0 ಜಾರಿಯಾದರೂ ಒಂದೂವರೆ ತಿಂಗಳು ಕಳೆದರೂ ಮತ್ತೆ ಆದ ಹಳೆ ಸಮಸ್ಯೆಗಳೇ ಕಾಡುತ್ತಿದ್ದು, ಇದುವರೆಗೆ ಒಂದೂ ಇ–ಖಾತೆ ಆಗಿಲ್ಲ. ಈಗ ಜನರಿಗೆ ಹಳೆಯದು ಇಲ್ಲದೆ, ಹೊಸ ತಂತ್ರಾಂಶದಿಂದ ಯಾವ ಕೆಲಸವು ಆಗದ ಜನರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
ಇ–ಸ್ವತ್ತು 1.0ರಲ್ಲಿ ಕಂಡುಬಂದ ತಾಂತ್ರಿಕ ಮಿತಿ ಸರಿಪಡಿಸುವ ಆಶಯದಿಂದ ಹೊಸ ಆವೃತ್ತಿ ಜಾರಿಗೆ ತರಲಾಗಿತ್ತು. ಆದರೆ ಆರಂಭ ಹಂತದಲ್ಲೇ ಸರ್ವರ್ ಡೌನ್, ಲಾಗಿನ್ ವಿಫಲತೆ, ದಾಖಲೆ ಅಪ್ಲೋಡ್ ಆಗದಿರುವುದು, ಅರ್ಜಿ ಸ್ಥಗಿತಗೊಳ್ಳುವುದು ಸೇರಿದಂತೆ ಹಲವು ದೋಷ ಕಾಣಿಸಿಕೊಂಡಿವೆ. ಇದರ ಪರಿಣಾಮ ಗ್ರಾಮ ಪಂಚಾಯಿತಿಗಳಲ್ಲಿ ದಿನನಿತ್ಯದ ಆಸ್ತಿ ಸಂಬಂಧಿತ ಸೇವೆಗಳು ಅಸ್ತವ್ಯಸ್ತಗೊಂಡಿವೆ.
ಈ ಮೂಲಕ ಹೊಸ ತಂತ್ರಾಂಶ ಜಾರಿಯಾಗಿ ಸುಸಲಿತವಾಗಿ ಇ–ಖಾತೆ, ಇ–ಸ್ವತ್ತು ಆಗುತ್ತದೆ ಎಂದು ಜನರ ಭರವಸೆ ಹುಸಿಯಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಿರ್ಮಾಣವಾಗುತ್ತಿದ್ದ ಅಕ್ರಮ ಬಡವಾಣೆಗಳಿಗೆ ಕಡಿವಾಣ ಹಾಕುವ ಸಲುವಾಗಿ ಒಂದು ವರ್ಷದ ಹಿಂದೆ ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆದು ನಿರ್ಮಾಣವಾಗಿ ಇ-ಖಾತೆಗಳನ್ನು ಹೊಂದಿರುವ ನಿವೇಶನಗಳ ನೋಂದಣಿಗೆ ಮಾತ್ರ ಅವಕಾಶ ನೀಡಿ ನೋಂದಣಿ ಪ್ರಕ್ರಿಯೆಯನ್ನು ಪಂಚಾಯಿತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆ ರದ್ದುಗೊಳಿಸಿತ್ತು.
ಅಕ್ರಮ ಬಡಾವಣೆಗಳಲ್ಲಿ ನಿವೇಶನಗಳನ್ನು ಖರೀದಿಸಿದ್ದವರಿಗೆ, ಕಂದಾಯ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದವರಿಗೂ ಬಿ-ಖಾತೆಗಳನ್ನು ನೀಡುವ ಸಲುವಾಗಿ ಡಿಸೆಂಬರ್ 1 ರಂದು ಹೊಸ ನಿಯಮಗಳನ್ನು ಒಳಗೊಂಡ ಇ-ಸ್ವತ್ತು ತಂತ್ರಾಂಶ 2.0 ತಂತ್ರಾಂಶವಾಗಿ ಜಾರಿಗೊಳಿಸಲಾಗಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ನಾಗರಿಕರು ಸಹ ಆನ್ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಬಿ ಅಥವಾ ಇ-ಖಾತೆಗಳಿಗೆ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆದರೆ ಇದುವರೆಗೂ ಹೊಸ ತಂತ್ರಾಂಶಗಳಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿಲ್ಲ. ಕೆಲವು ಸಂದರ್ಭದಲ್ಲಿ ಅರ್ಜಿ ಸಲ್ಲಿಕೆಯಾದರು ಖಾತೆಗಳು ಆಗುತ್ತಿಲ್ಲ ಎನ್ನುತ್ತಾರೆ ಗ್ರಾಮ ಒನ್ ಸೇವಾ ಕೇಂದ್ರಗಳ ಸಿಬ್ಬಂದಿ.
‘ಇ-ಖಾತೆ ಮಾಡಿಸಿಕೊಳ್ಳಲು ಹೊಸದು ಇಲ್ಲ ಹಳೇಯದು ಇಲ್ಲದೆ ಗ್ರಾಮ ಪಂಚಾಯಿತಿ ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ದಾಖಲೆಗಳನ್ನು ಹಿಡಿದುಕೊಂಡು ಅಲೆದಾಡುವ ಸ್ಥಿತಿ ಬಂದಿದೆ’ ಎಂದು ತಾಲ್ಲೂಕಿನ ರಾಂಪುರ ಗ್ರಾಮದ ರಮೇಶ್ಬಾಬು ತಮ್ಮ ಅಳಲುತೋಡಿಕೊಂಡರು. ಯೋಜನ ಪ್ರಾಧಿಕಾರದಿಂದ ಅನುಮತಿ ಪಡೆಯದೇ ನಿರ್ಮಿಸಲಾಗಿದ್ದ ಬಡಾವಣೆಯಲ್ಲಿ ಈ ಹಿಂದೆ ಖರೀದಿಸಿದ್ದ ನಿವೇಶನವನ್ನು ಮಗಳ ಮದುವೆ ಸಲುವಾಗಿ ಮಾರಾಟ ಮಾಡಬೇಕಿತ್ತು. ಆದರೆ ನೋಂದಣಿ ರದ್ದುಗೊಳಿಸಿದ್ದರಿಂದ ಸಾಲ ಮಾಡಿ ಮದುವೆ ಮಾಡಲಾಯಿತು. ಈಗ ನೋಂದಣಿ ಮಾಡಿಸಲು ಒಂದು ತಿಂಗಳಿಂದ ದಾಖಲೆಗಳನ್ನು ಹಿಡಿದುಕೊಂಡು ಗ್ರಾಮ ಪಂಚಾಯಿತಿಗೆ ತಿರುಗಾಡಿದರೂ ಇ-ಸ್ವತ್ತು ತಂತ್ರಾಂಶ ಇನ್ನು ಸರಿಯಾಗಿಲ್ಲ ಎನ್ನುತ್ತಲೇ ಅಧಿಕಾರಿಗಳು ಕಾಲಕೆಳೆಯುತ್ತಿದ್ದಾರೆ. ಹೀಗಾದರೆ ಬಡವರ ಕಷ್ಟ ಹೇಗೆ ಪರಿಹಾರವಾಗುತ್ತದೆ ಎಂದು ಪ್ರಶ್ನಿಸಿದರು.
ಇ-ಸ್ವತ್ತು ತಂತ್ರಾಂಶ 2.0 ಜಾರಿಗೆ ಬರುವ ಎರಡು ತಿಂಗಳ ಹಿಂದೆಯೇ ಗ್ರಾಮ ಠಾಣಾ ವ್ಯಾಪ್ತಿಯ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಬಡಾವಣೆಗಳಲ್ಲಿನ ನಿವೇಶನಗಳಿಗೆ ಇ-ಖಾತೆ ಮಾಡಲು ಅರ್ಜಿ ಸ್ವೀಕಾರ ಸ್ಥಗಿತಗೊಳಿಸಲಾಗಿತ್ತು. ಈಗ ನೋಡಿದರೆ ಎಲ್ಲಾ ದಾಖಲೆಗಳು ಸರಿ ಇರುವ ಹಾಗೂ ಅಕ್ರಮ ಬಡಾವಣೆಗಳು ಎಂದು ಗುರುತಿಸಿರುವ ಎ ಮತ್ತು ಬಿ-ಖಾತೆ ಸೇರಿದಂತೆ ಯಾವುದಕ್ಕೂ ಅರ್ಜಿ ಸ್ವೀಕರಿಸಲು ಆಗುತ್ತಿಲ್ಲ. ಮೂರು ತಿಂಗಳಿಂದಲೂ ಒಂದೂ ಖಾತೆಗಳೆ ಆಗಿಲ್ಲ. ಪ್ರತಿ ದಿನವು ಸಾರ್ವಜನಿಕರಿಗೆ ಉತ್ತರ ಹೇಳಿ ಬೇಸರವಾಗಿ ಹೋಗಿದೆ ಎನ್ನುತ್ತಾರೆ ತಾಲ್ಲೂಕಿನ ಗ್ರಾಮ ಪಂಚಾಯಿತಿಯೊಂದರ ಅಭಿವೃದ್ಧಿ ಅಧಿಕಾರಿ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಇ-ಸ್ವತ್ತು ತಂತ್ರಾಂಶ 2.0 ಮೂಲಕ ವಿವಿಧ ಮಾಧರಿಯ ನಿವೇಶನಗಳ ಖಾತೆಗಾಗಿ 1295 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಇನ್ನೂ ತಂತ್ರಾಂಶದಲ್ಲಿನ ಕೆಲವು ತಾಂತ್ರಿಕ ತೊಂದರೆಗಳಿಂದ ಖಾತೆಗಳು ಆಗುತ್ತಿಲ್ಲ. ತಾಂತ್ರಿಕ ತೊಂದರೆ ಸರಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
–ಶಿವಕುಮಾರ್, ಉಪಕಾರ್ಯದರ್ಶಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.