* ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಅಡಿ ವಿನಿಮಯ
* ಮೊದಲ ಬಾರಿಗೆ ಬನ್ನೇರುಘಟ್ಟ ಉದ್ಯಾನದ ಆನೆಗಳ ವಿನಿಮಯ
* ಬನ್ನೇರುಘಟ್ಟದಿಂದ ಜಪಾನ್ ಮೃಗಾಲಯದವರೆಗೆ ಒಟ್ಟು 20 ತಾಸು ಪ್ರಯಾಣ
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ ನಾಲ್ಕು ಆನೆಗಳು ಗುರುವಾರ (ಜುಲೈ 24) ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಜಪಾನ್ಗೆ ಪ್ರಯಾಣ ಮಾಡಲಿವೆ. ಇವುಗಳ ಆರೈಕೆಗಾಗಿ ತಜ್ಞರ ತಂಡವು ಪ್ರಯಾಣ ಬೆಳೆಸಲಿದೆ.
ಬನ್ನೇರುಘಟ್ಟದಿಂದ ಜಪಾನ್ಗೆ ತೆರಳುತ್ತಿರುವ ನಾಲ್ಕು ಆನೆಗಳಿಗೂ ವಿಮಾನ ಪ್ರಯಾಣಕ್ಕೆ ಹೊಂದಿಕೊಳ್ಳುವಂತೆ ತರಬೇತಿ ನೀಡಲಾಗಿದೆ.
ವಿಮಾನ ಏರುವ ಮುನ್ನ ಎಲ್ಲಾ ಆನೆಗಳಿಗೂ ಆಹಾರ ನೀಡಲಾಗುತ್ತದೆ. 8 ತಾಸು ವಿಮಾನ ಪ್ರಯಾಣದ ವೇಳೆ ಆನೆಗಳಿಗೆ ಸೌತೆಕಾಯಿ ಮತ್ತು ಬಾಳೆಹಣ್ಣು ನೀಡಲಾಗುತ್ತದೆ.
ವಿಮಾನ ಇಳಿದ ನಂತರ ಸಹ ಆನೆಗಳಿಗೆ ದೈನಂದಿನ ಆಹಾರ ನೀಡಲಾಗುವುದು. ಆನೆಗಳ ಜೊತೆ ತೆರಳುವ ಬನ್ನೇರುಘಟ್ಟದ ಸಿಬ್ಬಂದಿ ಆರಂಭದಲ್ಲಿ ಎಲ್ಲಾ ರೀತಿಯ ಆರೈಕೆ ಮಾಡಲಿದ್ದಾರೆ. ಅವು ಅಲ್ಲಿಯ ಆಹಾರ, ಪರಿಸರಕ್ಕೆ ಹೊಂದಿಕೊಂಡ ನಂತರ ಹಿಂದಿರುಗಲಿದ್ದಾರೆ ಎಂದು ಉದ್ಯಾನದ ಕಾರ್ಯನಿರ್ವಹಾಯಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು.
ಆನೆ ಆರೈಕೆಗೆ ತಂಡ: ಬನ್ನೇರುಘಟ್ಟ ಜೈವಿಕ ಉದ್ಯಾನದ ಇಬ್ಬರು ಪಶುವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು ಮತ್ತು ಒಬ್ಬ ಮೇಲ್ವಿಚಾರಕ, ಒಬ್ಬ ಜೀವಶಾಸ್ತ್ರಜ್ಞೆ ಹಾಗೂ ಹಿಮೇಜಿ ಸೆಂಟ್ರಲ್ ಪಾರ್ಕ್ನ ಇಬ್ಬರು ಪಶುವೈದ್ಯರು ಆನೆಗಳೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ.
ಹಿಮೇಜಿ ಸೆಂಟ್ರಲ್ ಪಾರ್ಕ್ನ ಆನೆ ಪಾಲಕರಿಗೆ 2025ರ ಮೇ 12 ರಿಂದ 25ರವರೆಗೆ ಬನ್ನೇರುಘಟ್ಟದಲ್ಲಿ ತರಬೇತಿ ನೀಡಲಾಗಿತ್ತು.
ಬನ್ನೇರುಘಟ್ಟದ ಸಿಬ್ಬಂದಿ ಎರಡು ವಾರ ಜಪಾನ್ನಲ್ಲಿಯೇ ಇದ್ದು ಆನೆಗಳನ್ನು ನೋಡಿಕೊಳ್ಳಲಿದ್ದಾರೆ. ಜಪಾನ್ನ ವಾತಾವರಣ ಮತ್ತು ಪರಿಸರಕ್ಕೆ ಹೊಂದಿಕೊಳ್ಳಲು ತರಬೇತಿ ನೀಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.