
ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕ ಬಿ.ಶಿವಣ್ಣ ಉದ್ಘಾಟಿಸಿದರು
ಆನೇಕಲ್ : ತಾಲ್ಲೂಕಿನ ಎರಡು ಕೈಗಾರಿಕಾ ಪ್ರದೇಶಗಳಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಮರಸೂರು ಗೇಟ್ನ ಆದಿತ್ಯ ಬಿರ್ಲಾ ಮಧುರ ಗಾರ್ಮೆಂಟ್ಸ್ ಮತ್ತು ಬೊಮ್ಮಸಂದ್ರ ಅರವಿಂದ್ ಗೌರ್ಮೆಂಟ್ ಹಾಗೂ ಜಾಕಿ ಗಾರ್ಮೆಂಟ್ಸ್ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಶಾಸಕ ಬಿ.ಶಿವಣ್ಣ ಮಾತನಾಡಿ, ತಾಲ್ಲೂಕಿನಲ್ಲಿ ಐದು ಕೈಗಾರಿಕಾ ಪ್ರದೇಶಗಳಿವೆ. ಬೆಳಗ್ಗೆಯಿಂದ ಸಂಜೆವರೆಗೂ ದುಡಿಯುವ ಕಾರ್ಮಿಕರಿಗೆ ಕೆಲಸ ಮಾಡುವ ಸ್ಥಳದಲ್ಲಿಯೇ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯಿಂದ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಒತ್ತಡದ ಜೀವನದಲ್ಲಿ ಕಾರ್ಮಿಕರು ತಮ್ಮ ಆರೋಗ್ಯ ಮರೆಯುತ್ತಾರೆ. ಮಧುಮೇಹ ರಕ್ತದೊತ್ತಡ, ಮೂಳೆ, ಸ್ತ್ರೀರೋಗ, ನೇತ್ರ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರು ತಪಾಸಣೆ ನಡೆಸಿದರು ಎಂದರು.
ತಾಲೂಕಿಗೆ ಇಎಸ್ಐ ಆಸ್ಪತ್ರೆ ಅವಶ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ಚಂದಾಪುರ ರಸ್ತೆ ಈಗಲೂರು ಗ್ರಾಮದಲ್ಲಿ ಇಎಸ್ಐ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿಗೆ ವೇಗ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ತಾಲ್ಲೂಕಿನ ಐದು ಕೈಗಾರಿಕೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಈ ಭಾಗದಲ್ಲಿದ್ದು ಅವರಿಗೆ ಆರೋಗ್ಯ ಸೇವೆ ದೊರಕಿಸುವ ನಿಟ್ಟಿನಲ್ಲಿ ಇಎಸ್ಐ ಆಸ್ಪತ್ರೆ ಪಾತ್ರ ಪ್ರಮುಖವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಗೌಡ, ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಚಾಲಕ ಶ್ರೀನಿವಾಸ್, ಸಂದೀಪ್ ಕುಮಾರ್, ಮುಖಂಡರಾದ ಭಾರ್ಗವ್ ಶ್ರೀನಾಥ್ ರೆಡ್ಡಿ, ಸೊಪ್ಪಳ್ಳಿ ಮಂಜುನಾಥ್ ರೆಡ್ಡಿ, ಗೋಪಾಲ್, ಬನಹಳ್ಳಿ ಅಭಿ, ಪ್ರವೀಣ್ ರಾಜಣ್ಣ ಅಬ್ದುಲ್ ಮುಜೀರ್ ಜಾನ್ ಆಶಾ ಉಮಾದೇವಿ ಭಾಗ್ಯ ಇದ್ದರು.