
ಆನೇಕಲ್: ರಾಜ್ಯ ಸರ್ಕಾರ ಶಾಶ್ವತ ಯೋಜನೆಗಳತ್ತ ಹೆಚ್ಚು ಗಮನಹರಿಸಬೇಕು. ರಾಜ್ಯ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳನ್ನು ತುಂಬಿಸಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಅರಣ್ಯ ಇಲಾಖೆಯಲ್ಲಿ ಆನೆಗಳನ್ನು ಮತ್ತೆ ಕಾಡಿಗೆ ಓಡಿಸಲು ಸಹ ಸಿಬ್ಬಂದಿ ಇಲ್ಲ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಭಾನುವಾರ ತಾಲ್ಲೂಕಿನ ಸಮಂದರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮೆಡಿಕಲ್ ಸ್ಟೋರ್ಗಿಂತ ಬಾರ್ ಹೆಚ್ಚಾಗುತ್ತಿದೆ. ಮದ್ಯಪಾನ ಮತ್ತು ಧೂಮಪಾನದಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಹಾಗಾಗಿ ಈ ದುರಾಭ್ಯಾಸಗಳನ್ನು ಬಿಡಬೇಕು. ಸರ್ಕಾರ ಇದರ ವಿರುದ್ಧ ಜಾಗೃತಿ ಮೂಡಿಬೇಕು. ಭಾರತದಲ್ಲಿ 48 ಕೋಟಿ ಮದ್ಯದ ಬಾಕ್ಸ್ ಮಾರಾಟವಾಗುತ್ತಿದೆ. ಈ ಪೈಕಿ ಶೇಕಡ 60ರಷ್ಟು ಮಧ್ಯ ಕರ್ನಾಟಕದಲ್ಲಿಯೇ ಖರ್ಚಾಗುತ್ತಿರುವುದು ದುಃಖದ ಸಂಗತಿ ಎಂದರು.
ರಾಜಕಾರಣಿಗಳು ಚುನಾವಣೆಗೆ ಮಾತ್ರ ಸೀಮಿತವಾಗದೆ, ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸುವ ರಾಷ್ಟ್ರಕಾರಣಿಯಾಗಬೇಕು. ಚುನಾವಣೆಗಳಲ್ಲಿ ಮಾತ್ರ ರಾಜಕೀಯ ಮಾಡಬೇಕು. ಚುನಾವಣೆ ಬಳಿಕ ಅಭಿವೃದ್ಧಿ ಮಾಡಬೇಕು. ಇದು ರಾಜಕೀಯ ಸಂಸ್ಕಾರವಾಗಿದೆ ಎಂದು ಹೇಳಿದರು.
ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಯುವ ರಾಜಕಾರಣಿಗಳಿಗೆ ಸಂಸ್ಕಾರ ಸೇವೆ ಮತ್ತು ಬದ್ಧತೆಯ ಪರಿಕಲ್ಪನೆ ನೀಡಿದ ಅಟಲ್ ಬಿಹಾರಿ ವಾಜಪೇಯಿ ಅವರ ಸಿದ್ಧಾಂತಗಳು ಮಾದರಿಯಾಗಿದೆ. ಯುವರಾಜಕಾರಣಿಗಳು ತಮ್ಮ ಬಿಡುವಿನ ವೇಳೆ ಮತ್ತು ರಜೆ ದಿನವನ್ನು ಸೇವೆಗಾಗಿ ಮೀಸಲಿಡಬೇಕು. ಸ್ವಚ್ಛತೆ ಶ್ರಮದಾನದ ಮೂಲಕ ತಮಗೆ ಮತ ನೀಡಿದ ಮತದಾರರ ಋಣ ತೀರಿಸಬೇಕು ಎಂದರು.
ವಿಧಾನಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಎಂ. ಯಂಗಾರೆಡ್ಡಿ, ಆನೇಕಲ್ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಅಶೋಕ್ ರೆಡ್ಡಿ, ಮುಖಂಡರಾದ ಟಿ.ವಿ.ಬಾಬು, ಶಿವಪ್ಪ, ಬನಹಳ್ಳಿ ಮುನಿರೆಡ್ಡಿ, ಅತ್ತಿಬೆಲೆ ಬಸವರಾಜು, ತಿಲಕ್ ಗೌಡ, ದೊಡ್ಡಹಾಗಡೆ ಶಂಕರ್, ಜಯಪ್ರಕಾಶ್, ಬಿ.ನಾಗರಾಜು, ಸತೀಶ್, ರಾಮಕೃಷ್ಣ, ಕೋದಂಡರಾಮು, ಗುಡ್ಡನಹಳ್ಳಿ ಎಂ.ಮುನಿಯಪ್ಪ, ನಾಗೇಶ್, ಹರೀಶ್ ಗೌಡ, ನಂಜುಂಡಪ್ಪ, ಸೋಮಶೇಖರ್ ರೆಡ್ಡಿ, ಮಧು, ಓಂಕಾರ್, ಸುಮ ಮೂರ್ತಿ, ಅಪ್ಪಣ್ಣಚಾರಿ, ಮೂರ್ತಿ ಗೌಡ, ಪ್ರವೀಣ್, ಆಶಾ ಸುರೇಶ್ ಇದ್ದರು.
ಕೇಂದ್ರ ಸರ್ಕಾರ ಅಭಿವೃದ್ಧಿಗೆ ಹಾಗೂ ಕೃಷಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ರಾಗಿ ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ರಾಗಿಗೆ ನೀಡಿದಷ್ಟೇ ಬೆಂಬಲ ಬೆಲೆಯನ್ನು ಭತ್ತಕ್ಕೆ ನೀಡಬೇಕು.ಡಾ.ಸಿ.ಎನ್. ಮಂಜುನಾಥ್, ಸಂಸದ
ಆನೇಕಲ್ ರೈಲು ನಿಲ್ದಾಣ ಅಭಿವೃದ್ಧಿ
ಆನೇಕಲ್ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಜನವರಿ ಮೊದಲ ವಾರದಲ್ಲಿ ಆನೇಕಲ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಆನೇಕಲ್ ಅತ್ತಿಬೆಲೆ ಭಾಗದ ಜನತೆಗೆ ಹೆಚ್ಚು ಸಮಸ್ಯೆಯಾಗಿರುವ ಹಾಲದೇನಳ್ಳಿ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಗೃಹಲಕ್ಷ್ಮಿ ಹಣ ದುರಪಯೋಗ ರಾಜ್ಯದಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಕುರ್ಚಿಗಾಗಿ ಕಾದಾಡುತ್ತಾ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಇದರ ಪರಿಣಾಮ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಈ ಹಿಂದೆ ವಾಲ್ಮೀಕಿ ನಿಗಮದ ಅನುದಾನದ ಹಣ ದುರುಪಯೋಗವಾಗಿತ್ತು. ಇದೀಗ ಗೃಹಲಕ್ಷ್ಮಿ ಯೋಜನೆಯ ಹಣ ಸಹ ದುರುಪಯೋಗ ಆಗಿರುವ ಬಗ್ಗೆ ಅನುಮಾನ ಹೆಚ್ಚಾಗಿವೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.